- ಬಿಎಸ್ಪಿ ಕುರಿತು ಕ್ಷೇತ್ರದಲ್ಲಿ ಅಪಪ್ರಚಾರ ಆರೋಪ
- ಉಪವಿಭಾಗಾಧಿಕಾರಿಗೆ ದೂರು ನೀಡಿದ ನಾಗರಾಜು
ಕೊಳ್ಳೇಗಾಲ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮತ್ತು ಶಾಸಕ ಎನ್ ಮಹೇಶ್ ಅವರು ಬಿಎಸ್ಪಿ (ಬಹುಜನ ಸಮಾಜ ಪಕ್ಷ) ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಆರೋಪಿಸಿ ಬಿಎಸ್ಪಿ ಅಭ್ಯರ್ಥಿ ನಾಗರಾಜು ಚುನಾವಣಾಧಿಕಾರಿಯೂ ಆಗಿರುವ ಉಪವಿಭಾಗಾಧಿಕಾರಿಗೆ ದೂರು ನೀಡಿದ್ದಾರೆ.
ಸೋಮವಾರ, ತಾಲೂಕಿನ ಹೊಸ ಹಂಪಾಪುರ ಗ್ರಾಮದ ಬಿಜೆಪಿ ಬೂತ್ ಮಟ್ಟದ ಸಭೆಯಲ್ಲಿ ಕಾರ್ಯಕರ್ತರನ್ನು ಕುರಿತು ಮಾತನಾಡಿದ ಶಾಸಕ ಎನ್ ಮಹೇಶ್, ‘ಬಿಜೆಪಿ ಮತ್ತು ಬಿಎಸ್ಪಿ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಹೊಂದಾಣಿಕೆ ಮಾಡಿಕೊಂಡಿವೆ. ಬಿಎಸ್ಪಿ ಮತಗಳು ಮತ್ತು ಬಿಜೆಪಿ ಮತಗಳು ಸೇರಿ ನನಗೆ ಹೆಚ್ಚಿನ ಮತಗಳು ಬರಬೇಕು’ ಎಂದು ಹೇಳಿಕೊಂಡಿದ್ದಾರೆ. ಆ ಮೂಲಕ ಬಿಎಸ್ಪಿ ಬಗ್ಗೆ ಬಹಿರಂಗವಾಗಿ ಅಪಪ್ರಚಾರ ಮಾಡಿದ್ದಾರೆ” ಎಂದು ಆರೋಪಿಸಿದ್ದಾರೆ.
“”ಅವರ ಹೇಳಿಕೆ ಎಷ್ಟರ ಮಟ್ಟಿಗೆ ಸರಿ. ಬಿಎಸ್ಪಿ ಬಗ್ಗೆ ಹೀನಾಯವಾಗಿ ಅವರು ಮಾತನಾಡಿದ್ದು ಅಲ್ಲದೆ, ಪ್ರಚೋದನಕಾರಿ ಹೇಳಿಕೆಯನ್ನು ನೀಡುತ್ತಿದ್ದಾರೆ. ಅವರ ಹೇಳಿಕೆಯಿಂದ ಬಿಎಸ್ಪಿ ಕಾರ್ಯಕರ್ತರಿಗೂ, ಮುಖಂಡರಿಗೂ ಹಾಗೂ ಅಭ್ಯರ್ಥಿಗೂ ಆಘಾತ ಉಂಟಾಗಿದೆ. ಗೊಂದಲದ ವಾತಾವರಣ ಸೃಷ್ಟಿಯಾಗಿದೆ” ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೆಳಗಾವಿ | ಕೈ ತಪ್ಪಿದ ಕಾಂಗ್ರೆಸ್ ಟಿಕೆಟ್; ಜೆಡಿಎಸ್ ಸೇರ್ಪಡೆಯಾದ ಸೌರಭ್ ಚೋಪ್ರಾ
“ಶಾಸಕ ಎನ್ ಮಹೇಶ್ ಅವರು ರಾಷ್ಟ್ರೀಯ ಪಕ್ಷವಾದ ಬಿಎಸ್ಪಿ ಸಿದ್ಧಾಂತಕ್ಕೆ ಧಕ್ಕೆ ತರುವಂತೆ ಸಾರ್ವಜನಿಕ ಸ್ಥಳಗಳಲ್ಲಿ ಶಾಂತಿ ಭಂಗ ಉಂಟುಮಾಡುವಂತೆ ಮಾತನಾಡುತ್ತಿದ್ದಾರೆ. ಈ ಹೇಳಿಕೆಯಿಂದ ಬಿಎಸ್ಪಿ ಅಭ್ಯರ್ಥಿಗೆ ಹಿನ್ನಡೆ ಉಂಟಾಗುತ್ತದೆ. ಆ ಕಾರಣ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು” ಎಂದು ಮನವಿ ಮಾಡಿದ್ದಾರೆ.