ಕಾಲಭೈರವೇಶ್ವರ ದೇವಾಲಯಕ್ಕೆ ದಲಿತರು ಪ್ರವೇಶಿಸಿ ಪೂಜೆ ಸಲ್ಲಿಸಿದ ಹಿನ್ನೆಲೆ ದೇಗುಲದಿಂದ ಉತ್ಸವ ಮೂರ್ತಿಯನ್ನು ಹೊರತಂದು, ದೇವಾಲಯದ ನಾಮಫಲಕವನ್ನು ಸವರ್ಣೀಯರು ಆಚೆ ಎಸೆಸಿರುವ ಅಮಾನುಷ ಘಟನೆ ಮಂಡ್ಯ ಜಿಲ್ಲೆಯ ಹನಕೆರೆ ಗ್ರಾಮದಲ್ಲಿ ನಡೆದಿದೆ.
ಸದ್ಯ ಹನಕೆರೆ ಗ್ರಾಮ ಬೂದಿಮುಚ್ಚಿದ ಕೆಂಡದಂತಾಗಿದೆ. ಘಟನೆ ಹಿನ್ನೆಲೆ ಗ್ರಾಮದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದೆ. ಕಳೆದ 2 ವರ್ಷಗಳ ಹಿಂದೆ ದೇವಾಲಯ ಪುನರ್ ನಿರ್ಮಾಣ ಮಾಡಲಾಗಿದೆ. ಬಳಿಕ ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಗೆ ದೇಗುಲ ಸೇರುತ್ತಿದ್ದಂತೆ ದಲಿತರ ಪ್ರವೇಶಕ್ಕೆ ಸವರ್ಣೀಯರು ಒಪ್ಪುತ್ತಿಲ್ಲ. ಈ ಕುರಿತಾಗಿ ಈಗಾಗಲೇ ಎರಡು ಬಾರಿ ನಡೆಸಿದ ಶಾಂತಿ ಸಭೆಯೂ ವಿಫಲವಾಗಿದೆ.
ದಲಿತರು ದೇಗುಲ ಪ್ರವೇಶಕ್ಕೆ ಸವರ್ಣೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ದೇಗುಲ ಅವರೇ ಇಟ್ಟುಕೊಳ್ಳಲಿ, ದೇವರನ್ನ ತೆಗುದುಕೊಂಡು ಹೋಗುತ್ತೇವೆ ಎಂದು ಹೇಳಿದ್ದಾರೆ. ಈ ಮಧ್ಯೆ ಪೊಲೀಸರ ಭದ್ರತೆ ನಡುವೆ ದಲಿತರು ದೇಗುಲ ಪ್ರವೇಶಿಸಿದ್ದಾರೆ.
ಇನ್ನು ಮಾಜಿ ಶಾಸಕ ಎಂ ಶ್ರೀನಿವಾಸ್ ಸವರ್ಣೀಯರ ಮನವೊಲಿಸಲು ಯತ್ನಿಸಿದ್ದಾರೆ. ತಹಶಿಲ್ದಾರ್, ಸಮಾಜ ಕಲ್ಯಾಣ, ಪೊಲೀಸ್ ಇಲಾಖೆ ಅಧಿಕಾರಿಗಳೊಂದಿಗೆ ಮನವೊಲಿಕೆಗೆ ಯತ್ನಿಸಿದ್ದು, ಯಾರ ಮನವಿಗೂ ಗ್ರಾಮಸ್ಥರು ಸ್ಪಂದಿಸುತ್ತಿಲ್ಲ. ಕೊನೆಗೆ ಸರ್ಕಾರಿ ಅಧಿಕಾರಿಗಳು ದಲಿತರಿಗೆ ದೇವಾಲಯ ಪ್ರವೇಶಕ್ಕೆ ಅವಕಾಶ ಕಲ್ಪಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಕೋವಿಡ್ ದುರಂತದಲ್ಲೂ ʼಹೆಣದ ಮೇಲೆ ಹಣʼ ಎತ್ತಿದವರ ಅಮಾನವೀಯತೆ
ದಲಿತರ ದೇವಾಲಯ ಪ್ರವೇಶಿಸುತ್ತಿದ್ದಂತೆ ಇನ್ನು ಮುಂದೆ ನಾವು ದೇವಾಲಯ ಪ್ರವೇಶ ಮಾಡಲ್ಲ ಎಂದು ಸವರ್ಣೀಯರು ಹೇಳಿದ್ದಾರೆ. ಸದ್ಯಕ್ಕೆ ದೇವಸ್ಥಾನ ಬಾಗಿಲು ಬಂದ್ ಮಾಡಲಾಗಿದ್ದು, ಎಂದಿನಂತೆ ಮತ್ತೆ ಸಂಜೆ ತೆರೆಯಲಾಗುತ್ತದೆ. ಜಿಲ್ಲಾಡಳಿತ ದೇವಸ್ಥಾನಕ್ಕೆ ಎಲ್ಲರಿಗೂ ಅವಕಾಶ ಮಾಡಿಕೊಟ್ಟಿದೆ. ಸವರ್ಣೀಯರು ಉತ್ಸವ ಮೂರ್ತಿಯನ್ನು ಮತ್ತೊಂದು ಕೊಠಡಿಯಲ್ಲಿ ಇಟ್ಟಿದ್ದು, ಸಂಜೆ ಮತ್ತೆ ಉತ್ಸವ ಮೂರ್ತಿಯನ್ನ ದೇವಸ್ಥಾನಕ್ಕೆ ತೆಗೆದುಕೊಂಡು ಹೋಗಲು ಮುಜರಾಯಿ ಇಲಾಖೆ ತೀರ್ಮಾನಿಸಿದೆ.
ತಹಶೀಲ್ದಾರ್ ಶಿವಕುಮಾರ್ ಬಿರದಾರ್ ಪ್ರತಿಕ್ರಿಯಿಸಿದ್ದು, ದೇವಸ್ಥಾನಕ್ಕೆ ಪ್ರವೇಶ ಇಲ್ಲ ಎಂದು ನಮಗೆ ದೂರು ಕೊಟ್ಟಿದ್ದರು. ದಲಿತ ಕುಟುಂಬದವರಿಗೆ ಪ್ರವೇಶ ಇಲ್ಲ ನಮಗೆ ಮಾಹಿತಿ ಕೊಟ್ಟಿದ್ದರು. 4 ತಿಂಗಳ ಹಿಂದೆ ಎಲ್ಲರು ದೇವಸ್ಥಾನಕ್ಕೆ ಹೋಗುತ್ತಿದ್ದರು. ಕೆಲ ದಿನಗಳ ಹಿಂದೆ ಇಲ್ಲಿ ಸಮಸ್ಯೆ ಉಂಟಾಗಿದೆ. ಇದು ಮುಜುರಾಯಿ ದೇವಸ್ಥಾನವಾಗಿದೆ. ಎಲ್ಲರಿಗೂ ಪ್ರವೇಶಕ್ಕೆ ಅವಕಾಶ ಇದೆ ಎಂದಿದ್ದಾರೆ.
ಸಮಾಜ ಕಲ್ಯಾಣ ಅಧಿಕಾರಿ ಸಿದ್ದಲಿಂಗಪ್ಪ ಮಾತನಾಡಿ, 4 ತಿಂಗಳ ಹಿಂದೆಯಿಂದ ಈ ಸಮಸ್ಯೆ ಇದೆ. ದಲಿತರಿಗೆ ಪ್ರವೇಶಕ್ಕೆ ಬಿಟ್ಟಿಲ್ಲ. 2 ಬಾರಿ ಸಭೆ ಮಾಡಿ ಗ್ರಾಮಸ್ಥರಿಗೆ ತಿಳಿಸಿದ್ದೇವೆ. ಗ್ರಾಮದಲ್ಲಿ ವಿರೋಧ ಇರುವುದರಿಂದ ಡಿಸಿಗೆ ಮಾಹಿತಿ ನೀಡಿದ್ದೇವೆ. ಡಿಸಿ ಕ್ರಮಕೈಗೊಳ್ಳುವುದಾಗಿ ತಿಳಿಸಿದ್ದಾರೆ ಎಂದರು.
