- ಟ್ವೀಟ್ ಮಾಡಿ ಬಿಜೆಪಿ ವಿರುದ್ಧ ಕುಟುಕಿದೆ ಸುರ್ಜೇವಾಲ
- ಬಿಜೆಪಿ ತನ್ನ ಪಾಪಕ್ಕೆ ಬೆಲೆ ತೆರಬೇಕಾಗುತ್ತದೆ ಎಂದ ಕಾಂಗ್ರೆಸ್
ಕಾಂಗ್ರೆಸ್ ನಾಯಕರಾದ ಸಿದ್ದರಾಮಯ್ಯ ಅವರನ್ನು ಡಿ ಕೆ ಶಿವಕುಮಾರ್ ವಿರುದ್ಧ ಎತ್ತಿಕಟ್ಟುವ ನಿಟ್ಟಿನಲ್ಲಿಯೇ ‘ಎನ್ಡಿಟಿವಿ’ ತಿರುಚಿದ ಸಂದರ್ಶನವನ್ನು ವರದಿ ಮಾಡಿದೆ. ಈ ಕುರಿತು ಪ್ರತಿಕ್ರಿಯಿಸಿದ ಸುರ್ಜೇವಾಲಾ, “ಅದಾನಿ ಟಿವಿಯಿಂದಲೂ ಬಿಜೆಪಿ ಬಚಾವಾಗಲ್ಲ” ಎಂದಿದ್ದಾರೆ.
ರಾಜ್ಯ ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿರುವ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳ ನಡುವೆ ಕೆಸರೆರಚಾಟ ಸಾಮಾನ್ಯ. ಆದರೆ, ರಾಷ್ಟ್ರೀಯ ಮಾಧ್ಯಮವೊಂದು, ತನ್ನ ವಿಶೇಷ ಸಂದರ್ಶನವನ್ನೇ ತಿರುಚಿ ಪಕ್ಷವೊಂದರ ಗೊಂದಲಕ್ಕೆ ಕಾರಣವಾಗಿದೆ.
ಹೌದು, ಸಿದ್ದರಾಮಯ್ಯ ಅವರು ‘ಎನ್ಡಿಟಿವಿ’ಗೆ ನೀಡಿದ ವಿಶೇಷ ಸಂದರ್ಶನದಲ್ಲಿ, “ನಾನು ಮತ್ತು ಡಿ ಕೆ ಶಿವಕುಮಾರ್ ಇಬ್ಬರು ಸಹ ಮುಖ್ಯಮಂತ್ರಿ ಆಕಾಂಕ್ಷಿಗಳೇ. ಆದರೆ, ಹೈಕಮಾಂಡ್ ಡಿಕೆ ಶಿವಕುಮಾರ್ಗೆ ಸಿಎಂ ಸ್ಥಾನ ನೀಡುವುದಿಲ್ಲ” ಎಂದಿದ್ದಾರೆ. ಎನ್ನುವ ವರದಿಯನ್ನು ಮಾಧ್ಯಮ ಪ್ರಕಟಿಸಿತ್ತು.
ಬೆನ್ನಲ್ಲೇ ರಾಜ್ಯದ ಅನೇಕ ಮಾಧ್ಯಮಗಳು ‘ಎನ್ಡಿಟಿವಿ’ಯ ಸಂದರ್ಶನವನ್ನು ವರದಿ ಮಾಡಿದ್ದವು. ಕಾಂಗ್ರೆಸ್ನೊಳಗೆ ಮುಖ್ಯಮಂತ್ರಿ ಗಾದಿಗೆ ಒಳಜಗಳಗಳು ಜೋರಾಗಿವೆ ಎನ್ನುವ ನಿಟ್ಟಿನಲ್ಲಿ ಪ್ರಸಾರ ಮಾಡಿದ್ದವು. ಸಾಲದೆಂಬಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಾಂಗ್ರೆಸ್ ಪಕ್ಷದಲ್ಲಿ ಗುಂಪುಗಾರಿಕೆ ಇದೆ, ಅಧಿಕಾರವೇ ಸಿಕ್ಕಿಲ್ಲ ಆಗಲೇ ಪೈಪೋಟಿ ಶುರುವಾಗಿದೆ ಎಂದು ಟೀಕಿಸಿದ್ದನ್ನು ಸುದ್ದಿ ಮಾಡತೊಡಗಿದರು.
ಇದೀಗ ಎಐಸಿಸಿ ರಾಜ್ಯ ಚುನಾವಣಾ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ನಿಜಾಂಶವನ್ನು ಬಹಿರಂಗಪಡಿಸಿದ್ದಾರೆ. ಎನ್ಡಿಟಿವಿಯಲ್ಲಿ ಸಿದ್ದರಾಮಯ್ಯ ಆಡಿರುವ ಮಾತು ಮತ್ತು ಮಾಧ್ಯಮದ ವರದಿ ಎರಡನನ್ನೂ ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ.
ಸುರ್ಜೇವಾಲ ಹಂಚಿಕೊಂಡಿರುವ ವಿಡಿಯೋದಲ್ಲಿ, ಸಿದ್ದರಾಮಯ್ಯ ಅವರು ಎಲ್ಲೂ ಹೈಕಮಾಂಡ್ ಡಿ ಕೆ ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಮಾಡುವುದಿಲ್ಲ ಎಂದು ಹೇಳಿಲ್ಲ. ಬದಲಿಗೆ ಪಕ್ಷದ ಶಾಸಕರು ಮತ್ತು ಹೈಕಮಾಂಡ್ ಮುಖ್ಯಮಂತ್ರಿ ತೀರ್ಮಾನ ಮಾಡುತ್ತದೆ ಎಂದಿದ್ದಾರೆ.
“ಕರ್ನಾಟಕ ಮತ್ತು ಬಿಜೆಪಿ ಶಾಸಕರು ಮತ್ತು ಎಂಎಲ್ಸಿಗಳ ರಾಜೀನಾಮೆಯಲ್ಲಿ ಪ್ರತಿದಿನವೂ ಬಿಜೆಪಿ ಕುಸಿಯುತ್ತಿದ್ದಂತೆ, ಕಾಂಗ್ರೆಸ್ ನಾಯಕರಲ್ಲಿ ಬಿರುಕುಗಳನ್ನು ಸೃಷ್ಟಿಸಲು ಬಿಜೆಪಿ ಅದಾನಿಯವರ ಎನ್ಡಿಟಿವಿಯನ್ನು ಬಳಸುತ್ತದೆ” ಎಂದು ಸುರ್ಜೇವಾಲ ಟೀಕಿಸಿದ್ದಾರೆ.
“ಬಿಜೆಪಿಯ ಮುಳುಗುತ್ತಿರುವ ಹಡಗನ್ನು ನೋಡಿಕೊಳ್ಳುವ ಮತ್ತು ಕೈಬಿಡುವ ಕೆಲಸವನ್ನು ನಿಲ್ಲಿಸುವ ಸಮಯ ಬಂದಿದೆ. 40% ಸರ್ಕಾರ ತನ್ನ ಪಾಪಗಳಿಗೆ ಬೆಲೆ ತೆರಬೇಕಾಗುತ್ತದೆ. ಟಿವಿ ಕೂಡ ಅದನ್ನು ಉಳಿಸಲು ಸಾಧ್ಯವಿಲ್ಲ” ಎಂದು ಟ್ವೀಟ್ ಮಾಡಿದ್ದಾರೆ.