ಸ್ವಯಂಘೋಷಿತ ಹಿಂದೂ ಧರ್ಮ ರಕ್ಷಕನಾಗಿ, ಗೋರಕ್ಷಣೆಯ ಹೆಸರಿನಲ್ಲಿ ಸಮಾಜದಲ್ಲಿ ಶಾಂತಿ ಕದಡುವ ಮತ್ತು ಬೆದರಿಕೆಯೊಡ್ಡುವ ಆರೋಪ ಎದುರಿಸುತ್ತಿರುವ ಪುನೀತ್ ಕೆರೆಹಳ್ಳಿ, ಸಾಮಾಜಿಕ ಮಾಧ್ಯಮಗಳಲ್ಲಿ ಬಳಸುತ್ತಿರುವ ಅಶ್ಲೀಲ ನಿಂದನೀಯ ಪದಗಳಿಗೆ ಸಂಬಂಧಿಸಿದಂತೆ ಎಫ್ಐಆರ್ ದಾಖಲಾಗಿದೆ.
ಕಾಂಗ್ರೆಸ್ ಮುಖಂಡರು ಹಾಗೂ ವಕೀಲರೂ ಆದ ಸೂರ್ಯ ಮುಕುಂದರಾಜ್ ಅವರ ವಿರುದ್ಧ ಅಶ್ಲೀಲ ಶಬ್ದಗಳಿಂದ ನಿಂದಿಸಿರುವ ಸಂಬಂಧ ತುಮಕೂರಿನ ಹೆಬ್ಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಬ್ಬೂರು ಪೊಲೀಸ್ ಠಾಣೆಯ ನ್ಯಾಯಾಲಯ ಕರ್ತವ್ಯದ ಸಿಬ್ಬಂದಿ ಎಚ್.ಸಿ. ಸಾಧಿಕ್ ಪಾಷಾ ಅವರು ಹಾಜರಾಗಿ, ನ್ಯಾಯಾಲಯವು ಪ್ರಕರಣ ದಾಖಲಿಸಲು ನೀಡಿದ ಅನುಮತಿ ಪತ್ರವನ್ನು ತಂದು ಠಾಣೆಗೆ ನೀಡಿದ್ದಾರೆ. ಅದರನ್ವಯ ಎಫ್ಐಆರ್ ದಾಖಲಿಸಲಾಗಿದೆ.
13-10-2023ರಂದು ಪುನೀತ್ ಕೆರೆಹಳ್ಳಿ ಎಂಬ ವ್ಯಕ್ತಿಯು ಸೂರ್ಯ ಮುಕುಂದರಾಜ್ ಅವರನ್ನು ಮತ್ತು ಅವರ ಸಹೋದ್ಯೋಗಿಗಳ ಬಗ್ಗೆ ಅವಹೇಳನಕಾರಿಯಾಗಿ, ಅವಾಚ್ಯ ಪದಗಳನ್ನು ಬಳಸಿ ಫೇಸ್ಬುಕ್ನಲ್ಲಿ ಪೋಸ್ಟ್ ಹಾಕಿದ್ದಾರೆ. ಪುನೀತ್ ಕೆರೆಹಳ್ಳಿಯ ಬೆಂಬಲಿಗರು ನಕಲಿ ಖಾತೆಗಳ ಮೂಲಕ ಬಂದು ಕೆಟ್ಟದ್ದಾಗಿ ಈ ಪೋಸ್ಟ್ಗೆ ಕಮೆಂಟ್ ಮಾಡಿರುತ್ತಾರೆ. ಪುನೀತ್ ಕೆರೆಹಳ್ಳಿಯು ವಕೀಲಿ ವೃತ್ತಿಗೆ ಅವಮಾನ ಮಾಡಿದ್ದಾರೆ ಎಂದು ದೂರು ವಿವರಿಸಲಾಗಿದೆ.
ಪುನೀತ್ ಕೆರೆಹಳ್ಳಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಅವರ ಫೇಸ್ ಬುಕ್ ಖಾತೆಯನ್ನು ನಿರ್ಬಂಧಿಸಿ ನ್ಯಾಯ ಒದಗಿಸಿಕೊಡಬೇಕು. ಎಫ್ಐಆರ್ ದಾಖಲಿಸಿಕೊಳ್ಳಲು ಅನುಮತಿ ನೀಡಬೇಕು ಎಂದು ತುಮಕೂರಿನ 4ನೇ ಅಧಿಕ ಸಿವಿಲ್ ಮತ್ತು 5ನೇ ಜೆ.ಎಂ.ಎಫ್.ಸಿ. ನ್ಯಾಯಾಲಯದಲ್ಲಿ ಮನವಿ ಮಾಡಲಾಗಿತ್ತು. ನ್ಯಾಯಾಲಯವು ಅನುಮತಿ ನೀಡಿದ್ದು, ಅದರ ಅನ್ವಯ ಐಪಿಸಿ ಸೆಕ್ಷನ್ 504ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಹಿಂದೂ ಧರ್ಮ ರಕ್ಷಣೆಯ ಹೆಸರಲ್ಲಿ ಸಕ್ರಿಯನಾಗಿರುವ ಪುನೀತ್ ಕೆರೆಹಳ್ಳಿ ತನ್ನ ವಿರೋಧಿಗಳ ಕುರಿತು ಅಶ್ಲೀಲ ಪದಗಳಲ್ಲಿ ಬರೆಯುವುದು, ಮಾತನಾಡುವುದು ಸಾಮಾನ್ಯವಾಗಿದೆ. ಲೈಂಗಿಕ ಅಲ್ಪಸಂಖ್ಯಾತರನ್ನು ಅಮಾನಿಸುವಂತಹ ’ನಪುಂಸಕ’ ಪದವನ್ನು ಪದೇ ಪದೇ ಬಳಸುತ್ತಿರುವುದನ್ನು ಕಾಣಬಹುದು. ಸಂಸ್ಕೃತಿಯ ಬಗ್ಗೆ ಮಾತನಾಡುವ ಪುನೀತ್ ಕೆರೆಹಳ್ಳಿ, ಬಳಸುವ ಭಾಷೆ ತೀರಾ ಸಂಸ್ಕೃತಿ ಹೀನವಾಗಿರುವುದು ಕಂಡುಬಂದಿದೆ.
ಬಿಜೆಪಿ ಅಧಿಕಾರದಲ್ಲಿದ್ದಾಗ 2013ರ ಮಾರ್ಚ್ ವೇಳೆ ದಾಖಲಾದ ವೇಶ್ಯಾವಾಟಿಕೆ ಧಂದೆ ಪ್ರಕರಣದಲ್ಲಿ ಪುನೀತ್ ಕೆರೆಹಳ್ಳಿ ಹೆಸರಿತ್ತು. ಪೊಲೀಸರ ನಿರ್ಲಕ್ಷ್ಯದಿಂದಾಗಿ ಪ್ರಕರಣ ದಿಕ್ಕುತಪ್ಪಿರುವ ಕುರಿತು ಆರೋಪಗಳು ಬಂದಿವೆ.
ವೇಶ್ಯಾವಾಟಿಕೆಯಲ್ಲಿ ಪಿಂಪ್ ಆಗಿ ಸಿಕ್ಕಿಬಿದ್ದಿದ್ದ ವ್ಯಕ್ತಿಯು ತಪ್ಪಿಸಿಕೊಂಡಿದ್ದು ಹೇಗೆ ಎಂಬ ಕುರಿತು ಚರ್ಚೆಗಳು ನಡೆಯುತ್ತಿವೆ. ಈ ವಿಚಾರವಾಗಿ ಮಾತನಾಡಿದವರ ಕುರಿತು ತಂದೆ, ತಾಯಿ, ಮಕ್ಕಳನ್ನೂ ಎಳೆದುತಂದು ಅಶ್ಲೀಲ ಪದಗಳಿಗಳಿಂದ ನಿಂದಿಸುವ ಕೆಲಸಕ್ಕೆ ಪುನೀತ್ ಕೆರೆಹಳ್ಳಿ ಮುಂದಾಗಿದ್ದನ್ನು ಕಾಣಬಹುದು. ಕನ್ನಡಪರ ಹೋರಾಟಗಾರ ಹರೀಶ್ ಭೈರಪ್ಪ ಮತ್ತು ಕಾಂಗ್ರೆಸ್ ಮುಖಂಡ ಸೂರ್ಯ ಮುಕುಂದರಾಜು ಅವರ ಬಗ್ಗೆ ಇತ್ತೀಚೆಗೆ ಫೇಸ್ಬುಕ್ನಲ್ಲಿ ಹಾಕುತ್ತಿದ್ದ ಪೋಸ್ಟ್ಗಳು ಅತ್ಯಂತ ತುಚ್ಛವಾಗಿದ್ದವು.
ಅಲ್ಲದೆ ವಿಧಾನಸೌಧಕ್ಕೆ ಕಲ್ಲು ಹೊಡೆಯುವುದಾಗಿ, ಬಸ್ಸಿಗೆ ಬೆಂಕಿ ಹಚ್ಚುವುದಾಗಿ ಬೆದರಿಕೆ ಹಾಕಿರುವ ಸಂಬಂಧ ಇತ್ತೀಚೆಗೆ ಮತ್ತೊಂದು ಪ್ರಕರಣ ಕೂಡ ದಾಖಲಾಗಿತ್ತು. ಹಿಂಸಾತ್ಮಕ ಕೃತ್ಯಗಳನ್ನು ನಡೆಸಿ ಸಾಮಾಜಿಕ ಸ್ಥಾಸ್ಥ್ಯ ಕೆಡಿಸುವ ಬೆದರಿಕೆಗಳನ್ನು ಪುನೀತ್ ಕೆರೆಹಳ್ಳಿ ಹಾಕಿರುವುದು ಚರ್ಚೆಗೆ ಗ್ರಾಸವಾಗಿದೆ.