- ರಾಜ್ಯದಲ್ಲಿ 6 ಕಾಲರಾ ರೋಗ ಪ್ರಕರಣ ಪತ್ತೆ: ಮಾರ್ಗಸೂಚಿ ಪ್ರಕಟಿಸಿದ ಇಲಾಖೆ
- ‘ವದಂತಿಗಳಿಗೆ ಮಾಧ್ಯಮಗಳು ಕಿವಿಗೊಡಬಾರದು’ ಎಂದ ಆರೋಗ್ಯ ಸಚಿವ ಗುಂಡೂರಾವ್
ರಾಜ್ಯದಲ್ಲಿ ಕಾಲರಾ ಹಾಗೂ ಬಿಸಿ ಗಾಳಿಯಿಂದ ಜನರಲ್ಲಿ ಆರೋಗ್ಯ ಸಮಸ್ಯೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಈಗಾಗಲೇ ಹಲವು ಮುನ್ನೆಚ್ಚರಿಕಾ ಕ್ರಮ ತೆಗೆದುಕೊಂಡಿದೆ. ಇನ್ನು ಬೆಂಗಳೂರಿನಲ್ಲಿ ಕಲುಷಿತ ನೀರಿನ ಸೇವನೆಯಿಂದ ಕಾಲರಾ ಪ್ರಕರಣಗಳು ಹೆಚ್ಚುತ್ತಿವೆ ಎಂಬ ಆತಂಕ ಸೃಷ್ಟಿಯಾಗಿರುವ ಹಿನ್ನೆಲೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತ ಡಿ. ರಂದೀಪ್ ಅವರು ಸ್ಪಷ್ಟನೆ ನೀಡಿದ್ದು, ಬರೀ ವಾಂತಿ, ಭೇದಿಯನ್ನು ಕಾಲರಾ ಎಂದು ತಿಳಿಯಬಾರದು. ಕಾಲರಾ ಪ್ರಕರಣಗಳಲ್ಲಿ ತೀವ್ರ ಏರಿಕೆ ಕಂಡುಬಂದಿಲ್ಲ ಎಂದು ಸ್ಪಷ್ಟೀಕರಣ ನೀಡಿದ್ದಾರೆ.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಅವರು, “ಖಾಸಗಿ ಆಸ್ಪತ್ರೆಗಳಲ್ಲಿ ಸಾಂಕ್ರಾಮಿಕ ಕಾಯಿಲೆ ಇರುವ ರೋಗಿಗಳ ವಿವರಗಳನ್ನು ನೀಡಲು ತಿಳಿಸಿದ್ದೇವೆ. ಹೀಟ್ ಸ್ಟ್ರೋಕ್(ಶಾಖಾಘಾತ) ನಿರ್ವಹಣೆ, ಬೆಂಕಿ ಅವಘಡ ಬಗ್ಗೆ ಎಚ್ಚರಿಕೆ ವಹಿಸಲು ಸುತ್ತೋಲೆ ಹೊರಡಿಸಿದ್ದೇವೆ. 341 ಹೀಟ್ ರಾಶ್ ಪ್ರಕರಣ, 212 ಹೀಟ್ ಕ್ರ್ಯಾಂಪ್, ಹೀಟ್ ಎಕ್ಸ್ಹಾಷನ್ 58 ಸೇರಿ 521 ಪ್ರಕರಣ ರಾಜ್ಯದಲ್ಲಿ ಪತ್ತೆಯಾಗಿವೆ. ಹೀಟ್ ಸ್ಟ್ರೋಕ್ನಿಂದ ಮರಣ ಆಗಿಲ್ಲ. ಕಲಬುರಗಿ, ಬಾಗಲಕೋಟೆಯಲ್ಲಿ ಇಬ್ಬರು ಮರಣ ಹೊಂದಿದ್ದಾರೆ ಎಂಬ ಸುದ್ದಿ ಇತ್ತು. ಆದರೆ, ಮರಣೋತ್ತರ ಪರೀಕ್ಷೆ ಬಳಿಕ ಹೀಟ್ ಸ್ಟ್ರೋಕ್ನಿಂದ ಸಾವು ಸಂಭವಿಸಿಲ್ಲ ಎಂಬುವುದು ಬೆಳಕಿಗೆ ಬಂದಿದೆ” ಎಂದು ತಿಳಿಸಿದ್ದಾರೆ.
“ಆಸ್ಪತ್ರೆಗಳಲ್ಲಿ ಅಗತ್ಯವಿರುವ ಔಷಧಗಳನ್ನು ಸಂಗ್ರಹಿಸಿಡಲು ತಿಳಿಸಿದ್ದೇವೆ. ಹೀಟ್ ರಿಲೇಟೆಡ್ ಕಾಯಿಲೆಗಳ ಬಗ್ಗೆ ಸೂಕ್ಷ್ಮವಾಗಿ ಗಮನಿಸಲು ತಿಳಿಸಿದ್ದೇವೆ. ಶಾಖಾಘಾತ ನಿರ್ವಹಣೆಗೆ ಜಿಲ್ಲಾಸ್ಪತ್ರೆಯಲ್ಲಿ 5 ಬೆಡ್ ಹಾಗೂ ತಾಲೂಕಿನಲ್ಲಿ 2 ಬೆಡ್ ಮೀಸಲಿಡಲು ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದೇವೆ. ಜಿಲ್ಲಾ ಮಟ್ಟದಲ್ಲಿ ನೋಡಲ್ ಅಧಿಕಾರಿಗಳು, ಆರೋಗ್ಯ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆ ತರಬೇತಿ ನೀಡಲಾಗಿದೆ” ಎಂದು ಮಾಹಿತಿ ನೀಡಿದ್ದಾರೆ.
ಕಾಲರಾ ಬಗ್ಗೆ ಪ್ರತಿಕ್ರಿಯಿಸಿದ ಡಿ ರಂದೀಪ್, “ಬರೀ ವಾಂತಿ, ಭೇದಿಯನ್ನು ಕಾಲರಾ ಎಂದು ತಿಳಿಯಬಾರದು. ಶುದ್ಧ ನೀರಿನ ಕೊರತೆಯಿಂದಾಗಿ ಕಾಲರಾ ಬರುತ್ತದೆ. ಕಳಪೆ ಗುಣಮಟ್ಟದ ಆಹಾರ ಮತ್ತು ನೀರು ಕುಡಿಯುವುದರಿಂದ ಕಾಲರಾ ಬರುವ ಸಾಧ್ಯತೆ ಇದೆ. ಇದು ನೇರವಾಗಿ ಹರಡುವುದಿಲ್ಲ. ರೋಗಿಗಳ ಸಂಪರ್ಕ ಇರಬೇಕು ಅಥವಾ ಕಲುಷಿತ ನೀರು ಸೇವಿಸಿರಬೇಕು. ಕಾಲರಾ ಬಗ್ಗೆ ಸುಳ್ಳು ಮಾಹಿತಿ ಹರಿದಾಡುತ್ತಿದೆ. ಕಾಲರಾ ಪ್ರಕರಣಗಳು ಶೇ.50 ಏರಿಕೆ ಆಗಿಲ್ಲ. ಇದು ಸತ್ಯಕ್ಕೆ ದೂರವಾದ ಮಾತು” ಎಂದು ತಿಳಿಸಿದ್ದಾರೆ.
“ಬೆಂಗಳೂರು ನಗರದ ಮಲ್ಲೇಶ್ವರಂನ ಖಾಸಗಿ ಪಿಜಿ ನಿವಾಸಿಯಾದ 27 ವರ್ಷದ ಮಹಿಳೆಯೊಬ್ಬರಿಗೆ ಮಾರ್ಚ್ 30ರಂದು ವಾಂತಿ ಭೇದಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ನಗರದ ಖಾಸಗಿ ಆಸ್ಪತ್ರೆಯೊಂದರಲ್ಲಿ ದಾಖಲಾಗಿ ಚಿಕಿತ್ಸೆ ಪಡೆದುಕೊಂಡಿದ್ದರು. ಅವರ ಮಲದ ಮಾದರಿಯನ್ನು ಪರೀಕ್ಷೆ ಮಾಡಿದಾಗ ಕಾಲರಾ ಇಲ್ಲದಿರುವುದು ದೃಢಪಟ್ಟಿದೆ. ನಂತರ ಗುಣಮುಖರಾಗಿ ತಮ್ಮ ಊರಾದ ಶಿರಾಗೆ ತೆರಳಿದ್ದಾರೆ. ಆದ್ದರಿಂದ ಮಾಧ್ಯಮಗಳಲ್ಲಿ ವರದಿಯಾಗಿರುವಂತೆ ಯಾವುದೇ ಕಾಲರಾ ಪ್ರಕರಣ ವರದಿಯಾಗಿಲ್ಲ” ಎಂದು ತಿಳಿಸಿದ್ದಾರೆ.
ಪ್ರಸಕ್ತ ವರ್ಷದಲ್ಲಿ 6 ಕಾಲರಾ ಪ್ರಕರಣ
ಕರ್ನಾಟಕದಲ್ಲಿ ಪ್ರಸಕ್ತ ವರ್ಷದಲ್ಲಿ ದಿನಾಂಕ ಏಪ್ರಿಲ್ 4ರವರೆಗೆ ಒಟ್ಟು 06 (ಬಿಬಿಎಂಪಿ-3, ಬೆಂಗಳೂರು ನಗರ-02, ರಾಮನಗರ-01) ಕಾಲರಾ ಪ್ರಕರಣಗಳು ದೃಢಪಟ್ಟಿದ್ದು, 05 ಪ್ರಕರಣಗಳು ಮಾರ್ಚ್ ತಿಂಗಳಲ್ಲಿಯೇ ವರದಿಯಾಗಿವೆ. ಈ ಇವೆಲ್ಲವೂ ವಿರಳ ಪ್ರಕರಣಗಳಾಗಿದ್ದು, ಯಾವುದೇ ಸೋಂಕು ಹರಡುವಿಕೆ ವರದಿಯಾಗಿಲ್ಲ. ಹಿಂದಿನ 3 ವರ್ಷಗಳ ಮೊದಲ ತ್ರೈಮಾಸಿಕದ ಅಂಕಿ-ಅಂಶಗಳಿಗೆ ಹೋಲಿಸಿದರ ವಾಂತಿ-ಬೇಧಿ ಹಾಗೂ ಕಾಲರಾ ಪ್ರಕರಣಗಳಲ್ಲಿ ಯಾವುದೇ ಏರಿಕೆ ಕಂಡುಬಂದಿರುವುದಿಲ್ಲ ಎಂದು ತಿಳಿಸಿದ್ದಾರೆ.
ಬೇಸಿಗೆ ಕಾಲದಲ್ಲಿ ನೀರಿನ ಅಭಾವವಾಗುವ ಹಿನ್ನೆಲೆಯಲ್ಲಿ ಹಾಗೂ ತಾಪಮಾನ ಹೆಚ್ಚಾಗುವ ಕಾರಣದಿಂದಾಗಿ ಅತಿಸಾರ-ಕಾಲರದಂತಹ ವಾಂತಿ-ಭೇದಿ ಲಕ್ಷಣಗಳು ಕಾಣಿಸಿಕೊಳ್ಳುವ ಸಾಧ್ಯತೆ ಇರುವುದರಿಂದ ಈ ಸಮಯದಲ್ಲಿ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಆರೋಗ್ಯ ಇಲಾಖೆ ಸುತ್ತೋಲೆ ಹೊರಡಿಸಿದೆ.
‘ವದಂತಿಗಳಿಗೆ ಮಾಧ್ಯಮಗಳು ಕಿವಿಗೊಡಬಾರದು’ ಎಂದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್
ಬೆಂಗಳೂರಿನ ಮಲ್ಲೇಶ್ವರದ ಮಹಿಳೆಯೊರ್ವರಿಗೆ ಕಾಲರಾ ಪ್ರಕರಣ ದೃಢಪಟ್ಟಿದೆಯೆಂಬುದು ಶಂಕೆಯಷ್ಟೇ. ವದಂತಿಗಳಿಗೆ ಮಾಧ್ಯಮಗಳು ಕಿವಿಗೊಡಬಾರದು. ಈ ಬಗ್ಗೆ ಆರೋಗ್ಯ ಇಲಾಖೆಯಿಂದ ಸ್ಪಷ್ಟನೆ ನೀಡಲಾಗಿದೆ. ಮಾರ್ಚ್ 30ರಂದು ವಾಂತಿ-ಭೇದಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮಹಿಳೆ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಂಡು ಗುಣಮುಖರಾಗಿದ್ದಾರೆ.…
— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) April 5, 2024
“ಕಾಲರಾ ಬಗ್ಗೆ ವದಂತಿಗಳಿಗೆ ಮಾಧ್ಯಮಗಳು ಕಿವಿಗೊಡಬಾರದು. ಈ ಬಗ್ಗೆ ಆರೋಗ್ಯ ಇಲಾಖೆಯಿಂದ ಸ್ಪಷ್ಟನೆ ನೀಡಲಾಗಿದೆ” ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಟ್ವೀಟ್ ಮೂಲಕ ತಿಳಿಸಿದ್ದಾರೆ.
ಕಾಲರಾ ತಡೆಗೆ ಆರೋಗ್ಯ ಇಲಾಖೆ ಮಾರ್ಗಸೂಚಿ
- ಕೈಗಳನ್ನು ಸ್ವಚ್ಛಗೊಳಿಸಿ ಆಹಾರ, ನೀರು ಸೇವನೆ.
- ಶುದ್ಧ ಕುಡಿಯುವ ನೀರು ಬಳಸುವುದು.
- ಚರಂಡಿ ಮತ್ತು ಕುಡಿಯುವ ನೀರಿನ ಪೈಪ್ ಒಟ್ಟಾಗದಂತೆ ನೋಡಿಕೊಳ್ಳಬೇಕು.
- ಕ್ಲೋರಿನೇಟೆಡ್ ಅಥವಾ ಕುದಿಸಿದ ಮತ್ತು ತಣ್ಣಗಾದ ನೀರಿನ ಬಳಕೆ.
- ಮನೆ ಒಳಗೆ ಮತ್ತು ಹೊರಗೆ ಸ್ವಚ್ಛತೆ ಕಾಪಾಡುವುದು.
- ಸ್ವಚ್ಛತೆ ಕಾಪಾಡದ ಸ್ಥಳಗಳಲ್ಲಿ ಆಹಾರ ಪದಾರ್ಥ ಸೇವಿಸದಿರುವುದು.
