- 50 ಸಾವಿರಕ್ಕೂ ಅಧಿಕ ಮತಗಳ ಅಂತರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಗೆಲುವು
- ಬಿಜೆಪಿ ಅಭ್ಯರ್ಥಿ ಹೋದ ಕಡೆಗಳಲ್ಲೆಲ್ಲ ‘ಗೋ ಬ್ಯಾಕ್ ಮಹೇಶ್’ ಘೋಷಣೆ
ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ಅವರ ಅನುಯಾಯಿಗಳು ಮತ್ತು ಅಲ್ಪಸಂಖ್ಯಾತರು ಸೇರಿದಂತೆ ಹಿಂದುಳಿದವರು, ಬುಡಕಟ್ಟು ಜನಾಂಗದವರು, ಆದಿವಾಸಿಗಳು ಹೆಚ್ಚಾಗಿರುವ ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರ, ಈ ಬಾರಿ ಸ್ವಾಭಿಮಾನದ ಕ್ಷೇತ್ರವಾಗಿ ಬಿಂಬಿತವಾಗಿತ್ತು. ಹಾಗೆಯೇ ಈ ಬಾರಿ ಕೊಳ್ಳೇಗಾಲದಲ್ಲಿ ಸ್ವಾಭಿಮಾನವೇ ಗೆದ್ದಿದೆ ಎನ್ನಲಾಗುತ್ತಿದೆ.
2018ರ ಚುನಾವಣೆಯಲ್ಲಿ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದಲ್ಲಿ ಬಿಎಸ್ಪಿ ಗೆದ್ದಿತ್ತು. ಈ ಕ್ಷೇತ್ರದಿಂದ ಎನ್ ಮಹೇಶ್ ಶಾಸಕರಾಗಿದ್ದರು. ದಲಿತರ ನಾಯಕನಾಗಿ ಬಿಂಬಿಸಿಕೊಂಡಿದ್ದ ಎನ್ ಮಹೇಶ್ಗೆ ಅಲ್ಲಿನ ಮತದಾರರು ಆಶೀರ್ವಾದ ಮಾಡಿದ್ದರು. ಇದ್ದ ಒಂದೇ ಒಂದು ಬಿಎಸ್ಪಿ ಕ್ಷೇತ್ರವನ್ನು ಕಾಂಗ್ರೆಸ್ – ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ವಿಲೀನಗೊಳಿಸಿ ಮಹೇಶ್ ಸಚಿವರೂ ಆಗಿದ್ದರು.
ಸಚಿವರಾದ ಕೆಲವು ಸಮಯದ ಬಳಿಕ ಬಿಎಸ್ಪಿಯಿಂದ ಉಚ್ಛಾಟನೆಯಾಗಿ ಬಿಜೆಪಿಯನ್ನು ಸೇರಿದರು. ಈ ಬಾರಿ ಕೊಳ್ಳೇಗಾಲ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಈ ಬಾರಿ ಎನ್ ಮಹೇಶ್ಗೆ ಮತದಾರರು ಮರುಮತ ಮಾಡಿ ಮಣೆ ಹಾಕುವ ಬದಲಿಗೆ, ʼದಲಿತ ವಿರೋಧಿʼ ನೀತಿ ಅನುಸರಿಸಿದ್ದಾರೆಂದು ಈ ಬಾರಿ ಎಲ್ಲೇ ಚುನಾವಣಾ ಪ್ರಚಾರಕ್ಕೆ ಹೋದರೂ ʼಗೋ ಬ್ಯಾಕ್ ಎನ್ ಮಹೇಶ್ʼ ಎಂಬ ಕೂಗು ಕೇಳಿ ಬರುತ್ತಿತ್ತು. ಈ ಕಾರಣಕ್ಕಾಗಿಯೂ ಕ್ಷೇತ್ರದ ಜನತೆ ಮಹೇಶ್ ಅವರನ್ನು ಮನೆಗೆ ಕಳುಹಿಸಿ ನೂತನ ಕಾಂಗ್ರೆಸ್ ಅಭ್ಯರ್ಥಿ ಎ ಆರ್ ಕೃಷ್ಣಮೂರ್ತಿ ಅವರಿಗೆ ಆಶೀರ್ವಾದ ಮಾಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಹಳೆ ಮೈಸೂರು ಭಾಗದಿಂದ ಆರು ಮಂದಿ ಯುವ ನಾಯಕರು ವಿಧಾನಸಭೆಗೆ
ಎ ಆರ್ ಕೃಷ್ಣಮೂರ್ತಿ ಅವರು ಈ ಹಿಂದೆ ಕೇರಳ ಮತ್ತು ಹಿಮಾಚಲ ಪ್ರದೇಶದ ರಾಜ್ಯಪಾಲರಾಗಿ ಕೆಲಸ ನಿರ್ವಹಿಸಿದ ಬಿ ರಾಚಯ್ಯ ಅವರ ಪುತ್ರ. ಗೆದ್ದ ಬಳಿಕ ಸುದ್ದಿ ಮಾಧ್ಯಮಗಳಿಗೆ ಪ್ರತಿಕ್ರೀಯೆ ನೀಡಿರುವ ಎ ಆರ್ ಕೃಷ್ಣಮೂರ್ತಿ “ಈ ಮುಂಚೆ ಒಂದೇ ಒಂದು ಮತದಲ್ಲಿ ಸೋತಿದ್ದೆ. ಆದರೆ, ಕ್ಷೇತ್ರದ ಜನತೆ ಈ ಬಾರಿ 50,000ಕ್ಕೂ ಹೆಚ್ಚು ಮತಗಳ ಅಂತರದಿಂದ ನನ್ನನ್ನು ಗೆಲ್ಲಿಸಿದ್ದಾರೆ” ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.