- ರಾಜೀನಾಮೆ ಸಲ್ಲಿಸಿ 2 ವರ್ಷ ಕಳೆದರೂ ಆಗದ ಅಂಗೀಕಾರ
- ವೈದ್ಯನಾಗಿ ಸೇವೆ ಸಲ್ಲಿಸುತ್ತಿದ್ದ ಡಾ. ಚಂದ್ರು ಲಮಾಣಿ
ಶಿರಹಟ್ಟಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿಗೆ ಬಿಗ್ ರಿಲೀಫ್ ಸಿಕ್ಕಿದ್ದು, ಆರೋಗ್ಯ ಇಲಾಖೆಯು ಷರತ್ತುಬದ್ಧವಾಗಿ ರಾಜೀನಾಮೆ ಅಂಗೀಕರಿಸಿದೆ. ನಾಮಪತ್ರ ಸಲ್ಲಿಸಲು ಇಂದೇ ಕೊನೆ ದಿನವಾಗಿರುವುದರಿಂದ ಇಂದು ಸಂಜೆಯ ಒಳಗೆ ನಾಮಪತ್ರ ಸಲ್ಲಿಸಲಿದ್ದಾರೆ.
ಸರ್ಕಾರಿ ಸಿಬ್ಬಂದಿಗಳು ಚುನಾವಣೆಗೆ ಸ್ಪರ್ಧಿಸಬೇಕೆಂದು ತೀರ್ಮಾನ ಮಾಡಿದರೆ, ತಮ್ಮ ವೃತ್ತಿಗೆ ರಾಜೀನಾಮೆ ನೀಡಬೇಕು ಎಂಬ ನಿಯಮ ಚುನಾವಣಾ ಆಯೋಗದ ಮಾನದಂಡದಲ್ಲಿದೆ.
ಗದಗ ಜಿಲ್ಲೆ ಶಿರಹಟ್ಟಿ ಮೀಸಲು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ತೀರ್ಮಾನಿಸಿದ್ದ ಡಾ. ಚಂದ್ರು ಲಮಾಣಿ ಸರ್ಕಾರಿ ವೈದ್ಯ ಹುದ್ದೆಗೆ 2021 ಆ.31 ರಂದು ರಾಜೀನಾಮೆ ನೀಡಿದ್ದರು.
ಡಾ. ಚಂದ್ರು ರಾಜೀನಾಮೆ ಸಲ್ಲಿಸಿ 2 ವರ್ಷವಾದರೂ ಕೂಡ ಆರೋಗ್ಯ ಇಲಾಖೆ ರಾಜೀನಾಮೆ ಅಂಗೀಕರಿಸಿರಲಿಲ್ಲ. ಆದರೂ ಬಿಜೆಪಿ ಟಿಕೆಟ್ ಪಡೆದು ಚುನಾವಣೆಗೆ ಸ್ಪರ್ಧಿಸಲು ಸಿದ್ದತೆ ನಡೆಸಿದ್ದರು. ಇದಕ್ಕೆ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್ ಆಕ್ಷೇಪ ವ್ಯಕ್ತಪಡಿಸಿದ್ದರು.
ಈ ಸುದ್ದಿ ಓದಿದ್ದೀರಾ? : ಡಿಕೆಶಿ ವಿರುದ್ಧ ಮೊಯಿದ್ದೀನ್ ಬಾವಾ ವಾಗ್ದಾಳಿ : ಕಾಂಗ್ರೆಸ್ ತೊರೆದು ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕೆ
“ಡಾ. ಚಂದ್ರು ಲಮಾಣಿ ವಿರುದ್ಧ ಲೋಕಾಯುಕ್ತದಲ್ಲಿ ದೂರು ದಾಖಲಾಗಿದ್ದು, ಈ ಆರೋಪದಿಂದ ತಪ್ಪಿಸಿಕೊಳ್ಳಲು ರಾಜೀನಾಮೆ ನೀಡಿದ್ದಾರೆ. ರಾಜೀನಾಮೆ ಅಂಗೀಕಾರವಾಗದಿದ್ದರೂ ಚುನಾವಣೆಗೆ ಸ್ಪರ್ಧಿಸಲು ಸಿದ್ದತೆ ನಡೆಸುತ್ತಿದ್ದಾರೆ” ಎಂದು ಆಯುಕ್ತರಿಗೆ ಜಿಲ್ಲಾಧಿಕಾರಿ ಪತ್ರ ಬರೆದಿದ್ದರು.
ಜಿಲ್ಲಾಧಿಕಾರಿಗಳ ಪತ್ರಕ್ಕೆ ಸ್ಪಂದಿಸಿದ ಆರೋಗ್ಯ ಇಲಾಖೆಯು ಡಾ. ಚಂದ್ರು ಅವರ ರಾಜೀನಾಮೆ ಅಂಗೀಕರಿಸಿದ್ದು, ಕೆಲವು ಷರತ್ತುಗಳನ್ನು ವಿಧಿಸಿದೆ.
ಆರೋಗ್ಯ ಇಲಾಖೆ ನೀಡಿರುವ ಷರತ್ತುಗಳು
- ಲೋಕಾಯುಕ್ತ ಅಧಿಕಾರಿಗಳು ನಡೆಸಿರುವ ವಿಚಾರಣೆ ಹೊರಬಂದ ಮೇಲೆ ಸರ್ಕಾರವು ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧವಾಗಿರಬೇಕು.
- ವೈದ್ಯನಾಗಿ ಸೇವೆ ಸಲ್ಲಿಸುತ್ತಿರುವಾಗ ಕರ್ತವ್ಯಲೋಪ ಎಸಗಿರುವುದು ಕಂಡುಬಂದಿದ್ದರೆ, ಮುಂದೆ ಬರುವ ಕಾನೂನು ಕ್ರಮಕ್ಕೆ ಬದ್ಧರಾಗಿರಬೇಕು.
- ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದಲ್ಲಿ ಅದನ್ನ ಮುಂದುವರೆಸಲು ಬದ್ಧಗೊಳಿಸಿರುವುದು.
- ಸರ್ಕಾರಕ್ಕೆ ಬರಬೇಕಾದ ಬೇಬಾಕಿಗಳೇನಾದರೂ ಇದ್ದಲ್ಲಿ ಕಾನೂನು ರೀತಿ ವಸೂಲಿ ಮಾಡುವ ಕ್ರಮಕ್ಕೆ ಬದ್ಧರಾಗಿರಬೇಕು.