ಬೀದರ್ ಜಿಲ್ಲೆಯ ಏಕೈಕ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರವಾದ ಔರಾದ ವಿಧಾನಸಭಾ ಕ್ಷೇತ್ರದಲ್ಲಿ ಭೀಮಸೇನರಾವ ಸಿಂಧೆಗೆ ಕಾಂಗ್ರೆಸ್ ಟಿಕೆಟ್ ಘೋಷಿಸಿದೆ.
ಔರಾದ ಎಸ್ಸಿ ಮೀಸಲು ಕ್ಷೇತ್ರದಿಂದ ಸ್ಪರ್ಧಿಸಲು ಕಾಂಗ್ರೆಸ್ನ 27 ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದರು. ಇದರಲ್ಲಿ ಎಡ-ಬಲ ಸಮುದಾಯದ ಆಕಾಂಕ್ಷಿಗಳು ಇದ್ದರು. ಎಪ್ರಿಲ್ 15 ರಂದು ಕಾಂಗ್ರೆಸ್ ಬಿಡುಗಡೆಗೊಳಿಸಿದ ಅಭ್ಯರ್ಥಿಗಳ ಮೂರನೇ ಪಟ್ಟಿಯಲ್ಲಿ ಔರಾದ ಮೀಸಲು ಕ್ಷೇತ್ರಕ್ಕೆ ಪರಿಶಿಷ್ಟ ಜಾತಿ ಬಲ ಸಮುದಾಯದ ಭೀಮಸೇನರಾವ ಸಿಂಧೆಗೆ ಟಿಕೆಟ್ ಘೋಷಿಸಿದ್ದು, ಕ್ಷೇತ್ರದ ಜನರ ಕುತೂಹಲಕ್ಕೆ ತೆರೆ ಎಳೆದಿದೆ.
2008 ರಿಂದ ಸತತವಾಗಿ ಮೂರು ಬಾರಿ ಬಿಜೆಪಿಯಿಂದ ಗೆದ್ದಿರುವ ಹಾಲಿ ಸಚಿವ ಪ್ರಭು ಚವ್ಹಾಣ ನಾಲ್ಕನೇ ಬಾರಿಯೂ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. ಚವ್ಹಾಣ ಕ್ಷೇತ್ರದಲ್ಲಿ ಹೇಳಿಕೊಳ್ಳುವಷ್ಟು ಅಭಿವೃದ್ಧಿ ಕಾರ್ಯಗಳು ಕೈಗೊಂಡಿಲ್ಲ. ಲಂಬಾಣಿ ಸಮುದಾಯದ ಪ್ರಭು ಚವ್ಹಾಣ ತಮ್ಮ ಸಮುದಾಯದ ಏಳಿಗೆಗಾಗಿಯೇ ಹೆಚ್ಚು ಒತ್ತು ನೀಡಿದ್ದಾರೆ. ಉಳಿದ ಸಮುದಾಯಗಳಿಗೆ ಯಾವುದೇ ಅಭಿವೃದ್ಧಿ ಮಾಡಲಿಲ್ಲವೆಂದು ಕ್ಷೇತ್ರದ ಜನರು ಚವ್ಹಾಣ್ ವಿರುದ್ಧ ಅಸಮಾಧಾನಗೊಂಡಿದ್ದಾರೆ.
ಈ ಬಾರಿ ಪ್ರಭು ಚವ್ಹಾಣರನ್ನು ಕಟ್ಟಿ ಹಾಕಲು ಕಾಂಗ್ರೆಸ್ ಸೂಕ್ತ ಅಭ್ಯರ್ಥಿಗೆ ಟಿಕೆಟ್ ಕೊಡಬೇಕೆಂಬ ಚರ್ಚೆಗಳು ನಡೆದಿದ್ದವು. 27 ಮಂದಿ ಆಕಾಂಕ್ಷಿಗಳಲ್ಲಿ ಭೀಮಸೇನರಾವ ಸಿಂಧೆಗೆ ಟಿಕೆಟ್ ನೀಡಿದರೆ, ಚವ್ಹಾಣರನ್ನು ಮಣಿಸಲು ಸಾಧ್ಯವೆಂದು ಸ್ಥಳೀಯ ಕಾಂಗ್ರೆಸ್ ಮುಖಂಡರು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಈ ನಡುವೆ, ಸಿಂಧೆ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಿದೆ.
ಮಾಜಿ ಸಿಎಂ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಭೀಮಸೇನರಾವ ಸಿಂಧೆ ಕಳೆದ 2018ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ಗೆ ಪ್ರಬಲ ಆಕಾಂಕ್ಷಿಯಾಗಿದ್ದರು. ಆದರೆ ಕೊನೆ ಗಳಿಗೆಯಲ್ಲಿ ಎಡಗೈ ಸಮುದಾಯದ ವಿಜಯಕುಮಾರ್ ಕೌಡ್ಯಾಳೆ ಅವರಿಗೆ ಟಿಕೆಟ್ ಕೊಟ್ಟು ಅಚ್ಚರಿ ಮೂಡಿಸಿತು. ಆದರೆ, ಚವ್ಹಾಣ ವಿರುದ್ಧ ಕೌಡ್ಯಾಳೆ ಕಡಿಮೆ ಅಂತರದಿಂದ ಸೋಲುಂಡಿದ್ದರು. ಇದೀಗ ಕ್ಷೇತ್ರದ ಬಹುತೇಕ ಜನರ ನಿರೀಕ್ಷೆಯಂತೆ ಎಸ್ಸಿ ಬಲಗೈ ಸಮುದಾಯದ ಸಿಂಧೆಗೆ ಕಾಂಗ್ರೆಸ್ ಟಿಕೆಟ್ ನೀಡಿದೆ.
ಔರಾದದಲ್ಲಿ ಜೆಡಿಎಸ್ಗೆ ಬಲವಿಲ್ಲ. ಹೀಗಾಗಿ ಕಾಂಗ್ರೆಸ್-ಬಿಜೆಪಿ ಮಧ್ಯೆ ನೇರ ಜಿದ್ದಾಜಿದ್ದಿ ಏರ್ಪಡುವುದು ಬಹುತೇಕ ಖಚಿತವಾಗಿದೆ. ಈ ಸಲ ಬಿಜೆಪಿಯ ಸಚಿವ ಪ್ರಭು ಚವ್ಹಾಣ ಹಾಗೂ ಕಾಂಗ್ರೆಸ್ಸಿನ ಭೀಮಸೇನರಾವ ಸಿಂಧೆ ಮಧ್ಯೆ ನೇರ ಹಣಾಹಣಿ ನಡೆಯುವುದು ಪಕ್ಕಾ ಎನ್ನುವಂತಿದೆ. ಕ್ಷೇತ್ರದ ಜನ ಈ ಬಾರಿ ಬದಲಾವಣೆ ಬಯಸುತ್ತಾರೋ ಇಲ್ಲವೋ ಎಂಬುದು ಕಾದು ನೋಡಬೇಕು.