- 4.5 ಕೋಟಿ ರೂಪಾಯಿ ಲಂಚ ಪಡೆದ ಆರೋಪದ ಮೇಲೆ ಬಂಧನವಾಗಿತ್ತು
- ಮನೆ ಮೇಲೆ ಎಸಿಬಿ ದಾಳಿ ಮಾಡಿ ಅಪಾರ ಪ್ರಮಾಣದ ನಗದನ್ನು ವಶಕ್ಕೆ ಪಡೆದಿತ್ತು
ಐ ಮಾನಿಟರಿ ಅಡ್ವೈಸರಿ (ಐಎಂಎ) ಸಂಸ್ಥೆಯ ಬಹುಕೋಟಿ ವಂಚನೆ ಪ್ರಕರಣದಲ್ಲಿ ಎಸ್ಐಟಿ ತಂಡದಿಂದ ಬಂಧನಕ್ಕೆ ಒಳಗಾಗಿದ್ದ ಅಧಿಕಾರಿ ಎಲ್.ಸಿ ನಾಗರಾಜ್ಗೆ ಬಿಜೆಪಿ ಮಧುಗಿರಿ ಕ್ಷೇತ್ರದ ಟಿಕೆಟ್ ನೀಡಿದೆ.
`ಭ್ರಷ್ಟಾಚಾರದ ವಿರುದ್ಧ ಸಮರ ಸಾರಿದ ಪಕ್ಷವೆಂದರೆ ಅದು ಬಿಜೆಪಿ’ ಎಂದು ಪದೆ ಪದೇ ಹೇಳುವ ಪ್ರಧಾನಿ ನರೇಂದ್ರ ಮೋದಿ ಅವರ ಬಿಜೆಪಿ, ಇದೀಗ ಮಧುಗಿರಿ ವಿಧಾನಸಭಾ ಕ್ಷೇತ್ರಕ್ಕೆ ಕಳಂಕಿತ ಅಧಿಕಾರಿಯನ್ನು ಅಭ್ಯರ್ಥಿಯನ್ನಾಗಿ ಮಾಡಿದೆ.
ಇದು ಸ್ವಾಭಾವಿಕವಾಗಿಯೇ ರಾಜ್ಯ ಬಿಜೆಪಿ ಕಾರ್ಯಕರ್ತರು, ನಾಯಕರು ಮುಜುಗರಕ್ಕೆ ಒಳಗಾಗುವಂತೆ ಮಾಡಿದೆ. ಜೊತೆಗೆ ಬಿಜೆಪಿ ನಡೆ ವಿರೋಧ ಪಕ್ಷಗಳ ಟೀಕೆಗೆ ಅವಕಾಶ ಮಾಡಿಕೊಟ್ಟಂತಾಗಿದೆ.
ಈ ಹಿಂದೆ ಐಎಂಎ ವಂಚನೆ ಪ್ರಕರಣ ತನಿಖೆಯಲ್ಲಿ ಕಂಪನಿ ಪರವಾಗಿ ವರದಿ ನೀಡಲು 4.5 ಕೋಟಿ ರೂಪಾಯಿ ಲಂಚ ಪಡೆದ ಆರೋಪದ ಮೇಲೆ ಬೆಂಗಳೂರು ಉತ್ತರ ಉಪವಿಭಾಗಾಧಿಕಾರಿ ಎಲ್.ಸಿ ನಾಗರಾಜ್ ಅವರನ್ನು ಬಂಧಿಸಲಾಗಿತ್ತು.
ಈ ಪ್ರಕರಣ ನಡೆದ ಮೇಲೆ ಮಾರ್ಚ್ 9 ರಂದು ತಮ್ಮ ಕೆಎಎಸ್ ಹುದ್ದೆಗೆ ವೈಯಕ್ತಿಕ ಕಾರಣ ನೀಡಿ ನಾಗರಾಜ್ ರಾಜೀನಾಮೆ ನೀಡಿದ್ದರು. ಐಎಂಎ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ, ಲೋಕಾಯುಕ್ತ ಹಾಗೂ ಇಲಾಖಾ ಹಂತಗಳಲ್ಲಿ ಎಲ್.ಸಿ ನಾಗರಾಜ್ ವಿಚಾರಣೆ ಎದುರಿಸುತ್ತಿದ್ದಾರೆ.
ಅಷ್ಟೇ ಅಲ್ಲ, 2021ರಲ್ಲಿ ನೆಲಮಂಗಲ ಪರಮಣ್ಣ ಬಡಾವಣೆಯಲ್ಲಿದ್ದ ಎಲ್.ಸಿ ನಾಗರಾಜ್ ಮನೆ ಹಾಗೂ ಅವರ ಸಂಬಂಧಿಕರ ಮನೆ ಮೇಲೆಯೂ ಎಸಿಬಿ ದಾಳಿ ನಡೆಸಿತ್ತು. ಎಸಿಬಿ ಅಧಿಕಾರಿಗಳು ದಾಳಿ ವೇಳೆಯಲ್ಲಿ ಅಪಾರ ಪ್ರಮಾಣದ ನಗದು, ದಾಖಲೆಗಳನ್ನು ವಶಕ್ಕೆ ಪಡೆದಿದ್ದರು.
ಐಎಂಎ ಪ್ರಕರಣದಲ್ಲಿ ಸಿಬಿಐ ಸಲ್ಲಿಸಿದ್ದ ಚಾರ್ಜ್ ಶೀಟ್ ನಲ್ಲೂ ಎಲ್.ಸಿ ನಾಗರಾಜ್ ಹೆಸರಿದೆ. ಐಎಂಎ ಕಂಪನಿಯಿಂದ ಹಲವು ಅಧಿಕಾರಿಗಳು ಕೋಟಿಗಟ್ಟಲೆ ಸುಲಿಗೆ ಮಾಡಿದ್ದಾರೆ ಎಂದು ಪ್ರಮುಖ ಆರೋಪಿ ಮನ್ಸೂರ್ ಖಾನ್ ತಾನೇ ಮಾಡಿದ್ದ ವಿಡಿಯೊದಲ್ಲಿ ಹೇಳಿಕೊಂಡಿದ್ದ. 2019ರಲ್ಲಿ ಐಎಂಎ ಪ್ರಕರಣದಲ್ಲಿ ಶಾಮೀಲಾಗಿರುವ ಆರೋಪದಲ್ಲಿ ಕೆಎಎಸ್ ಅಧಿಕಾರಿ ನಾಗರಾಜ್ ಅಮಾನತ್ತಾಗಿದ್ದರು.
ಈಗ ಈ ಅಧಿಕಾರಿ ಬಿಜೆಪಿ ಸೇರಿ ಮಧುಗಿರಿ ಕ್ಷೇತ್ರಕ್ಕೆ ಅಧಿಕೃತ ಅಭ್ಯರ್ಥಿಯಾಗಿದ್ದಾರೆ. ಬಿಜೆಪಿ ಎಂದರೆ ಭ್ರಷ್ಟರ ಜನತಾ ಪಕ್ಷ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ. ಆಶ್ಚರ್ಯವೆಂದರೆ, ಪಕ್ಷ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡುವಾಗ ಐಪಿಎಸ್, ಕೆಎಎಸ್ ಅಧಿಕಾರಿಗಳಿಗೂ ಟಿಕೆಟ್ ಕೊಡಲಾಗಿದೆ, ವಿದ್ಯಾವಂತರಿಗೂ ಸ್ಥಾನಮಾನ ನೀಡಲಾಗಿದೆ ಎಂದು ಬಿಂಬಿಸುತ್ತಿರುವುದರ ಅಸಲೀ ಸತ್ಯ ಹೊರಬಿದ್ದಿರುವುದು. ಇದು ಬಿಜೆಪಿ ಕುರಿತು ಸಾರ್ವಜನಿಕ ವಲಯದಲ್ಲಿ ಚರ್ಚೆಯ ವಿಷಯವಾಗಿರುವುದು.