ಪ್ರಶ್ನೆ ಮಾಡುವುದು ಜೀವಂತಿಕೆಯ ಸಂಕೇತ. ಆಳ್ವಿಕರನ್ನೇ ದೇವರನ್ನಾಗಿಸಿಬಿಡುವುದು ಅವಸಾನ ಎಂದು ಖ್ಯಾತ ಸಿನಿಮಾ ನಿರ್ದೇಶಕ ಬಿ ಸುರೇಶ್ ಅಭಿಪ್ರಾಯ ಪಟ್ಟಿದ್ದಾರೆ.
ಎಐಡಿವೈಒ 60ನೇ ವರ್ಷಾಚರಣೆ ಅಂಗವಾಗಿ ಬೆಂಗಳೂರಿನಲ್ಲಿ ಆಯೋಜಿಸಲಾಗಿದ್ದ ಖಾಲಿ ಹುದ್ದೆಗಳ ಭರ್ತಿ ಹಾಗೂ ಸಾಂಸ್ಕೃತಿಕ ಅಧ:ಪತನ ವಿರುದ್ಧ ‘ರಾಜ್ಯಮಟ್ಟದ ಯುವಜನರ ಆಗ್ರಹ ದಿನ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಬಿ ಸುರೇಶ್ ಮಾತನಾಡಿದರು. “15 ವರ್ಷಗಳಿಂದ ಖಾಯಂ ನೇಮಕಾತಿ ಮಾಡುವುದನ್ನು ನಿಲ್ಲಿಸಿ ಗುತ್ತಿಗೆ ಹೆಸರಿನಲ್ಲಿ ನೇಮಕಾತಿ ಮಾಡಲಾಗುತ್ತಿದೆ. ಕರೋನಾ ಕಾಲದಲ್ಲಿ ಜನರು ಪ್ರಾಣ ಭೀತಿಯಲ್ಲಿ ಇದ್ದಾಗ ಜನ ವಿರೋಧಿ ಹೊಸ ಕಾರ್ಮಿಕ ಸಂಹಿತೆಗಳನ್ನು ಜಾರಿಗೆ ತರಲಾಯಿತು. ಬಂಡವಾಳಶಾಹಿಗಳ ಹಿತಾಸಕ್ತಿಗಾಗಿ ಈ ತಿದ್ದುಪಡಿಯನ್ನು ತರಲಾಗಿದೆ. ಬಂಡವಾಳ ಹೂಡುವವನಿಗೆ ಮಾತ್ರ ಲಾಭ ಏಕೆ? ಶ್ರಮಕ್ಕೆ ಬೆಲೆ ಇಲ್ಲವೇ” ಎಂದು ಪ್ರಶ್ನಿಸಿದರು.
“ಈಗ ದುಡಿಯುವ ಅವಧಿ ವಿಸ್ತರಣೆ ಮಾಡಲಾಗುವುದು ಎಂಬ ಚರ್ಚೆ ನಡೆದಿದೆ. ಕಾರ್ಪೋರೇಟ್ ಕಂಪನಿಗಳ ಕುಮ್ಮಕ್ಕಿನಿಂದ ಇದೆಲ್ಲಾ ನಡೆಯುತ್ತಿದೆ ಎಂದರು. ಈ ರೀತಿಯಲ್ಲಿ ಡಾಲರ್ ಗಳಲ್ಲಿ ಲಾಭದಾಹಿಗಳು ಮುಖವಾಡ ಧರಿಸಿ ನಮ್ಮ ಸುತ್ತ ಕಾದು ಕುಳಿತಿವೆ ಎಂದರು. ಹತ್ತು ನಿಮಿಷ ನೆಮ್ಮದಿಯಾಗಿ ಕುಳಿತು ಊಟ ಮಾಡಲು ಸಹ ಈ ವ್ಯವಸ್ಥೆ ಬಿಡುವುದಿಲ್ಲ. ಜನರು ಒತ್ತಡದಿಂದ ಖಿನ್ನತೆಗೆ ಒಳಗಾಗುತ್ತಿದ್ದಾರೆ. ಈ ಲಾಭದಾಹಕ್ಕೂ ಮತ್ತು ಖಿನ್ನತೆಗೂ ಒಂದಕ್ಕೊಂದು ಸಂಬಂಧ ಇದೆ. ಈ ಒತ್ತಡದ ಪರಿಸ್ಥಿತಿ ಬದಲಾಗಿ ದುಡಿಯುವ ಜನರು ನೆಮ್ಮದಿಯಿಂದ ಬದುಕುವ ಕಾಲ ಬರಬೇಕು” ಎಂದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಎಐಡಿವೈಒ ರಾಷ್ಟ್ರೀಯ ಉಪಾಧ್ಯಕ್ಷ ಡಾ. ಜಿ. ಶಶಿಕುಮಾರ್, “ದೇಶದ 146ಕೋಟಿ ಜನರಲ್ಲಿ 96 ಕೋಟಿ ಜನರು ದುಡಿಯುವ ಶಕ್ತಿ ಸಾಮರ್ಥ್ಯ ಹೊಂದಿದ್ದಾರೆ. ಆದರೆ, ಇವರಿಗೆ ದುಡಿಯುವ ಅವಕಾಶ ದೊರೆತಿದೆಯೇ? ಈ ಪ್ರಶ್ನೆ ನಮ್ಮ ಯುವಜನರು ಕೇಳಬೇಕು. ನಮ್ಮ ರಾಜ್ಯ ಸರ್ಕಾರದ ಮುಖ್ಯಸ್ಥರು ಹೇಳಿರುವಂತೆ 2.75 ಲಕ್ಷ ಹುದ್ದೆಗಳು ಖಾಲಿ ಬಿದ್ದಿವೆ. ಸರ್ಕಾರ ಏನು ಕ್ರಮ ಜರುಗಿಸಿದೆ. ಉತ್ತರ ಕೊಡಬೇಕಾಗುತ್ತದೆ. ಒಂದೂವರೆ ವರ್ಷದ ಹಿಂದೆ ಇದೇ ಸ್ವಾತಂತ್ರ್ಯ ಉದ್ಯಾನದಲ್ಲಿ ಹೋರಾಟ ಮಾಡಿ ಖಾಲಿ ಹುದ್ದೆಗಳ ಭರ್ತಿಗಾಗಿ ಆಗ್ರಹ ಮಾಡಲಾಗಿತ್ತು. ಆದರೆ ಅಲ್ಲಿಂದ ಇಲ್ಲಿಯವರೆಗೆ ಸರ್ಕಾರ ಏನು ಮಾಡಿಲ್ಲ” ಎಂದು ಅಸಮಧಾನ ವ್ಯಕ್ತಪಡಿಸಿದರು.
“ಇತ್ತೀಚೆಗೆ ಹೂಡಿಕೆದಾರರ ಸಮಾವೇಶ ಮಾಡಿದ ಸರ್ಕಾರ, 10.2 ಲಕ್ಷ ಕೋಟಿ ಹೂಡಿಕೆ ಆಗಿದೆ ಎಂದು ಹೇಳುತ್ತಿದೆ. ಆದರೆ,. ಉದ್ಯೋಗ ಸೃಷ್ಟಿ ಆಗುವುದು ಕೇವಲ 6 ಲಕ್ಷ ಮಾತ್ರ. ಅಂದರೆ, ಒಂದು ಕೋಟಿಗೆ ಒಂದು ಉದ್ಯೋಗ ಸಹ ಸೃಷ್ಟಿ ಆಗುತ್ತಿಲ್ಲ. ಅದು ಕೂಡಾ ಕಾಗದದ ಮೇಲೆಯೇ ಇದೆ ಎಂದು ಹೇಳಿದರು. ಇನ್ನು ಅಶ್ಲೀಲತೆ, ಆನ್ ಲೈನ್ ಗೇಮ್, ಬೆಟ್ಟಿಂಗ್, ಮಾದಕ ವಸ್ತುಗಳ ಹಾವಳಿ ತಡೆಗಟ್ಟಲು ಸರ್ಕಾರಗಳು ಸಂಪೂರ್ಣ ವಿಫಲವಾಗಿವೆ. ಇದಕ್ಕೆಲ್ಲ ಆಳುವ ಬಂಡವಾಳಶಾಹಿ ವ್ಯವಸ್ಥೆಯೇ ಕಾರಣವಾಗಿದೆ. ಆದ್ದರಿಂದ ಯುವಜನತೆ ಉದ್ಯೋಗಕ್ಕಾಗಿ ಹೋರಾಡುತ್ತಾ ಸಮಾಜದ ಮೂಲಭೂತ ಪರಿವರ್ತನೆಯ ಸಾಕಾರಕ್ಕಾಗಿ ಧ್ವನಿ ಎತ್ತಬೇಕು” ಎಂದು ಕರೆ ನೀಡಿದರು.
ಈ ಲೇಖನ ಓದಿದ್ದೀರಾ?: ಸಿಇಟಿ ಸೀಟ್ ಬ್ಲಾಕಿಂಗ್: ಅರ್ಹರಿಗೆ ಅವಕಾಶ ತಪ್ಪಲು ವ್ಯವಸ್ಥೆಯೇ ಶಾಮೀಲು?
ಮನೋವೈದ್ಯ ಡಾ. ಶಶಿಧರ್ ಬೀಳಗಿ ಮಾತನಾಡಿ, “ಇಂದಿನ ಯುವ ಪೀಳಿಗೆ ಏಕಾಗ್ರತೆ ಕೊರತೆಯಿಂದ ಬಳಲುತ್ತಿದೆ. ಮೊಬೈಲ್ ಬಳಕೆ ಅತಿಯಾಗಿದೆ. ಬಳಸುವುದೇ ತಪ್ಪಲ್ಲ. ಆದರೆ ಚಟವಾಗಿ ಪರಿಣಮಿಸುವ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದರು. ಹದಿಹರೆಯದವರಲ್ಲಿ ಕುತೂಹಲ ಇರುತ್ತದೆ. ಪ್ರತಿಯೊಂದು ಕುತೂಹಲದಿಂದ ಆರಂಭವಾಗಿ ನಂತರ ಚಟವಾಗುತ್ತದೆ. ಮಾದಕ ವಸ್ತುಗಳ ಹಾವಳಿ ತಡೆಯಲು ಸರ್ಕಾರಗಳಿಗೆ ಎಲ್ಲಾ ಗೊತ್ತಿದ್ದೂ ಏನೂ ಮಾಡುತ್ತಿಲ್ಲ. ನಮ್ಮ ಜನರ ಮುಂದೆ ಬೇರೆ ಆಯ್ಕೆಗಳೂ ಇಲ್ಲ. ಒಂದು ತೋಳ ಮತ್ತೊಂದು ಹುಲಿ ಇದೆ. ಇವುಗಳ ನಡುವೆ ನೆಮ್ಮದಿಯ ಬದುಕಿಗಾಗಿ ಪ್ರಜ್ಞಾಪೂರ್ವಕ ಹೋರಾಟ ಅನಿವಾರ್ಯ” ಎಂದರು.
ಮುಖ್ಯಮಂತ್ರಿಗಳಿಗೆ ಹಕ್ಕೊತ್ತಾಯ ಪತ್ರವನ್ನು ಸಲ್ಲಿಸಿರುವ ಎಐಡಿವೈಒ; ಕೇಂದ್ರದ ವಿವಿಧ ಇಲಾಖೆಗಳಲ್ಲಿ ಖಾಲಿರುವ 10 ಲಕ್ಷ ಹುದ್ದೆಗಳನ್ನು ಹಾಗೂ ರಾಜ್ಯದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ 2.75 ಲಕ್ಷ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡಬೇಕು. ಸಾಮಾಜಿಕ ಜಾಲತಾಣಗಳು ಮತ್ತು ಸಮೂಹ ಮಾಧ್ಯಮಗಳಲ್ಲಿನ ಅಶ್ಲೀಲ ವಿಡಿಯೋಗಳು, ಹಿಂಸೆ, ಕ್ರೌರ್ಯವನ್ನು ನಿಷೇಧಿಸಬೇಕು. ಯುವಜನರನ್ನು ವ್ಯಸನಕ್ಕೀಡುಮಾಡುತ್ತಿರುವ ಆನ್ಲೈನ್ ಗೇಮ್ ಮತ್ತು ಬೆಟ್ಟಿಂಗ್ ಹಾಗು ಮಾದಕ ದ್ರವ್ಯಗಳನ್ನು ನಿಷೇಧಿಸಬೇಕು. ಜನತೆಯ ಐಕ್ಯತೆಯನ್ನು ಮುರಿಯುವ ಜಾತಿವಾದಿ ಮತ್ತು ಕೋಮುವಾದಿ ಶಕ್ತಿಗಳನ್ನು ನಿಯಂತ್ರಿಸಬೇಕು. ಉದ್ಯೋಗ ಖಾತ್ರಿ ಯೋಜನೆ(ಎಂ.ಜಿ.ಎನ್. ಆರ್.ಜಿ)ಬಜೆಟ್ ಅನುದಾನವನ್ನು ಹೆಚ್ಚಿಸಬೇಕು. ಕೂಲಿಯನ್ನು ರೂ.600ಕ್ಕೆ ಹಾಗೂ ಮಾನವ ಕೆಲಸದ ದಿನಗಳನ್ನು 200ಕ್ಕೆ ಹೆಚ್ಚಿಸಬೇಕು. ಕೆ.ಪಿ.ಎಸ್.ಸಿ ಪರೀಕ್ಷೆಗಳಲ್ಲಿ ಆಯ್ಕೆಯಾದ ಎಲ್ಲಾ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶವನ್ನು ಕೂಡಲೇ ನೀಡಬೇಕು ಹಾಗೂ ಕೆಪಿಎಸ್ಸಿಯಲ್ಲಿ ನಡೆಯುವ ಅಕ್ರಮ ಮತ್ತು ಭ್ರಷ್ಟಾಚಾರವನ್ನು ತಡೆಗಟ್ಟಬೇಕು. ನೇಮಕಾತಿಗಳ ಅರ್ಜಿ ಶುಲ್ಕ ಕೈಬಿಡಬೇಕು ಹಾಗೂ ನೇಮಕಾತಿ ಪ್ರವೇಶ ಪರೀಕ್ಷೆ ಬರೆಯುವ ಅಭ್ಯರ್ಥಿಗಳಿಗೆ ಉಚಿತ ಸಾರಿಗೆ ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಿದೆ.
ಕಾರ್ಯಕ್ರಮದಲ್ಲಿ ಯುನೈಟೆಡ್ ಫುಡ್ ಡೆಲಿವರಿ ಪಾರ್ಟ್ನರ್ಸ್ ಯೂನಿಯನ್ ರಾಜ್ಯ ಅಧ್ಯಕ್ಷರಾದ ವಿನಯ ಸಾರಥಿ, ಎಐಡಿವೈಒ ರಾಜ್ಯ ಅಧ್ಯಕ್ಷ ಶರಣಪ್ಪ ಉದ್ಬಾಳ್, ರಾಜ್ಯ ಕಾರ್ಯದರ್ಶಿ ಸಿದ್ದಲಿಂಗಬಾಗೇವಾಡಿ, ಜಯಣ್ಣ ಇದ್ದರು.