ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ ಪದದ ಬಗ್ಗೆ ಈ ಕೆಳಗಿನ ಮಾದರಿಯಲ್ಲಿ ವಿವರಿಸಲಾಗುವುದು. ಈದಿನ ಓದುಗರಿಗಾಗಿ ಅಲ್ಲಮನ ಅರಿವು…
ಶತಕೋಟಿ ಸೂರ್ಯರು
ನಿಮ್ಮ ತೇಜವ ನೋಡಲೆಂದು
ಹೆರಸಾರಿ ನೋಡುತ್ತಿರಲು
ಶತಕೋಟಿ ಸೂರ್ಯರು
ಮೂಡಿದಂತೆ ಇರ್ದುದಯ್ಯಾ! ಮಿಂಚಿನಬಳ್ಳಿಯ ಸಂಚವ ಕಂಡಡೆ,
ಎನಗಿದು ಸೋಜಿಗವಾಯಿತ್ತು!
ಗುಹೇಶ್ವರಾ
ನೀನು ಜ್ಯೋತಿರ್ಲಿಂಗವಾದಡೆ
ಉಪಮಿಸಿ ನೋಡಬಲ್ಲವರಿಲ್ಲಯ್ಯಾ.
ಪದಾರ್ಥ:
ಹೆರಸಾರಿ = ಹೆಜ್ಜೆಯಿಟ್ಟು
ಸಂಚವ = ಗೊಂಚಲು
ಉಪಮಿಸಿ = ಹೋಲಿಸಿ
ವಚನಾರ್ಥ:
ಜ್ಯೋತಿರ್ಲಿಂಗ ಎಂದರೆ ಬೆಳಕನ್ನು ಹೊರಸೂಸುವ ಪ್ರಕಾಶಮಾನವಾದ ಕಿರಣಗಳನ್ನು ಬಿಂಬಿಸುವ ಲಿಂಗ ಸ್ವರೂಪ. ಪ್ರಾಚೀನ ಗ್ರಂಥಗಳ ಪ್ರಕಾರ, ಸುಮಾರು 64 ಜ್ಯೋತಿರ್ಲಿಂಗಗಳಿವೆ, ಅವುಗಳಲ್ಲಿ ಹನ್ನೆರಡು ಬಹಳ ಪ್ರಸಿದ್ಧವಾಗಿವೆ. ಈ ಲಿಂಗಗಳು ಸ್ವಯಂ-ಉಗಮವಾದವುಗಳು ಎಂದು ಹೇಳಲಾಗುತ್ತದೆ. ಒಂದು ಜ್ಯೋತಿರ್ಲಿಂಗದ ತೇಜಸ್ಸು ಹೇಗಿರುತ್ತದೆ ಎಂದರೆ ನೂರು ಕೋಟಿ ಸೂರ್ಯರು ಒಟ್ಟಿಗೇ ಬೆಳಗಿದಂತೆ. ಮಿಂಚಿನ ಬಳ್ಳಿಗಳು ಗೊಂಚಲು ಗೊಂಚಲಾಗಿ ಗಗನದಲ್ಲಿ ಒಮ್ಮೆಲೇ ಮಿಂಚಿ ಮರೆಯಾದಂತೆ. ಅಲ್ಲಮನ ಗುಹೇಶ್ವರ ಜ್ಯೋತಿರ್ಲಿಂಗವೇ. ಅದನ್ನು ಮತ್ತೊಂದಕ್ಕೆ ಹೋಲಿಕೆ ಮಾಡಲಾಗದು. ಅಲ್ಲಮನ ಅಂತ್ಯ ಶ್ರೀಶೈಲದ ಕದಳಿಯಲ್ಲಿ ಆಗಿದೆ ಎಂದು ಹೇಳಲಾಗುವ ಸ್ಥಳದಲ್ಲಿ ಇರುವ ಶ್ರೀಶೈಲ ಮಲ್ಲಿಕಾರ್ಜುನ ಲಿಂಗ ಹನ್ನೆರಡು ಜ್ಯೋತಿರ್ಲಿಂಗಗಳಲ್ಲೊಂದು.
ಪದಪ್ರಯೋಗಾರ್ಥ:
ವಿಜ್ಞಾನದ ಪ್ರಕಾರ ಸೂರ್ಯನು ಸೌರಮಂಡಲದ ಒಂದು ನಕ್ಷತ್ರ. ಸೂರ್ಯ ಎಂದರೆ ಅತ್ಯುಚ್ಚ ಬೆಳಕು ಎಂಬ ಅರ್ಥವಿದೆ. ಸೂರ್ಯನ ಬೆಳಕು ಭೂಮಿಯ ಎಲ್ಲಾ ಜೀವಿಗಳಿಗೂ ಆಧಾರವಾಗಿದ್ದು, ಭೂಮಿಯ ಮೇಲೆ ಅಗಾಧ ಪ್ರಭಾವ ಬೀರುತ್ತದೆ. “ಬಿಸಿಲಿದು ಬರಿ ಬಿಸಿಲಲ್ಲವೋ ಸೂರ್ಯನ ಕೃಪೆ ಕಾಣೋ. ಸೂರ್ಯನು ಬರಿ ರವಿಯಲ್ಲವೋ, ಆ ಭ್ರಾಂತಿಯ ಮಾಣೋ” ಎಂಬ ಕುವೆಂಪುರವರ ಪ್ರಸಿದ್ದ ಕವಿತೆಯಲ್ಲಿ ಕವಿಯು ಸೂರ್ಯನು ಸೂಸುವ ಬೆಳಕಿನ ಕಿರಣಗಳಲ್ಲಿ ದೇವರನ್ನು ಕಾಣುತ್ತಾನೆ. ಹಾಗೆಯೇ ಅಲ್ಲಮ ಗುಹೇಶ್ವರನ ತೇಜಸ್ಸನ್ನು ನೋಡಲೆಂದು ಹೋದಾಗ ಅಲ್ಲಿ ಒಂದಲ್ಲ ಶತಕೋಟಿ ಸೂರ್ಯರು ಒಮ್ಮೆಲೇ ಮೂಡಿ ಪ್ರಜ್ವಲಿಸಿದಂತಾಗಿ ದಿವ್ಯ ಸೋಜಿಗವೊಂದು ಸೃಷ್ಟಿಯಾಗುತ್ತದೆ. ಶತಕೋಟಿ ಸೂರ್ಯರು ಎಂಬ ಪದ ಕಲ್ಪನೆಯೇ ಅತ್ಯಂತ ಪ್ರಖರವಾಗಿದೆ. ಅಲ್ಲಮನ ವಿವಿಧ ವಚನಗಳಲ್ಲಿ ಹೀಗೆ ಸಂಖ್ಯೆಗಳು ಹೇರಳವಾಗಿ ಬಳಕೆಯಾಗಿರುವುದನ್ನು ಕಾಣಬಹುದು. ಅಲ್ಲಮನ ಲೆಕ್ಕಾಚಾರದಲ್ಲಿ ಒಂದು ಜ್ಯೋತಿರ್ಲಿಂಗದ ಪ್ರಭೆಯು ಶತಕೋಟಿ ಸೂರ್ಯರು ಹೊಮ್ಮಿಸುವ ಕಿರಣಗಳಿಗೆ ಸಮನಾದುದು.
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಅನುಪಮಸುಖಿ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ನೀರಲಾದ ನಿರ್ಮಿತಂಗಳು
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಹೊದಕುಳಿ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಅನುಪಮಸುಖಿ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಆಶಾಪಾಶ ವಿರಹಿತರು
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಮಡದಿಯರ ಒಲುಮೆ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಬಗೆದು ಬಿತ್ತಿದ ಬ್ರಹ್ಮಬೀಜ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ತಾನಿದ್ದಲ್ಲಿ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ನಿದ್ರೆಯೆಂಬ ಕಾಳೋರಗ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಕೀಲು ಮಡಗಿದಾತ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಮಾದುದು ಮಾದುದಲ್ಲ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಮಾಯದ ಮಂಜು
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ದಳದುಳಿ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಬಯಲು

ಹರಿಹರ ಶಿವಕುಮಾರ್
ಲೇಖಕ, ವೃತ್ತಿಯಿಂದ ಚಾರ್ಟರ್ಡ್ ಅಕೌಂಟೆಂಟ್. ಲೆಕ್ಕಪರಿಶೋಧನೆ ಮತ್ತು ತೆರಿಗೆ ವಿಚಾರಗಳಲ್ಲಿ ಪರಿಣತಿ. ಕನ್ನಡದಲ್ಲಿ ಕಂಪ್ಯೂಟರ್ ಬಳಕೆ ಇವರ ಹವ್ಯಾಸ. ಕನ್ನಡ ಭಾಷೆ ಮತ್ತು ಸಾಹಿತ್ಯದಲ್ಲಿ ಆಸಕ್ತರು. ಶಿವಮೊಗ್ಗ ಜಿಲ್ಲೆಯವರು, ಸದ್ಯ ಬೆಂಗಳೂರಿನಲ್ಲಿ ನೆಲೆ.