- ಚುನಾವಣಾ ಜೀವಿಯ ತಂತ್ರ ಫಲಿಸದು
- ಜೆಡಿಎಸ್ 123 ಕ್ಷೇತ್ರಗಳಲ್ಲಿ ಗೆಲ್ಲಲಿದೆ
ಹಾಸನ ಬಿಜೆಪಿ ಅಭ್ಯರ್ಥಿ ಪ್ರೀತಂ ಗೌಡ ಅವರು ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರ ಬಗ್ಗೆ ಅಪಾರ ಗೌರವ ಇರುವುದಾಗಿ ಹೇಳಿಕೊಂಡಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಜೆಡಿಎಸ್, ‘ಗುಜರಾತಿನ ಚುನಾವಣಾ ಕುತಂತ್ರಿಗಳಿಂದ ಲಾಭವಿಲ್ಲವೆಂದು ದೊಡ್ಡಗೌಡರ ಹೆಸರು ಹೇಳುತ್ತದ್ದಾರೆ’ ಎಂದು ಕುಟುಕಿದೆ.
“ದೇವೇಗೌಡರ ಬಗ್ಗೆ ನನಗೆ ಇರುವಷ್ಟು ಗೌರವ ಅವರ ಮನೆಯವರಿಗೆ ಇಲ್ಲ. ಕುಟುಂಬದವರ ಸ್ವಾರ್ಥಕ್ಕಾಗಿ ದೇವೇಗೌಡರನ್ನು ಕೊನೆ ಚುನಾವಣೆಯಲ್ಲಿ ತುಮಕೂರಿಗೆ ಕಳಿಸಿದರು” ಎಂದು ಪ್ರೀತಂ ಗೌಡ ಹೇಳಿದ್ದರು.
ಈ ಕುರಿತು ಟ್ವೀಟ್ ಮಾಡಿರುವ ಜೆಡಿಎಸ್, “ಸೋಲು ಖಾತರಿಯಾಗುತ್ತಿದ್ದಂತೆ ಪ್ರೀತಂ ಗೌಡ, ದೇವೇಗೌಡರ ಹೆಸರಿನಲ್ಲಿ ಮತಯಾಚಿಸುತ್ತಿದ್ದಾರೆ” ಎಂದು ವ್ಯಂಗ್ಯವಾಡಿದೆ.
ಗೃಹ ಸಚಿವ ಅಮಿತ್ ಶಾ ಅವರ ಹೆಸರನ್ನು ಉಲ್ಲೇಖಿಸದೇ, “ಗುಜರಾತಿನ ಚುನಾವಣಾ ಕುತಂತ್ರಿಯನ್ನು ಕ್ಷೇತ್ರಕ್ಕೆ ಕರೆಸಿದರೂ ಓಟ್ ಬೀಳುವುದಿಲ್ಲ ಎಂದು ತಿಳಿದ ಬಳಿಕ ಹೊಸ ಕುತಂತ್ರಕ್ಕೆ ಕೈ ಹಾಕಿದ್ದಾರೆ. ಹಾಸನದ ಪ್ರಬುದ್ಧ ಮತದಾರರು ಯಾವುದೇ ಅಪಪ್ರಚಾರಕ್ಕೂ ಕಿವಿಗೊಡಬಾರದು” ಎಂದು ಹೇಳಿದೆ.
“ಗೌರವಾನ್ವಿತ ದೇವೇಗೌಡರ ಹೆಸರಿನಲ್ಲಿ ಪ್ರೀತಂ ಗೌಡ ಸುಳ್ಳು ಹೇಳಿ ಮತಬೇಟೆಗೆ ಇಳಿದಿದ್ದು ಹತಾಶೆಯ ಲಕ್ಷಣ” ಎಂದು ಜೆಡಿಎಸ್ ಟ್ವೀಟ್ ಮಾಡಿದೆ.
“ಇಡೀ ಬಿಜೆಪಿ ಸುಳ್ಳು, ದ್ವೇಷ ಮತ್ತು ಒಡೆದು ಆಳುವ ಮೂಲಕ ಮಾತ್ರವೆ ಚುನಾವಣೆಗೆ ಸಜ್ಜಾಗಿದೆ. ಜೆಡಿಎಸ್ ಈ ಬಾರಿ ‘123’ ಸ್ಥಾನ ಪಡೆದು ಸ್ವತಂತ್ರವಾಗಿ ಸರ್ಕಾರ ರಚಿಸಲಿದೆ.ಯಾವುದೆ ಚುನಾವಣಾ ಜೀವಿಯ ಸಹಾಯ ಜೆಡಿಎಸ್ಗೆ ಬೇಕಾಗಿಲ್ಲ” ಎಂದು ಮೋದಿ ಅವರ ವಿರುದ್ಧವೂ ವ್ಯಂಗ್ಯವಾಡಿದೆ.
ಈ ಸುದ್ದಿ ಓದಿದ್ದೀರಾ? ರೈತ ಯುವಕರನ್ನು ಮದುವೆಯಾದರೆ ₹2 ಲಕ್ಷ ಪ್ರೋತ್ಸಾಹ ಧನ; ಜೆಡಿಎಸ್ ಪ್ರಣಾಳಿಕೆ ಬಿಡುಗಡೆ
“ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ, ಜೆಡಿಎಸ್ಗೆ ಮತ ನೀಡಿದರೆ ಕನ್ನಡ, ನಂದಿನಿ, ಕರ್ನಾಟಕ, ಪ್ರಾದೇಶಿಕತೆ, ಸೌಹಾರ್ದತೆ, ಸ್ವಾಭಿಮಾನದ ಪರವಾಗಿ ಮತ ನೀಡಿದಂತೆ. ಬಿಜೆಪಿಗೆ ಮತ ನೀಡಿದರೆ, ಹಿಂದಿ ಹೇರಿಕೆ, ಗುಜರಾತಿ ಗುಲಾಮಿತನ, ದೆಹಲಿ ಹೈಕಮಾಂಡ್ಗೆ ಮತ ನೀಡಿದಂತೆ” ಎಂದು ಹೇಳಿದೆ.