- ಟಿಕೆಟ್ ವಿಚಾರವಾಗಿ ಬಂಡಾಯ ಸಾರಿದ ಸಂಗಣ್ಣ ಕರಡಿ
- ಬೆಂಬಲಿಗರ ಸಭೆ ಬಳಿಕ ನಿರ್ಧಾರ ಪ್ರಕಟಿಸಲಿರುವ ಸಂಸದ
ಚುನಾವಣೆ ಸಮೀಪಿಸುತ್ತಿರುವ ಹೊತ್ತಲ್ಲೇ ಬಿಜೆಪಿಯಲ್ಲಿ ಬಂಡಾಯ ಸಾರುವ ನಾಯಕರ ಸಂಖ್ಯೆ ಹೆಚ್ಚಾಗುತ್ತಿದೆ. ಜಗದೀಶ್ ಶೆಟ್ಟರ್ ರಾಜೀನಾಮೆ ಬೆನ್ನಲ್ಲೇ ಮತ್ತೊಬ್ಬ ನಾಯಕ ಬಿಜೆಪಿಗೆ ‘ಗುಡ್ ಬೈ’ ಹೇಳಲು ಮುಂದಾಗಿದ್ದಾರೆ.
ರಾಜ್ಯ ವಿಧಾನಸಭಾ ಚುನಾವಣೆಗೆ ದಿನಗಣನೆ ಶುರುವಾದ ಹಿನ್ನೆಲೆ ರಾಜ್ಯ ಬಿಜೆಪಿ ಬಂಡಾಯ ಬಿಸಿ ಎದುರಿಸುತ್ತಿದೆ. ಕೊಪ್ಪಳ ವಿಧಾನಸಭಾ ಕ್ಷೇತ್ರದ ಟಿಕೆಟ್ ವಿಚಾರವಾಗಿ ಹಾಲಿ ಸಂಸದ ಸಂಗಣ್ಣ ಕರಡಿ ಅವರು ಪಕ್ಷದ ವಿರುದ್ಧ ಬಂಡಾಯ ಸಾರಿ, ಬೆಂಬಲಿಗರ ಸಭೆ ಕರೆದಿದ್ದಾರೆ.
ಸಂಗಣ್ಣ ಕರಡಿ ಅವರು ಕೊಪ್ಪಳ ಕ್ಷೇತ್ರದ ಟಿಕೆಟ್ ಕೇಳಿದ್ದು, ವರಿಷ್ಠರು ಸಂಸದರಿಗೆ ಟಿಕೆಟ್ ಇಲ್ಲ ಎಂದು ಹೇಳಿದ್ದಾರೆ. ಕೊನೆಗೆ ತಮ್ಮ ಪುತ್ರ ಗವಿಸಿದ್ದಪ್ಪ ಕರಡಿಗೆ ಟಿಕೆಟ್ ನೀಡಿ ಎಂದಿದ್ದು, ಪುತ್ರನಿಗು ಕೂಡಾ ಟಿಕೆಟ್ ನೀಡಲು ವರಿಷ್ಠರು ನಿರಾಕರಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಈ ಹಿನ್ನೆಲೆ ಬಿಜೆಪಿಗೆ ರಾಜೀನಾಮೆ ಸಲ್ಲಿಸಲು ಮುಂದಾಗಿರುವ ಸಂಗಣ್ಣ ಕರಡಿ ಅವರು ಬೆಂಬಲಿಗರ ಸಭೆ ಬಳಿಕ ತಮ್ಮ ನಿರ್ಧಾರ ಪ್ರಕಟಿಸಲಿದ್ದಾರೆ.
ಈ ಸುದ್ದಿ ಓದಿದ್ದೀರಾ? ಜೈ ಭಾರತ ಸತ್ಯಾಗ್ರಹ ಯಾತ್ರೆಗೆ ಸಜ್ಜಾದ ಕೋಲಾರ; ಪ್ರಜಾಪ್ರಭುತ್ವದ ಉಳಿವಿಗೆ ರಾಹುಲ್ ಪ್ರಚಾರ
ಈ ಕುರಿತು ಮಾತನಾಡಿದ ಅವರು, “ನನಗೆ ಟಿಕೆಟ್ ಕೊಡುವುದಾಗಿ ಈ ಮೊದಲು ರಾಜ್ಯ ನಾಯಕರು ಭರವಸೆ ನೀಡಿದ್ದರು. ಬಿ ಎಸ್ ಯಡಿಯೂರಪ್ಪ ಅವರು ಸಹ ನನ್ನ ಹೆಸರನ್ನು ಶಿಫಾರಸು ಮಾಡಿದ್ದರು. ಪಕ್ಷದ ಆಂತರಿಕ ಸಮೀಕ್ಷೆಯ ವರದಿ ನನ್ನ ಪರವಾಗಿಯೇ ಬಂದಿದೆ. ಆದ್ದರಿಂದ ನನಗೇ ಟಿಕೆಟ್ ಕೊಡಬೇಕು” ಎಂದು ಪಟ್ಟು ಹಿಡಿದಿದ್ದಾರೆ.
ಆದರೆ, ಬಿಜೆಪಿ ಹೈಕಮಾಂಡ್ ಕೊಪ್ಪಳ ಕ್ಷೇತ್ರಕ್ಕೆ ಅಭ್ಯರ್ಥಿ ಹೆಸರು ಘೋಷಣೆ ಮಾಡುವುದನ್ನು ತಡೆ ಹಿಡಿದಿದೆ. ತಮಗೆ ಟಿಕೆಟ್ ಸಿಗದ ಸುಳಿವು ದೊರಕಿರುವ ಸಂಗಣ್ಣ ಕರಡಿ ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುವ ಸಾಧ್ಯತೆ ಇದೆ. ನಂತರ ಲೋಕಸಭೆ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎನ್ನಲಾಗಿದೆ.
ಸಂಗಣ್ಣ ಕರಡಿ ಅವರು ಮೊದಲ ಬಾರಿಗೆ 1994ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಬಳಿಕ 2008ರಲ್ಲಿ ಜೆಡಿಯುನಿಂದ, 2011ರ ಉಪಚುನಾವಣೆಯಲ್ಲಿ ಬಿಜೆಪಿಯಿಂದ, 2004 ಮತ್ತು 2013ರಲ್ಲಿ ಬಿಜೆಪಿಯಿಂದ ಕಣಕ್ಕಿಳಿದು ಸೋತಿದ್ದರು. 2014 ಮತ್ತು 2019ರಲ್ಲಿ ಸಂಸದರಾಗಿ ಆಯ್ಕೆಯಾದರು.