ಎಲ್ಲ ರಾಷ್ಟ್ರೀಯ ಪಕ್ಷಗಳು ಲಿಂಗಾಯತ ಸಮಾಜದ ವ್ಯಕ್ತಿಯನ್ನು ಮುಖ್ಯಮಂತ್ರಿಯನ್ನಾಗಿ ಮಾಡುವ ಬದ್ಧತೆ ಪ್ರಕಟಿಸುವ ಮೂಲಕ ತಮ್ಮ ಸ್ಪಷ್ಟ ನಿಲುವು ತಿಳಿಸಬೇಕು ಎಂದು ಕೂಡಲಸಂಗಮದ ಪಂಚಮಸಾಲಿ ಸಮಾಜ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.
ಬೆಳಗಾವಿ ಜೆಲ್ಲೆಯ ಮೂಡಲಗಿಯಲ್ಲಿ ಬಸವ ಸೇವಾ ಯುವಕ ಸಂಘ ಸೋಮವಾರ ಆಯೋಜಿಸಿದ್ದ ಮೂಡಲಗಿ ತಾಲ್ಲೂಕು ಮಟ್ಟದ ಬಸವ ಉತ್ಸವದ ಬೃಹತ್ ಮೆರವಣಿಗೆಗೆ ಚಾಲನೆ ನೀಡಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡಿದರು.
“ರಾಜಕಾರಣಿಗಳು ಲಿಂಗಾಯತ ಸಮಾಜವನ್ನು ರಾಜಕೀಯ ದಾಳವನ್ನಾಗಿ ಮಾಡಿಕೊಂಡು ಟೀಕೆ, ಟಿಪ್ಪಣಿ ಮಾಡುವುದನ್ನು ಬಿಡಬೇಕು” ಎಂದು ಸ್ವಾಮೀಜಿ ಎಚ್ಚರಿಸಿದರು.
“ರಾಜಕಾರಣಿಗಳು ಮಾಡುವ ಟೀಕೆಗಳು ವೈಯಕ್ತಿಕವಾಗಿರಲಿ. ಅದನ್ನು ಬಿಟ್ಟು ಒಂದು ಸಮಾಜ, ಜನಾಂಗ, ಧರ್ಮವನ್ನು ನೋಯಿಸುವ ಮಟ್ಟಕ್ಕೆ ಇರಬಾರದು. ಇದು ಯಾವ ರಾಜಕಾರಣಿಗಳಿಗೂ ಶೋಭೆ ತರಲ್ಲ” ಎಂದರು.
“ಲಿಂಗಾಯತ ಹೇಳಿಕೆ ವಿಚಾರವಾಗಿ ಸಿದ್ದರಾಮಯ್ಯನವರು ಈಗಾಗಲೇ ತಮ್ಮ ಸ್ಪಷ್ಟಿಕರಣ ನೀಡಿದ್ದಾರೆ. ಅವರ ಹೇಳಿಕೆಯನ್ನು ಮತ್ತೆ ಮುಂದುವರಿಸುವುದು ಬೇಡ” ಎಂದು ಸ್ವಾಮೀಜಿ ನುಡಿದರು.