ಮೊಳಕಾಲ್ಮೂರು, ಜಗಳೂರಿನಲ್ಲಿ ಬಿಜೆಪಿ ಪರ ಸುದೀಪ್ ಪ್ರಚಾರ
ಮಂಡ್ಯದಲ್ಲಿ ಸುಮಲತಾ ಜೊತೆ ಯೋಗಿ ಆದಿತ್ಯನಾಥ್ ರೋಡ್ ಶೋ
ರಾಜ್ಯದಲ್ಲಿ ಚುನಾವಣೆಯ ಕಾವು ಜೋರಾಗಿದ್ದು, ಎಲ್ಲ ರಾಜಕೀಯ ಪಕ್ಷಗಳು ಅಬ್ಬರದ ಪ್ರಚಾರದಲ್ಲಿ ತೊಡಗಿಕೊಂಡಿವೆ. ಬುಧವಾರ ರಾಜ್ಯಕ್ಕೆ ಬಂದಿಳಿದಿರುವ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚವಾಣ್ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದರೆ, ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಮೈಸೂರಿನಲ್ಲಿ ಕೈ ಅಭ್ಯರ್ಥಿಗಳ ಪರ ಭರ್ಜರಿ ಪ್ರಚಾರ ಕೈಗೊಂಡಿದ್ದಾರೆ. ಈ ನಡುವೆ ನಟಿ, ಸಂಸದೆ ಸುಮಲತಾ ಅಂಬರೀಶ್ ಮತ್ತು ಸುದೀಪ್ ಕೂಡ ಬಿಜೆಪಿ ಅಭ್ಯರ್ಥಿಗಳ ಪರ ರೋಡ್ ಶೋ ನಡೆಸಿದ್ದಾರೆ.
ಕರ್ನಾಟಕವೂ ಉತ್ತರ ಪ್ರದೇಶದಂತಾಗಬೇಕು ಎಂದ ಸುಮಲತಾ
ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಪರ ಬೆಂಬಲ ಘೋಷಿಸಿರುವ ಸುಮಲತಾ ಅಂಬರೀಶ್ ಬುಧವಾರ ಮಂಡ್ಯದಲ್ಲಿ ಯೋಗಿ ಆದಿತ್ಯನಾಥ್ ಜೊತೆಗೂಡಿ ಬಿಜೆಪಿ ಅಭ್ಯರ್ಥಿಗಳ ಪರ ರೋಡ್ ಶೋ ನಡೆಸಿದ್ದಾರೆ. ಅದಾದ ಬಳಿಕ ಸಭೆಯನ್ನುದ್ದೇಶಿಸಿ ಮಾತನಾಡಿರುವ ಅವರು, “ಒಂದು ಕಾಲದಲ್ಲಿ ಉತ್ತರ ಪ್ರದೇಶದಲ್ಲಿ ʼಗೂಂಡಾರಾಜ್ʼ ಎಂಬ ರೀತಿಯ ವಾತಾವರಣವಿತ್ತು. ಜನಸಾಮಾನ್ಯರು ರಸ್ತೆಯಲ್ಲಿ ಓಡಾಡುವುದಕ್ಕೂ ಭಯಪಡುವ ಸ್ಥಿತಿ ನಿರ್ಮಾಣವಾಗಿತ್ತು. ವ್ಯಾಪಾರಿಗಳು ತಮ್ಮ ಸಂಪಾದನೆಯ ಹಣದಲ್ಲಿ ರೌಡಿಗಳಿಗೆ ಮಾಮೂಲಿ ಕೊಟ್ಟು ಬೇಸತ್ತು ಹೋಗಿದ್ದರು. ಆದರೆ, 2017ರಲ್ಲಿ ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ʼಅಪರಾಧಿʼಗಳು, ಅಕ್ರಮ ಮಾಡುವ ಭ್ರಷ್ಟಾಚಾರಿಗಳು ಅಲ್ಲಿಂದ ಓಡಿಹೋಗುವಂಥ ವಾತಾವರಣ ಸೃಷ್ಟಿಯಾಗಿದೆ. ಇವತ್ತು ಉತ್ತರ ಪ್ರದೇಶದ ಜನ ಅವರ ವ್ಯಾಪಾರ ಮತ್ತು ಜೀವನವನ್ನು ನೆಮ್ಮದಿಯಾಗಿ ಸಾಗಿಸುತ್ತಾ ಬಂದಿದ್ದಾರೆ. ಅದಕ್ಕೆ ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರವೇ ಕಾರಣ. ಅವರು ಕಾನೂನು ವ್ಯವಸ್ಥೆಯನ್ನು ಸುಧಾರಣೆಗೆ ತಂದರು ಮತ್ತು ಅಕ್ರಮವನ್ನು ತಡೆಯಲು ಬುಲ್ಡೋಜರ್ ಅನ್ನೇ ಬಳಸಿದರು. ಈ ವಿಷಯ ನಮಗೂ ಅನ್ವಯ ಆಗಬೇಕು ಎಂದರೆ ಡಬಲ್ ಇಂಜಿನ್ ಸರ್ಕಾರಕ್ಕೆ ಸ್ಪಷ್ಟ ಬಹುಮತ ನೀಡಬೇಕು ಎಂದಿದ್ದಾರೆ.
ಸುಮಲತಾ ಹೇಳಿಕೆಗೆ ಕನ್ನಡಿಗರ ಆಕ್ರೋಶ
ಸುಮಲತಾ ಅವರ ಈ ಹೇಳಿಕೆ ಸದ್ಯ ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ. ಯೋಗಿ ಆದಿತ್ಯನಾಥ್ ಆಡಳಿತ ನಡೆಸುತ್ತಿರುವ ಉತ್ತರ ಪ್ರದೇಶದಲ್ಲಿ ಇತ್ತೀಚೆಗೆ ಸಾರ್ವಜನಿಕವಾಗಿ ನಡೆದ ಹತ್ಯೆಗಳು, ಉನ್ನಾವೋ, ಹತ್ರಾಸ್ ಅತ್ಯಾಚಾರ ಮತ್ತು ಕೊಲೆ ಪ್ರಕರಣಗಳು, ಲಖೀಂಪುರ್ ಖೇರಿಯಲ್ಲಿ ರೈತರ ಮೇಲೆ ನಡೆದ ಹಿಂಸಾಚಾರ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿವೆ. ಉತ್ತರ ಪ್ರದೇಶದಲ್ಲಿ ಪ್ರತಿ ದಿನವೂ ಒಂದಲ್ಲ ಒಂದು ರೀತಿಯಲ್ಲಿ ಕೊಲೆ, ಹಿಂಸಾಚಾರ ನಡೆಯುತ್ತಲೇ ಇದೆ. ಅಸಂವಿಧಾನಿಕವಾಗಿ ಮನೆಗಳಿಗೆ ಬುಲ್ಡೋಜರ್ ನುಗ್ಗಿಸಿ ಧ್ವಂಸ ಮಾಡಲಾಗುತ್ತಿದೆ. ಇಂತಹ ಕೃತ್ಯಗಳನ್ನು ಕರ್ನಾಟಕದಲ್ಲೂ ಬಯಸುತ್ತಿದ್ದೀರಾ ಎಂದು ಸುಮಲತಾ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಮೊಳಕಾಲ್ಮೂರು, ಜಗಳೂರು ಕ್ಷೇತ್ರಗಳಲ್ಲಿ ಸುದೀಪ್ ಪ್ರಚಾರ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಪರ ಶಿಗ್ಗಾವಿಯಲ್ಲಿ ರೋಡ್ ಶೋ ನಡೆಸುವ ಮೂಲಕ ಬಿಜೆಪಿ ಪರ ಚುನವಣಾ ಪ್ರಚಾರ ಆರಂಭಿಸಿದ್ದ ನಟ ಕಿಚ್ಚ ಸುದೀಪ್ ಬುಧವಾರ ಬೆಳಗ್ಗೆ ಮೊಳಕಾಲ್ಮೂರು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ತಿಪ್ಪೇಸ್ವಾಮಿ ಅವರ ಪರ ರೋಡ್ ಶೋ ನಡೆಸಿದ್ದಾರೆ. ಮಧ್ಯಾಹ್ನದ ಬಳಿಕ ಜಗಳೂರಿಗೆ ಭೇಟಿ ನೀಡಿದ ಸುದೀಪ್, ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್.ವಿ ಚಂದ್ರಪ್ಪ ಅವರ ಪರವಾಗಿಯೂ ಪ್ರಚಾರ ಮಾಡಿದ್ದಾರೆ. ಇದೇ ವೇಳೆ ಮುಂದಿನ ದಿನಗಳಲ್ಲಿ ಇನ್ನೂ ಹಲವು ಕ್ಷೇತ್ರಗಳಲ್ಲಿ ಬಿಜೆಪಿ ಬೆಂಬಲಿಸಿ ಪ್ರಚಾರ ಮಾಡುವುದಾಗಿ ಹೇಳಿದ್ದಾರೆ.