ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ ಪದದ ಬಗ್ಗೆ ಈ ಕೆಳಗಿನ ಮಾದರಿಯಲ್ಲಿ ವಿವರಿಸಲಾಗುವುದು. ಈದಿನ ಓದುಗರಿಗಾಗಿ ಅಲ್ಲಮನ ಅರಿವು…
ನಷ್ಟಸಂತಾನ
ಕಿಚ್ಚಿನ ದೇವನು, ಕೆಂಡದ ದೇವನು,
ಮಾರಿಯ ದೇವನು, ಮಸಣದ ದೇವನು,
ತಿರುಕ ಗೊರವನೆಂದು ಅಲ್ಲಲ್ಲಿ ಒಂದೊಂದನಾಡುತ್ತಿಪ್ಪರಯ್ಯಾ.
ಈ ಮಾತುಗಳೊಂದೂ ಅಲ್ಲ.
ನಾ ನಿಮ್ಮ ಪೂಜಿಸಿ ನಷ್ಟಸಂತಾನವಾಗಿ, ಬಟ್ಟಬಯಲಲ್ಲಿ ಬಿದ್ದು ಕೆಟ್ಟೆನು
ಗುಹೇಶ್ವರಾ.
ವಚನಾರ್ಥ:
ಅಗ್ನಿನೇತ್ರವ ತೆರೆದು ಜ್ವಾಲೆಗಳ ಹರಿಸಿ ಕಾಮನನ್ನು ಸುಟ್ಟ ಮಾದೇವನೇ ಕಿಚ್ಚಿನ ದೇವ. ಕ್ರೋಧದ ಕೆಂಡದಂತಿರುವ ವೀರಭದ್ರನನ್ನು ಸೃಷ್ಟಿಸಿದ ಮಾದೇವ ಕೆಂಡದ ದೇವ. ಪ್ರಳಯಕಾಲದಲ್ಲಿ ಸರ್ವನಾಶ ಮಾಡುವವನು ಮಾರಿಯ ಮಾದೇವ. ಸ್ಮಶಾನವಾಸಿಯಾದವನು ಮಸಣದ ಮಾದೇವ. ಬ್ರಹ್ಮಚಾರಿ ಸಂನ್ಯಾಸಿಯ ವೇಷ ಧರಿಸಿ ತಪಸ್ವಿನಿಯಾದ ಗಿರಿಜೆಯ ಸಂಧಿಸಿ ಭಿಕ್ಷಾಟನೆ ಲೀಲೆಗೈದ ಮಾದೇವನು ತಿರುಕ ಗೊರವ. ಹೀಗೆ ಆ ಮಾದೇವನನ್ನು ಒಂದೊಂದು ಬಗೆಯಲ್ಲಿ ಕರೆವರು. ಈ ಮಾತುಗಳೊಂದೂ ಅಲ್ಲ. ಮಾದೇವನ ವಿವಿಧ ಕಥಾರೂಪಗಳಾವುವೂ ಮುಖ್ಯವಲ್ಲ. ನಾನು ನಿನ್ನೆಲ್ಲಾ ರೂಪಗಳನ್ನು ಲಕ್ಷಿಸದೆ ಏಕೋಭಾವದಿಂದ ನಿನ್ನನ್ನು ಪೂಜಿಸಿ ಜನ್ಮ ಪುನರ್ಜನ್ಮಗಳ ಹಂಗಿಲ್ಲದೆ ಬಟ್ಟ ಬಯಲಿನಲ್ಲಿ ಲೀನನಾಗಿ ಕೆಟ್ಟೆನು ಅಂದರೆ ನಿರ್ಬಯಲಾದೆನು.
ಪದ ಪ್ರಯೋಗಾರ್ಥ:
ನಷ್ಟಸಂತಾನ ಎಂದರೆ ಸಂತಾನ ನಷ್ಟನಾದವನು ಎಂದರೆ ಪುನರ್ಜನ್ಮ ಇಲ್ಲದವನು ಎಂದರ್ಥ. ಮರುಹುಟ್ಟು ಇಲ್ಲದವನು. ಶರಣ ಚಿಂತನೆಯಲ್ಲಿ ಪುನರ್ಜನ್ಮದ ಕಲ್ಪನೆಯಿಲ್ಲ. ಪುನರ್ಜನ್ಮಕ್ಕೆ ಮೂಲ ಧಾತುವಾದ ಪಾಪ ಕರ್ಮಗಳ ಸಿದ್ಧಾಂತವಿಲ್ಲ. ಕಾಯಕವೇ ಕೈಲಾಸ ಎಂಬ ಕಾಯಕ ಸಿದ್ಧಾಂತ ಮಾತ್ರ. ಪುನರ್ಜನ್ಮವನ್ನು ಸ್ಪಷ್ಟವಾಗಿ ಅಲ್ಲಗಳೆದ ಶರಣರು “ಜನ್ಮಜನ್ಮಕ್ಕೆ ಹೋಗಲೀಯದೆ ‘ಸೋಹಂ’ ಎಂದೆನಿಸದೆ ‘ದಾಸೋಹಂ’ ಎಂದೆನಿಸಯ್ಯಾ” ಎಂದವರು. ದಾಸೋಹವೆಂಬ ವಿತರಣೆ ವ್ಯವಸ್ಥೆಯ ಕಟ್ಟಿ ಸರ್ವರಿಗೂ ಸಮ ಪಾಲು ಸರ್ವರಿಗೂ ಸಮಬಾಳು ಅಂದವರು. ನಷ್ಟಸಂತಾನರಾಗಿ ಜನ್ಮ ಪುನರ್ಜನ್ಮಗಳ ಕರ್ಮ ಭಾದೆಯ ಭಯವಿಲ್ಲದೆ ಬದುಕಿದವರು. ಇಂತಹ ಚಿಂತನೆಯ ನೇತೃತ್ವ ವಹಿಸಿಕೊಂಡವನು ಅಲ್ಲಮ. ಅನುಭವ ಮಂಟಪದ ಸೂತ್ರಧಾರಿ. ಶೂನ್ಯ ಸಿಂಹಾಸನಾಧೀಶ್ವರ. ನಷ್ಟಸಂತಾನಿ. ಹಾಗಾಗಿ ನಷ್ಟಸಂತಾನ ಎಂಬುದು ಈ ವಚನದಲ್ಲಿ ಮಾಡಿರುವ ಅಲ್ಲಮನ ಅನನ್ಯ ಪದ ಪ್ರಯೋಗ.
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಅನುಪಮಸುಖಿ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ನೀರಲಾದ ನಿರ್ಮಿತಂಗಳು
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಹೊದಕುಳಿ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಅನುಪಮಸುಖಿ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಆಶಾಪಾಶ ವಿರಹಿತರು
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಮಡದಿಯರ ಒಲುಮೆ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಬಗೆದು ಬಿತ್ತಿದ ಬ್ರಹ್ಮಬೀಜ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ತಾನಿದ್ದಲ್ಲಿ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ನಿದ್ರೆಯೆಂಬ ಕಾಳೋರಗ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಕೀಲು ಮಡಗಿದಾತ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಮಾದುದು ಮಾದುದಲ್ಲ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಮಾಯದ ಮಂಜು
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ದಳದುಳಿ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಬಯಲು

ಹರಿಹರ ಶಿವಕುಮಾರ್
ಲೇಖಕ, ವೃತ್ತಿಯಿಂದ ಚಾರ್ಟರ್ಡ್ ಅಕೌಂಟೆಂಟ್. ಲೆಕ್ಕಪರಿಶೋಧನೆ ಮತ್ತು ತೆರಿಗೆ ವಿಚಾರಗಳಲ್ಲಿ ಪರಿಣತಿ. ಕನ್ನಡದಲ್ಲಿ ಕಂಪ್ಯೂಟರ್ ಬಳಕೆ ಇವರ ಹವ್ಯಾಸ. ಕನ್ನಡ ಭಾಷೆ ಮತ್ತು ಸಾಹಿತ್ಯದಲ್ಲಿ ಆಸಕ್ತರು. ಶಿವಮೊಗ್ಗ ಜಿಲ್ಲೆಯವರು, ಸದ್ಯ ಬೆಂಗಳೂರಿನಲ್ಲಿ ನೆಲೆ.