- ಸಲ್ಮಾನ್ ಖಾನ್ ಮೇಲೂ ಕೊಲೆ ಯತ್ನದ ಆರೋಪ ಮಾಡಿದ್ದ ಕಮಲ್
- ಬಾಲಿವುಡ್ನಲ್ಲಿ ಸತ್ಯ ಹೇಳಿದವರಿಗೆ ಉಳಿಗಾಲವಿಲ್ಲ ಎಂದ ವಿಮರ್ಶಕ
ಬಾಲಿವುಡ್ನ ಸ್ಟಾರ್ ನಟ ಅಕ್ಷಯ್ ಕುಮಾರ್ ತಮ್ಮನ್ನು ಕೊಲೆ ಮಾಡಲು ಸುಪಾರಿ ನೀಡಿರುವುದಾಗಿ ಸ್ವಯಂ ಘೋಷಿತ ಸಿನಿಮಾ ವಿಮರ್ಶಕ ಕಮಲ್ ಆರ್ ಖಾನ್ ಟ್ವಿಟರ್ನಲ್ಲಿ ಗಂಭೀರ ಆರೋಪ ಮಾಡಿದ್ದಾರೆ. ತಮ್ಮ ಸರಣಿ ಟ್ವೀಟ್ಗಳು ವೈರಲ್ ಆಗುತ್ತಲೇ ಅವುಗಳಲ್ಲಿ ಕೆಲವು ಟ್ವೀಟ್ಗಳನ್ನು ಅಳಿಸಿ ಹಾಕಿದ್ದಾರೆ.
ಸರಣಿ ಟ್ವೀಟ್ಗಳನ್ನು ಮಾಡಿರುವ ಕಮಲ್ ಆರ್ ಖಾನ್, “ಅಕ್ಷಯ್ ಕುಮಾರ್ ಒಬನನ್ನು ಹೊರತುಪಡಿಸಿ ಬಾಲಿವುಡ್ನಲ್ಲಿರುವ ಎಲ್ಲರ ಜೊತೆಗೆ ನಾನು ಉತ್ತಮ ಬಾಂಧವ್ಯ ಹೊಂದಿದ್ದೇನೆ. ನಾನು ಜೈಲಿನಲ್ಲಿದ್ದಾಗ ಆತನೇ ನನ್ನನ್ನು ಕೊಲ್ಲಲು ಸುಪಾರಿ ನೀಡಿದ್ದ. ನಾನು ಜೈಲಿಗೆ ಹೋಗಿದ್ದಕ್ಕೂ ಆತನೇ ಕಾರಣ. ಈಗ ಮತ್ತೊಮ್ಮೆ ನನ್ನನ್ನು ಪೊಲೀಸ್ ಠಾಣೆಯಲ್ಲಿ ಅಥವಾ ಜೈಲಿನಲ್ಲಿ ಕೊಲ್ಲಲು ಸುಪಾರಿ ನೀಡುತ್ತಿದ್ದಾನೆ. ಒಂದು ವೇಳೆ ನನಗೇನಾದರೂ ಆದರೆ ಸಲ್ಮಾನ್ ಖಾನ್, ಶಾರುಖ್ ಖಾನ್, ಕರಣ್ ಜೋಹರ್ ಯಾರೂ ಕಾರಣರಾಗುವುದಿಲ್ಲ. ಅಕ್ಷಯ್ ಕುಮಾರ್ ನನ್ನ ಸಾವಿಗೆ ನೇರ ಹೊಣೆಗಾರನಾಗುತ್ತಾನೆ” ಎಂದಿದ್ದಾರೆ.
“ಅಕ್ಷಯ್ ಕುಮಾರ್ನನ್ನು ನಾನು ಕೆನೆಡಿಯನ್ ಕುಮಾರ್ ಎಂದು ಕರೆಯಬಾರದಂತೆ. ಆತ ಎಷ್ಟು ದಿನಗಳ ಕೆನಡಾದ ಪೌರತ್ವ ಮತ್ತು ಕೆನಾಡದಲ್ಲಿ ಕೋಟ್ಯಾಂತರ ಮೌಲ್ಯದ ಆಸ್ತಿಯನ್ನು ಹೊಂದಿರುತ್ತಾನೊ, ಅಲ್ಲಿಯವರೆಗೆ ನಾನು ಆತನನ್ನು ಕೆನಡಿಯನ್ ಕುಮಾರ್ ಎಂದೇ ಕರೆಯುತ್ತೇನೆ. ಅದಕ್ಕಾಗಿ ಆತ ತನ್ನ ಪ್ರಭಾವಳಿಯನ್ನು ಬಳಸಿ ನನ್ನನ್ನು ಕೊಂದರು ಪರವಾಗಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಕ್ಷಯ್ ಕುಮಾರ್ ಭಾರತ ಸರ್ಕಾರಕ್ಕೆ ಈವರೆಗೆ 800 ಕೋಟಿ ರೂಪಾಯಿ ತೆರಿಗೆ ಕಟ್ಟಿದ್ದಾರೆ ಅವರು ಭಾರತೀಯ ಎಂದು ನಟನನ್ನು ಸಮರ್ಥಿಸಿಕೊಂಡಿರುವ ಮಾಡಿದ ವ್ಯಕ್ತಿಗೆ ಟ್ವಿಟ್ ಮೂಲಕವೇ ತಿರುಗೇಟು ನೀಡಿರುವ ಕಮಲ್ ಖಾನ್, “ಆತ 800 ಕೋಟಿ ರೂಪಾಯಿ ತೆರಿಗೆ ಕಟ್ಟಿದ್ದಾನೊ ಇಲ್ಲವೊ ಗೊತ್ತಿಲ್ಲ. ಹಾಗೇನಾದರೂ ಆತ ಅಷ್ಟು ಮೊತ್ತದ ತೆರಿಗೆ ಕಟ್ಟಿದ್ದರೆ ಕೆನಡಾದಲ್ಲಿರುವ ತನ್ನ ಆಸ್ತಿಯನ್ನೇನು ಮಾರಿ ಕಟ್ಟಿದ್ದಲ್ಲವಲ್ಲ. ಭಾರತೀಯರಿಂದಲೇ 8 ಸಾವಿರ ಕೋಟಿ ರೂಪಾಯಿ ಲೂಟಿ ಹೊಡೆದಿದ್ದಕ್ಕೇ 800 ಕೋಟಿ ರೂಪಾಯಿ ತೆರಿಗೆ ಕಟ್ಟಿರುತ್ತಾನಲ್ಲವೇ” ಎಂದು ಮರು ಪ್ರಶ್ನೆ ಹಾಕಿದ್ದಾರೆ.
“ನನ್ನನ್ನು ಜೈಲಿಗೆ ಹಾಕಿಸುವುದರಿಂದ ಅಥವಾ ಕೊಲ್ಲುವುರಿಂದ ವಾಸ್ತವತೆ ಬದಲಾಗುವುದಿಲ್ಲ. ಜಗತ್ತು ಎಂದಿಗೂ ಕೆನಡಿಯನ್ ಕುಮಾರ್ ಎಂದೇ ಕರೆಯುತ್ತದೆ ಎಂಬುದನ್ನು ಅಕ್ಷಯ್ ತಿಳಿದುಕೊಳ್ಳಬೇಕು. ಯಾವತ್ತಿಗೆ ಕೇಂದ್ರದಲ್ಲಿ ಸರ್ಕಾರ ಬದಲಾಗುತ್ತದೊ, ಆವತ್ತು ಕುಮಾರ್ ಭಾರತದಿಂದ ಪಲಾಯನ ಮಾಡುತ್ತಾನೆ. ಇಲ್ಲವೇ ಜೈಲು ಸೇರುತ್ತಾನೆ. ನನ್ನ ಮಾತನ್ನು ನೆನಪಿಟ್ಟುಕೊಳ್ಳಿ” ಎಂದು ಭವಿಷ್ಯ ನುಡಿದಿದ್ದಾರೆ.
“ಬಾಲಿವುಡ್ನಲ್ಲಿ ಸತ್ಯ ಹೇಳುವುದೆಂದರೆ ಜೀವದ ಹಂಗು ದೊರೆದಂತೆ. ಸುಶಾಂತ್ ಕೂಡ ಸತ್ಯವನ್ನೇ ಹೇಳಿದ್ದ. ಅದೇ ಕಾರಣಕ್ಕೆ ಸಾವಿಗೀಡಾದ. ಈಗ ಅಕ್ಷಯ್ ನನ್ನು ಕೊಲ್ಲಿಸಲು ಯತ್ನಿಸುತ್ತಿದ್ದಾನೆ. ಆದರೆ, ಅಕ್ಷಯ್ ಕುಮಾರ್ ಭಾರತೀಯನಲ್ಲ, ಕೆನಡಾದವನು ಎಂದು ಸಾಯವು ಕೊನೆ ಗಳಿಗೆಯ ವರೆಗೂ ಹೇಳುತ್ತೇನೆ” ಎಂದು ನಟನ ವಿರುದ್ಧ ಸರಣಿಯಾಗಿ ಗಂಭೀರ ಆರೋಪಗಳನ್ನು ಮಾಡಿದ್ದಾರೆ.
ಕಳೆದ ವರ್ಷ ದುಬೈನಿಂದ ಭಾರತಕ್ಕೆ ಬಂದಿಳಿದಿದ್ದ ಕಮಲ್ ಆರ್ ಖಾನ್ ಅವರನ್ನು ಬಾಲಿವುಡ್ನ ಖ್ಯಾತ ನಟರ ಬಗ್ಗೆ ವಿವಾದಾತ್ಮಕ ಟ್ವೀಟ್ ಮಾಡಿದ ಆರೋಪದ ಮೇಲೆ ಮುಂಬೈ ಪೊಲೀಸರು ಬಂಧಿಸಿದ್ದರು. ತಿಂಗಳ ಕಾಲ ಜೈಲಿನಲ್ಲಿದ್ದ ಕಮಲ್ ಖಾನ್ ಜಾಮೀನು ಪಡೆದು ಮತ್ತೆ ವಿದೇಶ ಪ್ರಯಾಣ ಬೆಳೆಸಿದ್ದರು. ಈ ಹಿಂದೆ ಸಲ್ಮಾನ್ ಖಾನ್ ತಮ್ಮನ್ನು ಕೊಲ್ಲಲು ಯತ್ನಿಸುತ್ತಿದ್ದಾರೆ ಎಂದೂ ಕಮಲ್ ಆರೋಪ ಮಾಡಿದ್ದರು.