- ‘ರಾಜ್ಯೋತ್ಸವ ಪ್ರಶಸ್ತಿಯನ್ನು ನಾಡಿನ ಪ್ರಗತಿಪರ ಚಿಂತಕರಿಗೆ ಅರ್ಪಿಸುತ್ತೇನೆ’
- ‘ಸ್ವಾಮೀಜಿಯಾಗಿಯಲ್ಲ, ಸಮಾಜ ಸೇವಕನಾಗಿ ರಾಜ್ಯೋತ್ಸವ ಪ್ರಶಸ್ತಿ ಸ್ವೀಕರಿಸಿದ್ದೇನೆ
- ‘ಬಸವಣ್ಣ ವಿಚಾರಧಾರೆಯಲ್ಲಿ ನಡೆದ ಸಿಎಂ ಇದ್ದರೆ ಅದು ಸಿದ್ದರಾಮಯ್ಯ ಮಾತ್ರ‘
ಯಾವುದೇ ಜಾತಿ ಬೆಂಬಲ ಇಲ್ಲದ ನನ್ನಂತವರಿಗೂ ಸರ್ಕಾರ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಕೊಟ್ಟಿದೆ ಎಂದರೆ ಇದು ಪ್ರಶಸ್ತಿ ಆಯ್ಕೆಯ ಪಾರದರ್ಶಕತೆಗೆ ಸಾಕ್ಷಿ. ರಾಜ್ಯೋತ್ಸವ ಪ್ರಶಸ್ತಿಯನ್ನು ನಾನು ಒಬ್ಬ ಸ್ವಾಮೀಜಿಯಾಗಿ ಸ್ವೀಕರಿಸುತ್ತಿಲ್ಲ; ಒಬ್ಬ ಸಮಾಜ ಸೇವಕನಾಗಿ ಸ್ವೀಕರಿಸುತ್ತಿರುವೆ ಎಂದು ಬೆಳಗಾವಿ ಜಿಲ್ಲೆಯ ಬೈಲೂರಿನ ನಿಷ್ಕಲ್ಮಶ ಮಠದ ನಿಜಗುಣಾನಂದ ಸ್ವಾಮೀಜಿ ತಿಳಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ರವೀಂದ್ರ ಕಲಾಕ್ಷೇತ್ರದಲ್ಲಿ ಬುಧವಾರ ಆಯೋಜಿಸಿದ್ದ ರಾಜ್ಯೋತ್ಸವ ಪ್ರಶಸ್ತಿ-2023 ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಿ ಸ್ವಾಮೀಜಿ ಮಾತನಾಡಿದರು.
ರಾಜ್ಯೋತ್ಸವ ಪ್ರಶಸ್ತಿ ಬುದ್ಧ, ಬಸವ, ಅಂಬೇಡ್ಕರ್ ತತ್ವಗಳಿಗೆ ಸಿಕ್ಕ ಗೌರವ ಎಂದು ಭಾವಿಸುವೆ. ಕರ್ನಾಟಕ ಬಹುಸಂಸ್ಕೃತಿಯ ನಾಡು. ಬಹುತ್ವದ ಭಾರತ ನಮ್ಮದು. ಮುಖ್ಯಮಂತ್ರಿ ಅವರಲ್ಲಿ ಒಂದು ವಿನಂತಿ ಏನೆಂದರೆ, ಕರ್ನಾಟಕ ನಾಮಕರಣಕ್ಕೆ 50 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲ ಶಾಲೆ, ಕಾಲೇಜುಗಳಲ್ಲಿ ‘ವಚನ ಸಂಸ್ಕೃತಿ ಅಭಿಯಾನ’ ಆರಂಭಿಸಬೇಕು ಎಂದು ಕೋರಿದರು.
ವಚನ ಸಂಸ್ಕೃತಿ ಅಭಿಯಾನ ಯಾಕೆ ಆಗಬೇಕು ಎಂದರೆ ರಾಜ್ಯದಲ್ಲಿ ದೀನ ದಲಿತರು, ಕೆಳವರ್ಗದ ಜನರು ವಚನಗಳನ್ನು ಬರೆದಿದ್ದಾರೆ. ಇದು ಇಂದಿನ ವಿದ್ಯಾರ್ಥಿಗಳಿಗೆ ತಿಳಿಯಬೇಕಿದೆ. ಜಾತಿ ವ್ಯವಸ್ಥೆ ನಿರ್ಮೂಲನೆ ಆಗಬೇಕಿದೆ. ಈ ಅಭಿಯಾನ ನಡೆದರೆ ಕರ್ನಾಟಕ ಏಕೀಕರಣಕ್ಕೆ ಒಂದು ಅರ್ಥ ಬರುತ್ತದೆ ಎಂದರು.
ಈ ಸುದ್ದಿ ಓದಿದ್ದೀರಾ? ಶಾಲೆ, ಕಾಲೇಜುಗಳಲ್ಲಿ ‘ವಚನ ಸಂಸ್ಕೃತಿ ಅಭಿಯಾನ’: ಸಿಎಂ ಸಿದ್ದರಾಮಯ್ಯ ಘೋಷಣೆ
ಜಗದ್ಗುರು ಬಸವಣ್ಣ ಅವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕರನ್ನಾಗಿ ಘೋಷಿಸಬೇಕು. ಈ ಮಾತು ಸಿದ್ದರಾಮಯ್ಯ ಅವರಲ್ಲಿ ನಾನು ಏಕೆ ಹೇಳುತ್ತಿದ್ದೇನೆ ಎಂದರೆ; ಬಸವಣ್ಣ ಅವರ ವಿಚಾರಧಾರೆಯಲ್ಲಿ ನಡೆದ ಮುಖ್ಯಮಂತ್ರಿಗಳಿದ್ದರೆ ಅದು ಸಿದ್ದರಾಮಯ್ಯನವರು ಎಂದು ಹೇಳಿದರು.
ಪಟ್ಟಭದ್ರ ಹಿತಾಸಕ್ತಿಗಳು, ಜಾತಿವಾದಿಗಳು, ಕೋಮುವಾದಿಗಳಿಂದ ಕೊಲೆ ಬೆದರಿಕೆ ಬಂದಿದೆ. ಸಮಾಜದ ಮೌಢ್ಯಗಳ ಬಗ್ಗೆ ಮಾತನಾಡಿದರೆ ನಿಮ್ಮನ್ನು ಕೊಲ್ಲುತ್ತೇವೆ ಎನ್ನುವ ಜನ ಇಲ್ಲಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಸರ್ಕಾರ ನನಗೆ ರಕ್ಷಣೆ ಕೊಟ್ಟು, ಜೊತೆಗೆ ರಾಜ್ಯೋತ್ಸವ ಪ್ರಶಸ್ತಿಯನ್ನು ಕೊಟ್ಟಿದೆ. ನಾನು ಈ ಪ್ರಶಸ್ತಿಯನ್ನು ನಾಡಿನ ಎಲ್ಲ ಪ್ರಗತಿಪರ ಚಿಂತಕರಿಗೆ ಅರ್ಪಿಸುತ್ತೇನೆ ಎಂದು ತಿಳಿಸಿದರು.