ಕಾಂಗ್ರೆಸ್ ಹಾಗೂ ಜೆಡಿಎಸ್ ಸರ್ಕಾರದ ಪತನಕ್ಕೆ ಕಾರಣರಾಗಿದ್ದ ಬಾಂಬೆ ಬಾಯ್ಸ್ಗೆ ಸೋಲಿನ ಭೀತಿ ಸುತ್ತಿಕೊಂಡಿದೆ. ಹಲವರು ಅವರ ಕ್ಷೇತ್ರಗಳಲ್ಲಿ ಹಿನ್ನಡೆ ಸಾಧಿಸಿದ್ದಾರೆ. ಚಿಕ್ಕಬಳ್ಳಾಪುರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿರುವ ಡಾ.ಕೆ.ಸುಧಾಕರ್ ಕಾಂಗ್ರೆಸ್ನ ಪ್ರದೀಪ್ ಈಶ್ವರ್ ಅಯ್ಯರ್ ವಿರುದ್ಧ ಹಿನ್ನಡೆ ಸಾಧಿಸಿದ್ದಾರೆ.
ಹಿರೇಕೆರೂರಿನಲ್ಲಿ ಬಿ ಸಿ ಪಾಟೀಲ್ ಹಿನ್ನಡೆ ಸಾಧಿಸಿದ್ದರೆ, ಗೋಕಾಕ್ ಕ್ಷೇತ್ರದಲ್ಲಿ ರಮೇಶ್ ಜಾರಕಿಹೊಳಿ ಹಿನ್ನಡೆ ಸಾಧಿಸಿದ್ದಾರೆ. ಇನ್ನು ಹೊಸಕೋಟೆಯಲ್ಲಿ ಬಿಜೆಪಿಯ ಎಂಟಿಬಿ ನಾಗರಾಜ್ಗೆ ಹಿನ್ನಡೆ ಸಾಧಿಸಿದ್ದಾರೆ. ಕೊಳ್ಳೇಗಾಲ ಮೀಸಲು ವಿಧಾನಸಭಾ ಕ್ಷೇತ್ರದಲ್ಲಿ ಎನ್ ಮಹೇಶ್ ಕೂಡ ಹಿನ್ನಡೆ ಸಾಧಿಸಿದ್ದಾರೆ. 2018ರಲ್ಲಿ ಎನ್ ಮಹೇಶ್ ಬಿಎಸ್ಪಿಯಿಂದ ಗೆದ್ದಿದ್ದ ಏಕೈಕ ಶಾಸಕರಾಗಿದ್ದರು. ನಂತರ ಅವರು ಬಿಜೆಪಿ ಸೇರಿದ್ದರು.
ಕಾಂಗ್ರೆಸ್ ಹಾಗೂ ಜೆಡಿಎಸ್ನಿಂದ ಬಿಜೆಪಿಗೆ ಹಾರಿದ್ದ 16 ಮಂದಿ ಶಾಸಕರು ನಂತರ ಬಿಜೆಪಿ ಸರ್ಕಾರ ಬರಲು ಕಾರಣರಾಗಿದ್ದರು. ಅವರ ಪೈಕಿ ಸದ್ಯ ಹಲವರು ಹಿನ್ನಡೆ ಸಾಧಿಸಿದ್ದು, ಸೋಲಿನ ಆತಂಕದಲ್ಲಿದ್ದಾರೆ. ಆದರೆ, ಇನ್ನೂ ಹಲವು ಹಂತಗಳು ಬಾಕಿಯಿದ್ದು, ಮುಂದಿನ ಹಂತಗಳಲ್ಲಿ ತಮ್ಮ ಮತ ಗಳಿಕೆ ಹೆಚ್ಚಾಗಬಹುದು ಎನ್ನುವ ವಿಶ್ವಾಸದಲ್ಲಿದ್ದಾರೆ.
ಇದಲ್ಲದೇ ಚುಣಾವಣಾ ಕಣದಲ್ಲಿರುವ ಎಂಟು ಸಚಿವರು ಹಿನ್ನಡೆ ಸಾಧಿಸಿದ್ದಾರೆ. ವರುಣಾ ಹಾಗೂ ಚಾಮರಾಜನಗರ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿರುವ ಸಚಿವ ಸೋಮಣ್ಣ, ಹಾಲಪ್ಪ ಆಚಾರ್, ರಾಮುಲು ಸೇರಿದಂತೆ ಹಲವು ಸಚಿವರು ಸದ್ಯಕ್ಕೆ ಸ್ಥಿತಿಯಲ್ಲಿ ಹಿನ್ನಡೆ ಸಾಧಿಸಿದ್ದಾರೆ.