ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ದಲಿತರ ಸ್ವಾಭಿಮಾನವನ್ನು ಕಾಂಗ್ರೆಸ್ ಅಭ್ಯರ್ಥಿ ಕೊತ್ತೂರು ಮಂಜುನಾಥ್ ಬಳಿ ಮಾರಾಟಕ್ಕೆ ಇಟ್ಟಿರುವ ಹಿರಿಯ ದಲಿತ ಮುಖಂಡ ಸಿ.ಎಂ ಮುನಿಯಪ್ಪ ಮತ್ತು ಅವರ ತಂಡಕ್ಕೆ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದೇವೆ ಎಂದು ದಲಿತ ಮುಖಂಡ ಆಟೋ ನಾರಾಯಣಸ್ವಾಮಿ ತಿಳಿಸಿದ್ದಾರೆ.
ಕೋಲಾರದಲ್ಲಿ ಗುರುವಾರ ಪತ್ರಿಕಾಗೋಷ್ಠಿ ನಡೆಸಿದ ಅವರು, “ಜಿಲ್ಲೆಯಲ್ಲಿ ಕಾಂಗ್ರೆಸ್ ನಿರ್ನಾಮಕ್ಕೆ ಕೊತ್ತೂರು ಮಂಜುನಾಥ್ ನೇರ ಕಾರಣ. ಅಂತಹ ವ್ಯಕ್ತಿಗೆ ಓಟು ಕೇಳಲು ನಿಮಗೆ (ಮುನಿಯಪ್ಪ) ನೈತಿಕತೆ ಇದ್ದೀಯಾ? ನೀವು ಎಲ್ಲ ದಲಿತ ಚಳುವಳಿಯಲ್ಲಿ ಇದ್ದು, ಯಾರನ್ನು ಉದ್ದಾರ ಮಾಡಿದ್ದೀರಾ? ಕೇವಲ ನಿಮ್ಮ ಸ್ವಾರ್ಥಕ್ಕಾಗಿ ದಲಿತ ಮತದಾರರನ್ನು ಅಸ್ತ್ರವನ್ನಾಗಿ ಮಾಡಿಕೊಂಡು ಆರ್ಥಿಕವಾಗಿ ಲಾಭಗಳಿಸಲು ಬೀದಿಗಿಳಿದಿದ್ದೀರಾ! ದಲಿತರು ಸ್ವಾಭಿಮಾನದ ಜನ ನಿಮಗೆಲ್ಲ ಉತ್ತರ ನೀಡಲಿದ್ದಾರೆ” ಎಂದರು.
“ಸಮಾಜದಲ್ಲಿ ಅಂಬೇಡ್ಕರ್ ಬರೆದ ಸಂವಿಧಾನಕ್ಕೆ ಗೌರವ ಕೊಡದೇ ಮೀಸಲಾತಿ ದುರುಪಯೋಗ ಪಡಿಸಿಕೊಂಡ ವ್ಯಕ್ತಿಯೊಂದಿಗೆ ಮತ ಕೇಳಲು ನಿಮಗೆ ಯಾವ ನೈತಿಕತೆ ಇದೆ? ದಲಿತರ ಬಗ್ಗೆ ಅವಮಾನ ಮಾಡಿದಾಗ ಎಲ್ಲಿ ಹೋಗಿದ್ದಿರಿ?” ಎಂದು ಕಿಡಿಕಾರಿದರು.
ಪತ್ರಿಕಾಗೋಷ್ಟಿಯಲ್ಲಿ ದಲಿತ ಮುಖಂಡರಾದ ಕುಮಾರ್, ಚಿನ್ನಾಪುರ ಅನಿಲ್ ಕುಮಾರ್, ಜಗನ್ನಾಥ್, ಖಾದ್ರಿಪುರ ನಾರಾಯಣಸ್ವಾಮಿ, ಗೋವಿಂದ, ವೆಂಕಟೇಶ್, ಅಕ್ರಮ್ ಖಾನ್ ಇದ್ದರು