ರಾಜ್ಯ ಚುನಾವಣೆಯಲ್ಲಿ ಮತದಾರರನ್ನು ಮತದಾನಕ್ಕೆ ಪ್ರೋತ್ಸಾಹಿಸಲು ಪ್ರವಾಸೋದ್ಯಮ ಇಲಾಖೆ ಮುಂದಾಗಿದ್ದು, ಅದಕ್ಕಾಗಿ ತನ್ನ ಅಧೀನದಲ್ಲಿರುವ ಹೋಟೆಲ್ನಲ್ಲಿನ ವಾಸ್ತವ್ಯಕ್ಕೆ 50% ರಿಯಾಯತಿ ನೀಡಿದೆ. ಆದರೆ, ಈ ಆಫರ್ ಯಾವಾಗ ಜಾರಿಯಾಗುತ್ತದೆ ಮತ್ತು ಯಾವಾಗ ಅಂತ್ಯವಾಗುತ್ತದೆ ಎಂಬ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ. ಅಲ್ಲದೆ, ಈ ಬಗ್ಗೆ ಇಲಾಖೆಯ ಅಧಿಕಾರಿಗಳಿಗೇ ಮಾಹಿತಿ ಇಲ್ಲದಿರುವುದು ಆಶ್ಚರ್ಯಕರವಾಗಿದೆ.
ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ನಿಯಮಿತವು ಪತ್ರಿಕಾ ಪ್ರಕಟಣೆ ಹೊರಡಿಸಿದೆ. ಅದರಲ್ಲಿ “ರಾಜ್ಯದ ಸಾರ್ವಜನಿಕರು ಮತ ಚಲಾವಣೆ ಮಾಡಿದ ನಂತರ ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿ ಬೆಟ್ಟದಲ್ಲಿರುವ ಮಯೂರ ಫೈನ್ ಟಾಪ್ ಹೋಟೆಲ್ನ ಕೊಠಡಿಗಳನ್ನು 50% ರಿಯಾಯತಿಯಲ್ಲಿ ಬುಕ್ ಮಾಡಿಕೊಳ್ಳಬಹುದು” ಎಂದು ಹೇಳಿದೆ.
“ರಾಜ್ಯದ ಮತದಾರರನ್ನು ಪ್ರೋತ್ಸಾಹಿಸುವ ಸಲುವಾಗಿ, ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದಿಂದ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಮತದಾನ ಮಾಡುವ/ ಮತ ಚಲಾಯಿಸುವ ಮತದಾರರು ಅಥವಾ ಸಾರ್ವಜನಿಕರಿಗೆ ನಿಗಮದ ಹೋಟೆಲ್ ಮಯೂರ ಫೈನ್ ಟಾಪ್, ನಂದಿಬೆಟ್ಟ ಘಟಕದಲ್ಲಿ ವಾಸ್ತವ್ಯ ಹೊಂದುವುದರ ಮೇಲೆ ಶೇ.50 ವಿಶೇಷ ರಿಯಾಯಿತಿ ನೀಡಲಾಗುತ್ತಿದೆ. ಈ ರಿಯಾಯಿತಿಯನ್ನು ಪಡೆಯಲಿಚ್ಛಿಸುವ ಸಾರ್ವಜನಿಕರು ಕಡ್ಡಾಯವಾಗಿ ಮತದಾನ ಮಾಡಿ, ಸೌಲಭ್ಯದ ಸದುಪಯೋಗ ಪಡೆದುಕೊಳ್ಳಬಹುದು” ಎಂದು ಪತ್ರಿಕಾ ಪ್ರಕಟಣೆಯಲ್ಲಿ ವಿವರಿಸಿದೆ.
ಆದರೆ, ಆ ಪ್ರಕಟಣೆಯ ಮಾಹಿತಿಯು ಅಸ್ಪಷ್ಟವಾಗಿದ್ದು, ಅದು ಇಲಾಖೆ ಹೊರಡಿಸಿರುವ ಪ್ರಕಟಣೆಯೇ ಎಂಬ ಅನುಮಾನವನ್ನು ಹುಟ್ಟುಹಾಕಿದೆ. ಪ್ರಕಟಣೆಯಲ್ಲಿ 50% ರಿಯಾಯತಿ ಆಫರ್ ಯಾವ ದಿನದಿಂದ ಜಾರಿಗೆ ಬರುತ್ತದೆ ಮತ್ತು ಯಾವ ದಿನದಂದು ಅಂತ್ಯವಾಗುತ್ತದೆ ಎಂಬ ಮಾಹಿತಿ ಇಲ್ಲ.
ಈ ಸುದ್ದಿ ಓದಿದ್ದೀರಾ?: ಚುನಾವಣೆಯ ಹೊತ್ತಲ್ಲೇ ಮಹತ್ವದ ಸಮೀಕ್ಷೆ; ಟಿವಿ ಚಾನೆಲ್ಗಳನ್ನು ಕನ್ನಡಿಗರು ತಿರಸ್ಕರಿಸುತ್ತಿದ್ದಾರೆ : ಇಲ್ಲಿದೆ ನೋಡಿ ಅಂಕಿ-ಅಂಶ, ಭಾಗ 1
ಈ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ಪತ್ರಿಕಾ ಪ್ರಕಟಣೆಯಲ್ಲಿ ನಮೂದಿಸಲಾಗಿದ್ದ ದೂರವಾಣಿ ಸಂಖ್ಯೆಗೆ ಈದಿನ.ಕಾಮ್ ಕರೆ ಮಾಡಿದಾಗ, ಕರೆ ಸ್ವೀಕರಿಸಿ ಮಾತನಾಡಿದ ಅಧಿಕಾರಿಯೊಬ್ಬರು, “ರಿಯಾಯತಿ ನೀಡಿರುವ ಬಗ್ಗೆ ನಮಗಿನ್ನು ಮಾಹಿತಿ ಸಿಕ್ಕಿಲ್ಲ. ಸೋಮವಾರ ಕರೆ ಮಾಡಿ, ತಿಳಿದುಕೊಂಡು ಹೇಳುತ್ತೇವೆ” ಎಂದು ಉತ್ತರಿಸಿದರು. ಅಂದರೆ, ಇಲಾಖೆ ನೀಡಿರುವ ಆಫರ್ ಬಗ್ಗೆ ಇಲಾಖೆಯ ಸಿಬ್ಬಂದಿಗಳಿಗೆ ತಿಳಿಯದಿರುವುದು ಆಶ್ಚರ್ಯ ಮತ್ತು ಪ್ರಕಟಣೆಯ ಬಗ್ಗೆ ಅನುಮಾನ ಹುಟ್ಟುಹಾಕಿದೆ.