ಸಾವಿರ ವರ್ಷಗಳ ಇತಿಹಾಸವಿರುವ ದೇವರಕೆರೆ
ಐತಿಹಾಸಿಕ ಕೆರೆಗೆ ಹರಿದು ಬರುತ್ತಿದೆ ಕೊಳಚೆ ನೀರು
ರಿಯಲ್ ಎಸ್ಟೇಟ್ ಹಾವಳಿಗೆ ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಕೆರೆಗಳ ಸಂಖ್ಯೆ ಕಡಿಮೆಯಾಗುತ್ತಿದೆ ಎಂಬ ಕೂಗು ಆಗಾಗ ಕೇಳಿ ಬರುತ್ತಲೇ ಇರುತ್ತದೆ. ಈ ನಡುವೆ ನಗರದಲ್ಲಿರುವ ಸಾವಿರ ವರ್ಷಗಳ ಇತಿಹಾಸವುಳ್ಳ ʼದೇವರಕೆರೆʼಯನ್ನು ಬಿಬಿಎಂಪಿ ನಾಶ ಮಾಡುತ್ತಿದೆ ಎಂದು ಬಹುಭಾಷಾ ನಟ ಕಿಶೋರ್ ಕುಮಾರ್ ಆರೋಪಿಸಿದ್ದು, ಕೆರೆಯ ರಕ್ಷಣೆಗೆ ಕರೆ ನೀಡಿದ್ದಾರೆ.
ಬೆಂಗಳೂರಿನ ದಕ್ಷಿಣ ಭಾಗದಲ್ಲಿರುವ ದೇವರಕೆರೆಗೆ ಕೊಳಚೆ ನೀರು ಹರಿದು ಬರುತ್ತಿರುವ ವಿಡಿಯೋವನ್ನು ತಮ್ಮ ʼಇನ್ಸ್ಟಾಗ್ರಾಂʼ ಖಾತೆಯಲ್ಲಿ ಹಂಚಿಕೊಂಡಿರುವ ಕಿಶೋರ್, “ಬೆಂಗಳೂರಿನ ದಕ್ಷಿಣ ಭಾಗದಲ್ಲಿ ಸಾವಿರ ವರ್ಷಗಳ ಇತಿಹಾಸವಿರುವ ದೇವರಕೆರೆ ಇದೆ. ಈ ಕೆರೆ ಹೊಯ್ಸಳರ ಕಾಲದ್ದು ಎಂದು ಪುರಾತತ್ವ ಇಲಾಖೆ ದೃಢಪಡಿಸಿದೆ. ಈ ಹಿಂದೆ ಅರಣ್ಯ ಇಲಾಖೆಯ ಸುಪರ್ಧಿಯಲ್ಲಿದ್ದ ಈ ಕೆರೆ ಸ್ವಾಭಾವಿಕವಾಗಿ ಶುದ್ಧ, ತಾಜಾ ನೀರಿನಿಂದ ಕೂಡಿತ್ತು. ಕಳೆದ 10 ವರ್ಷಗಳ ಹಿಂದೆ ಈ ಕೆರೆಯನ್ನು ಬಿಬಿಎಂಪಿಯ ಸುಪರ್ಧಿಗೆ ನೀಡಲಾಯಿತು. ಆದರೆ, ಬಿಬಿಎಂಪಿ ಅನಗತ್ಯ ಅಭಿವೃದ್ಧಿಯ ಹೆಸರಿನಲ್ಲಿ ಜನರ ತೆರಿಗೆ ಹಣವನ್ನು ಬೇಕಾಬಿಟ್ಟಿ ಖರ್ಚು ಮಾಡಿ ಈ ಐತಿಹಾಸಿಕ ಕೆರೆಯನ್ನು ಕೇವಲ 5 ವರ್ಷಗಳಲ್ಲೇ ನಾಶ ಮಾಡಿತು” ಎಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
“ಕೆಲಸಕ್ಕೆ ಬಾರದ ಅಭಿವೃದ್ಧಿಯ ಹೆಸರಲ್ಲಿಇನ್ನೊಂದು ಕೆರೆಯನ್ನು ಕಳೆದುಕೊಳ್ಳಲು ಸಿದ್ಧರಾಗಿದ್ದೀರಾ? ಅಥವಾ ಪರಿಸ್ಥಿತಿ ಕೈ ಮೀರುವ ಮುನ್ನ ಸಂಬಂಧ ಪಟ್ಟವರನ್ನು ಪ್ರಶ್ನಿಸಿ, ಕ್ರಮಕ್ಕೆ ಆಗ್ರಹಿಸುತ್ತೀರಾ” ಎಂದು ಕೆರೆಯ ಸಂರಕ್ಷಣೆಗೆ ಕರೆ ನೀಡಿದ್ದಾರೆ.
ಕಿಶೋರ್ ಅವರು ತಮ್ಮ ʼಇನ್ಸ್ಟಾಗ್ರಾಂʼ ಖಾತೆಯಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ಕೊಳಚೆ ನೀರು ಕೆರೆಯನ್ನು ಸೇರುತ್ತಿರುವುದು ಸ್ಪಷ್ಟವಾಗಿದೆ. “ಕೇವಲ 10 ನಿಮಿಷಗಳ ಕಾಲ ಸುರಿದ ಮಳೆಗೆ ಎಷ್ಟು ದೊಡ್ಡ ಪ್ರಮಾಣದಲ್ಲಿ ಕೊಳಚೆ ನೀರು ಕೆರೆಯನ್ನು ತುಂಬಿಕೊಳ್ಳುತ್ತಿದೆ ನೋಡಿ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.