ಕಳೆದ ಒಂದು ವರ್ಷದಿಂದ ಪಾದಯಾತ್ರೆ ಮೂಲಕ ಯಾದಗಿರಿ ಮತಕ್ಷೇತ್ರದ ಹಳ್ಳಿಗಳಲ್ಲಿ ಸುತ್ತಾಡಿ ಒಂದು ರೂಪಾಯಿ ನಾಣ್ಯ ಸಂಗ್ರಹಿಸಿದ್ದ ಪಕ್ಷೇತರ ಅಭ್ಯರ್ಥಿ ಯಂಕಪ್ಪ ದೇವಿಂದ್ರಪ್ಪ ರಾಮಸಮುದ್ರ ಮಂಗಳವಾರ ನಾಮಪತ್ರ ಸಲ್ಲಿಸಿದ್ದಾರೆ. ಈ ವೇಳೆ, ಅವರು ಹಳ್ಳಿಗಳಲ್ಲಿ ಸಂಗ್ರಹಿಸಿದ್ದ ನಾಣ್ಯಗಳನ್ನು ನೀಡಿ, ಠೇವಣಿ ಭರಿಸಿದ್ದಾರೆ.
ಯಾದಗಿರಿ ತಹಶೀಲ್ದಾರ್ ಕಚೇರಿಗೆ ಆಗಮಿಸಿದ ಯಂಕಪ್ಪ, ಒಂದು ರೂಪಾಯಿ ನಾಣ್ಯಗಳನ್ನು ಠೇವಣಿಯಾಗಿ ಚುನಾವಣೆ ಅಧಿಕಾರಿಗಳಿಗೆ ಸಲ್ಲಿಸಿದರು. ಮೂವರು ಸಿಬ್ಬಂದಿ ಸುಮಾರು 2 ಗಂಟೆ ಕಾಲ ನಾಣ್ಯಗಳನ್ನು ಎಣಿಕೆ ಮಾಡಿದರು.
ಒಟ್ಟು 10 ಸಾವಿರ ರೂಪಾಯಿ ಹಣ ಒಂದು ರೂಪಾಯಿ ನಾಣ್ಯಗಳಲ್ಲಿ ಸಂಗ್ರಹವಾಗಿತ್ತು. ““ಒಂದು ರೂಪಾಯಿಯಲ್ಲಿ ಒಂದು ಮತದಾನದಿಂದ ಒಂದು ದಿನ. “ನನಗೆ ನಿಮ್ಮ ಮತದಾನ ಕೊಡಿ, ನಾನು ನಿಮಗೆ ಬಡತನದಿಂದ ಸ್ವಾತಂತ್ರ್ಯ ಕೊಡಿಸುವೆ” ಎನ್ನುವ ಘೋಷಗಳೊಂದಿಗೆ ರಥಯಾತ್ರೆ ಮೂಲಕ ಗ್ರಾಮಗಳಲ್ಲಿ ಯಂಕಪ್ಪ ಸಂಚರಿಸಿ, ನಾಣ್ಯಗಳನ್ನು ಸಂಗ್ರಹಿಸಿದ್ದರು.
ಮೈಸೂರಿನ ಮಾನಸ ಗಂಗೋತ್ರಿ ವಿಶ್ವವಿದ್ಯಾಲಯದ ರಾಜ್ಯಶಾಸ್ತ್ರ ವಿಭಾಗದಲ್ಲಿ ಎಂ.ಎ ವಿದ್ಯಾರ್ಥಿಯಾಗಿರುವ ಯಂಕಪ್ಪ, 23ನೇ ವಯಸ್ಸಿನಲ್ಲಿ ಮನೆ ತೊರೆದು ಮತದಾನ ಜಾಗೃತಿಗಾಗಿ ಗ್ರಾಮಗಳಲ್ಲಿ ಸಂಚಾರ ಮಾಡುತ್ತಿದ್ದಾರೆ.
ಈ ಸುದ್ದಿ ಓದಿದ್ದೀರಾ? ಕೊಪ್ಪಳ | ಬಿಜೆಪಿಯ ತತ್ವ, ಸಿದ್ಧಾಂತಗಳ ಮಾತು ಕೇಳಿದರೆ ವಾಂತಿ ಬರುತ್ತದೆ: ಜನಾರ್ದನ ರೆಡ್ಡಿ
“ಒಬ್ಬರಿಂದ ಕೇವಲ ಒಂದು ರೂಪಾಯಿ ನಾಣ್ಯವನ್ನಷ್ಟೆ ಸಂಗ್ರಹ ಮಾಡಿದ್ದಾರೆ. ₹10 ಮುಖಬೆಲೆಯ ನೋಟು ಕೊಟ್ಟರೂ ಸ್ವೀಕರಿಸಿಲ್ಲ. ಯಂಕಪ್ಪ ಬಡತನದಲ್ಲಿ ಬೆಳೆದಿದ್ದರಿಂದ ಬಡತನವನ್ನು ಅಳಿಸಲು ಸಾಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಬಾರಿ ಅಲ್ಲದಿದ್ದರೂ ಮುಂದಿನ ಬಾರಿಯಾದರೂ ಚುನಾವಣೆಯಲ್ಲಿ ಗೆಲ್ಲಲಿ ಎನ್ನುವುದು ನಮ್ಮ ಆಸೆಯಾಗಿದೆ” ಎಂದು ರಾಮಸಮುದ್ರ ಗ್ರಾಮದ ನಿವಾಸಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.