ಎಸ್ಸೆಸ್ಸೆಲ್ಸಿ ಫಲಿತಾಂಶ ಪ್ರಕಟಗೊಂಡಿದ್ದು, ರಾಜ್ಯಕ್ಕೆ ನಾಲ್ವರು ಪ್ರಥಮ ಸ್ಥಾನಗಳಿಸಿದ್ದಾರೆ. 2021-22ನೇ ಸಾಲಿನಲ್ಲಿ ರಾಜ್ಯದ 145 ವಿದ್ಯಾರ್ಥಿಗಳು ಶೇ.100 ಫಲಿತಾಂಶ ಗಳಿಸಿದ್ದರು. ಈ ಬಾರಿ ನಾಲ್ಕಕ್ಕೆ ಕುಸಿದಿದೆ.
ಪ್ರಥಮ ಸ್ಥಾನಗಳಿಸಿದ ವಿದ್ಯಾರ್ಥಿಗಳು
- ಟಾಪರ್ಗಳಲ್ಲಿ ಒಬ್ಬರಾದ ಯಶಸ್ ಚಿಕ್ಕಬಳ್ಳಾಪುರದವರಾಗಿದ್ದು, ಮಜ್ಜಿಗೆ ಹೊಸಹಳ್ಳಿಯವರು. ತಂದೆ ಕೃಷಿಕ ಮತ್ತು ಜೀವ ವಿಮಾ ನಿಗಮದಲ್ಲಿ ಏಜೆಂಟ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.
- ರಾಜ್ಯಕ್ಕೆ ಪ್ರಥಮ ಸ್ಥಾನ ಬಂದ ಮತ್ತೊಬ್ಬ ವಿದ್ಯಾರ್ಥಿ ಅನುಪಮಾ ಶ್ರೀಶೈಲ ಹಿರೇಹೊಳಿ, ಬೆಳಗಾವಿ ಜಿಲ್ಲೆಯ ಸವದತ್ತಿಯವರು. ಅನುಪಮಾ ಅವರು ಪ್ರತಿನಿತ್ಯ ರಾತ್ರಿ ಹನ್ನೆರಡರ ತನಕ ಅಭ್ಯಾಸ ಮಾಡುತ್ತಿದ್ದರು. ಸವದತ್ತಿ ದೇವಸ್ಥಾನದಲ್ಲಿ ಸೇವೆ ಸಲ್ಲಿಸುತ್ತಿದ್ದ ತಂದೆ ಕಳೆದ ವರ್ಷ ಮೃತಪಟ್ಟಿದ್ದಾರೆ. ಒಬ್ಬಂಟಿಯಾಗಿದ್ದ ತಾಯಿ ಕಣ್ಣಿನ ಆಸ್ಪತ್ರೆಯಲ್ಲಿ ಕೆಲಸ ಮಾಡಿ ತಮ್ಮ ಮಗಳು ಉತ್ತುಂಗ ಸ್ಥಾನಕ್ಕೆ ಬರಲು ಕಾರಣರಾಗಿದ್ದಾರೆ.
- ಬೆಂಗಳೂರಿನವರಾದ ಭೂಮಿಕಾ ಫೈ ಸಹ ರಾಜ್ಯಕ್ಕೆ ಪ್ರಥಮ ಸ್ಥಾನ ಬಂದಿದ್ದಾರೆ. ಖಾಸಗಿ ಶಾಲೆಯ ವಿದ್ಯಾರ್ಥಿಯಾಗಿದ್ದಾರೆ. ಯಾವುದೇ ಟ್ಯೂಶನ್ ಪಡೆಯುತ್ತಿರಲಿಲ್ಲ. ಮನೆಯಲ್ಲಿಯೇ ಏಳೆಂಟು ಗಂಟೆಗಳ ಕಾಲ ಅಭ್ಯಾಸ ಮಾಡುತ್ತಿದ್ದೆ ಎಂದು ಪ್ರಥಮ ಸ್ಥಾನ ಪಡೆದ ಗುಟ್ಟು ಬಿಚ್ಚಿದ್ದಾರೆ.
- ವಿಜಯಪುರದವರಾದ ಭೀಮನ ಗೌಡ ಅನುಮಂತ ಗೌಡ ಬಿರಾಧರ್ ಪಾಟೀಲ್ ರಾಜ್ಯಕ್ಕೆ ಪ್ರಥಮ ಸ್ಥಾನ ಬಂದ ನಾಲ್ವರಲ್ಲಿ ಒಬ್ಬರಾಗಿದ್ದಾರೆ. ರೈತ ಕುಟುಂಬದವರು.
ಹೆಣ್ಮಕ್ಕಳೇ ಮೇಲು ಗೈ
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಜೀವನದ ಮೊದಲ ಘಟ್ಟವಾಗಿದೆ. ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಒಟ್ಟಾರೆಯಾಗಿ ಬಾಲಕಿಯರು 4,09,134 ಹಾಜರಾಗಿದ್ದರು, ಅವರಲ್ಲಿ 3,59,511 ಉತ್ತೀರ್ಣರಾಗಿದ್ದಾರೆ. ಎಂದಿನಂತೆ ಬಾಲಕಿಯರೇ ಶೇ.87.87ರಷ್ಟು ಫಲಿತಾಂಶ ಗಳಿಸಿ, ‘ಹೆಣ್ಮಕ್ಳೇ ಸ್ಟ್ರಾಂಗು’ ಎನಿಸಿಕೊಂಡಿದ್ದಾರೆ. ಆದರೂ, 2021-22 ನೇ ಸಾಲಿನ ಫಲಿತಾಂಶಕ್ಕೆ ಹೋಲಿಸಿಕೊಂಡರೆ ಈ ಬಾರಿ ಕೊಂಚ ಇಳಿಕೆ ಕಂಡಿದೆ. ಕಳೆದ ವರ್ಷ ಶೇ. 89.98 ಬಾಲಕಿಯರು ಉತ್ತೀರ್ಣರಾಗಿದ್ದರು.
ಈ ಸುದ್ದಿ ಓದಿದ್ದೀರಾ?: ಎಸ್ಸೆಸ್ಸೆಲ್ಸಿ ಪರೀಕ್ಷೆ| ಶೇ.100 ಫಲಿತಾಂಶ ಪಡೆದ ನಾಲ್ಕು ವಿದ್ಯಾರ್ಥಿಗಳು
ಬಾಲಕರ ಫಲಿತಾಂಶ
2022-23ನೆ ಸಾಲಿನಲ್ಲಿ 4,45,828 ಬಾಲಕರು ಪರೀಕ್ಷೆಗೆ ಹಾಜರಾಗಿದ್ದರು. ಅವರಲ್ಲಿ 3,59,438 ಉತ್ತೀರ್ಣರಾಗಿದ್ದರು. ಒಟ್ಟು ಶೇ.80.62ರಷ್ಟು ಫಲಿತಾಂಶವನ್ನು ಬಾಲಕರು ಗಳಿಸಿದ್ದಾರೆ. 2021-22ನೇ ಸಾಲಿನಲ್ಲಿ ಶೇ.80ರಷ್ಟು ಮಂದಿ ಉತ್ತೀರ್ಣರಾಗಿದ್ದರು.
ರಾಜಕೀಯ ನಾಯಕರಿಂದ ವಿದ್ಯಾರ್ಥಿಗಳಿಗೆ ಹಾರೈಕೆ
ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಇಂಧನ ಸಚಿವ ವಿ ಸುನೀಲ್ ಕುಮಾರ್ ಅವರು ಹಾರೈಸಿದ್ದು, ಅನುತ್ತೀರ್ಣರಾದವರಿಗೆ ಆತ್ಮಸ್ಥೈರ್ಯ ತುಂಬಿ ಟ್ವೀಟ್ ಮಾಡಿದ್ದಾರೆ.
“ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶದಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆ ಉತ್ತಮ ಸಾಧನೆ ಮಾಡಿದ್ದು, ಶೇ.96.15 ಫಲಿತಾಂಶದೊಂದಿಗೆ ರಾಜ್ಯದಲ್ಲೇ 5ನೇ ಸ್ಥಾನ ಗಳಿಸಿದೆ ಹಾಗೂ ಚಿಕ್ಕಬಳ್ಳಾಪುರದ ಮಜ್ಜಿಗೆ ಹೊಸಹಳ್ಳಿಯ ಎನ್.ಯಶಸ್ ಗೌಡ 625ಕ್ಕೆ 625 ಅಂಕಗಳೊಂದಿಗೆ ರಾಜ್ಯಕ್ಕೇ ಮೊದಲ ಸ್ಥಾನ ಪಡೆದು ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಅವರಿಗೆ ಹೃದಯಪೂರ್ವಕ ಅಭಿನಂದನೆಗಳು” ಎಂದು ಆರೋಗ್ಯ ಸಚಿವ ಸುಧಾಕರ್ ಟ್ವೀಟ್ ಮಾಡಿದ್ದಾರೆ.