- ಈಶ್ವರಪ್ಪ ಪುತ್ರ ಕಾಂತೇಶ್ಗೆ ಕೈತಪ್ಪಿದ ಟಿಕೆಟ್
- 2015ರಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ್ದ ‘ಚೆನ್ನಿ’
ಹಿಂದೂಗಳ ಭಾವನೆಗೆ ಧಕ್ಕೆ ತರುವ ಸಿದ್ದರಾಮಯ್ಯ ಅವರ ರುಂಡ ಚೆಂಡಾಡಬೇಕಾಗುತ್ತದೆ ಎಂದಿದ್ದ ಮಹಾನಗರ ಪಾಲಿಕೆ ಸದಸ್ಯ ಚನ್ನಬಸಪ್ಪ ಅವರಿಗೆ ಬಿಜೆಪಿ ಶಿವಮೊಗ್ಗ ಕ್ಷೇತ್ರದ ಟಿಕೆಟ್ ಘೋಷಿಸಿದೆ.
ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ತೀವ್ರ ಕುತೂಹಲ ಕೆರಳಿಸಿದ್ದ ಶಿವಮೊಗ್ಗ ನಗರ ಕ್ಷೇತ್ರ ಚನ್ನಬಸಪ್ಪ ಯಾನೆ ಪಾಲಾಗಿದೆ. ಕೆ ಎಸ್ ಈಶ್ವರಪ್ಪ ಅವರಿಗೆ ಟಿಕೆಟ್ ನಿರಾಕರಿಸಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರುಂಡ ಕಡೆಯಬೇಕಾಗುತ್ತದೆ ಎಂದಿದ್ದ ಚನ್ನಬಸಪ್ಪ ಅಲಿಯಾಸ್ ‘ಚೆನ್ನಿ’ಗೆ ಬಿಜೆಪಿ ಹೈಕಮಾಂಡ್ ಮಣೆ ಹಾಕಿದೆ.
ಹೌದು, 2015ರ ನವಂಬರ್ ತಿಂಗಳಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗೋಮಾಂಸ ತಿನ್ನುವುದು ಅವರವರ ಹಕ್ಕು ಎಂದಿದ್ದರು. ಈ ಹೇಳಿಕೆ ವಿರೋಧಿಸಿ ಶಿವಮೊಗ್ಗದಲ್ಲಿ ಬಲಪಂಥೀಯ ಸಂಘಟನೆಗಳು ಬೃಹತ್ ಪ್ರತಿಭಟನೆ ನಡೆಸಿದ್ದವು.
ಬಹಿರಂಗ ಸಭೆಯಲ್ಲಿ ಮಾತನಾಡಿದ್ದ ಚನ್ನಬಸಪ್ಪ, “ಹಿಂದೂಗಳ ಭಾವನೆ ಧಕ್ಕೆ ತರುವ ಸಿದ್ದರಾಮಯ್ಯ ಅವರ ರುಂಡ ಚೆಂಡಾಡಬೇಕಾಗುತ್ತದೆ” ಎಂದು ಹೇಳಿಕೆ ನೀಡಿ, ವಿವಾದಕ್ಕೆ ಕಾರಣವಾಗಿದ್ದರು. ಈ ಕುರಿತು ಅವರ ವಿರುದ್ಧ ಪ್ರಕರಣವೂ ದಾಖಲಾಗಿತ್ತು.
ಈ ಸುದ್ದಿ ಓದಿದ್ದೀರಾ? ಪ್ರಜಾಪ್ರಭುತ್ವದಲ್ಲಿ ಜನರೇ ಜನಾರ್ಧನರು, ಮೋದಿ ದೇವರಲ್ಲ: ಸಿದ್ದರಾಮಯ್ಯ
ಈಶ್ವರಪ್ಪಗೆ ತೀವ್ರ ನಿರಾಸೆ
ತಮ್ಮ ಪುತ್ರ ಇ ಕಾಂತೇಶ್ ಅವರಿಗೆ ಟಿಕೆಟ್ ಕೊಡಿಸಬೇಕು ಎಂದಿದ್ದ ಹಠ ಹಿಡಿದಿದ್ದ ಕೆ.ಎಸ್ ಈಶ್ವರಪ್ಪ ಅವರಿಗೆ ತೀವ್ರ ನಿರಾಸೆಯಾಗಿದೆ.
ಕೆ ಎಸ್ ಈಶ್ವರಪ್ಪ ಅವರು ಬಿಜೆಪಿ ಹೈಕಮಾಂಡ್ ನಿರ್ದೇಶನದಂತೆ ಚುನವಣಾ ರಾಜಕೀಯಕ್ಕೆ ಗುಡ್ ಬೈ ಹೇಳಿದ್ದಾರೆ. ಆದರೆ, ಶಿವಮೊಗ್ಗ ಅಖಾಡದಿಂದ ತಮ್ಮ ಪುತ್ರರನ್ನೇ ಕಣಕ್ಕಿಳಿಸಬೇಕು ಎಂದು ಪಟ್ಟು ಹಿಡಿದಿದ್ದರು.
ಆದರೆ, ಬಿಜೆಪಿ ಹೈಕಮಾಂಡ್ ಕಾಂತೇಶ್ ಅವರಿಗೆ ಟಿಕೆಟ್ ತಪ್ಪಿಸಿ, ‘ಕಟ್ಟರ್ ಹಿಂದೂತ್ವವಾದಿ’ ಲಿಂಗಾಯಿತ ಸಮುದಾಯದ ಚನ್ನಬಸಪ್ಪ ಅವರಿಗೆ ಟಿಕೆಟ್ ಫೈನಲ್ ಮಾಡಿದೆ.
ಈಶ್ವರಪ್ಪ ಅವರ ಪುತ್ರನ ಜೊತೆಗೆ ಮಾಜಿ ಎಂಎಲ್ಸಿ ಭಾನುಪ್ರಕಾಶ್ ಪುತ್ರ ಹರಿಕೃಷ್ಣ ದತ್ತಾತ್ರಿ, ಜ್ಯೋತಿಪ್ರಕಾಶ್ ಅವರ ಹೆಸರುಗಳು ಸಹ ಹೈಕಮಾಂಡ್ ನ ಮುಂದಿದ್ದವು.
ಟಿಕೆಟ್ ಕೈ ತಪ್ಪಿರುವ ಕುರಿತು ಮಾತನಾಡಿರುವ ಕೆ ಎಸ್ ಈಶ್ವರಪ್ಪ, “ಚನ್ನಬಸಪ್ಪಗೆ ಶಿವಮೊಗ್ಗ ಟಿಕೆಟ್ ನೀಡಿದ್ದಕ್ಕೆ ಸಂತಸ ಆಗಿದೆ. ಚನ್ನಬಸಪ್ಪ ಬಿಜೆಪಿಯ ನಿಷ್ಠಾವಂತ ಪ್ರಾಮಾಣಿಕ ಕಾರ್ಯಕರ್ತ. ಬಿಜೆಪಿ ಸಂಘಟನೆಯಲ್ಲಿ ಚನ್ನಬಸಪ್ಪ ಪ್ರಮುಖ ಪಾತ್ರವಹಿಸಿದ್ದಾರೆ. ಆಡಳಿತದಲ್ಲಿ ಅನುಭವ ಇರುವ ವ್ಯಕ್ತಿಗೆ ಬಿಜೆಪಿ ಮಣೆ ಹಾಕಿದೆ” ಎಂದು ಹೇಳಿದ್ದಾರೆ.
“ಕಾಂತೇಶ್ಗೆ ಟಿಕೆಟ್ ನೀಡಬೇಕೆಂದು ಬೆಂಬಲಿಗರು ಒತ್ತಾಯಿಸಿದ್ದರು. ಆದರೆ ಪಕ್ಷದ ನಿರ್ಧಾರಕ್ಕೆ ನಾವೆಲ್ಲರೂ ಬದ್ಧರಿದ್ದೇವೆ. ಯಾವುದೇ ಪ್ರಶ್ನೆ ಮಾಡದಂತೆ ಚನ್ನಬಸಪ್ಪ ಗೆಲ್ಲಿಸಲು ಶ್ರಮಿಸಬೇಕು” ಎಂದಿದ್ದಾರೆ.
ಯಾರು ಈ ಚನ್ನಬಸಪ್ಪ?
ಚನ್ನಬಸಪ್ಪ ಆರ್ಎಸ್ಎಸ್ನ ಕಾರ್ಯಕರ್ತನಾಗಿದ್ದು, ಬಿಜೆಪಿ ನಗರ ಅಧ್ಯಕ್ಷನಾಗಿ, ಶಿವಮೊಗ್ಗ ನಗರ ಸಭಾ ಅಧ್ಯಕ್ಷನಾಗಿ, ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷನಾಗಿ, ಮಹಾನಗರ ಪಾಲಿಕೆ ಮೇಯರ್ ಆಗಿ ಕೆಲಸ ಮಾಡಿದ್ದಾನೆ. ಪ್ರಸ್ತುತ ಪಾಲಿಕೆ ಸದಸ್ಯನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.