- ‘ವರದಿ ನೋಡದೆ ಸುಮ್ಮನೇ ಅವೈಜ್ಞಾನಿಕ ಎನ್ನುವುದು ಸರಿಯಲ್ಲ’
- ‘ವರದಿಯ ಒಂದು ವಾಲ್ಯೂಮ್ಗೆ ಕಾರ್ಯದರ್ಶಿ ಸಹಿ ಹಾಕಿಲ್ಲ ಅಷ್ಟೇ’
ಜಾತಿ ಗಣತಿ ವರದಿ ರಾಜ್ಯದಲ್ಲಿ ಸದ್ದು ಮಾಡುತ್ತಿದ್ದು, ಈ ಬಗ್ಗೆ ಪರ ವಿರೋಧದ ಚರ್ಚೆಗಳು ಗರಿಗೆದರಿವೆ. ಕೆಲವು ಸಮುದಾಯಗಳು ವರದಿ ಬಿಡುಗಡೆಗೆ ಆಗ್ರಹಿಸಿದ್ದರೆ, ಇನ್ನೂ ಕೆಲ ಸಮುದಾಯಗಳು ವಿರೋಧ ವ್ಯಕ್ತಪಡಿಸುತ್ತಿವೆ. ಈ ಬಗ್ಗೆ ಸ್ವತಃ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಕಾಂತರಾಜ ಅವರು ತಮ್ಮ ವರದಿ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಗುರುವಾರ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿ, “ನಾನು ಕೊಟ್ಟ ಜಾತಿಗಣತಿ ವರದಿ ನೈಜವಾಗಿದೆ, ವೈಜ್ಞಾನಿಕವಾಗಿಯೇ ಇದೆ. ವರದಿ ನೋಡದೆ ಸುಮ್ಮನೇ ಅವೈಜ್ಞಾನಿಕ ಎನ್ನುವುದು ಸರಿಯಲ್ಲ” ಎಂದರು.
ಜಾತಿ ಗಣತಿ ವರದಿ ಸರಿಯಾಗಿಲ್ಲ. ಎಸಿ ರೂಮಿನಲ್ಲಿ ಕುಳಿತುಕೊಂಡು ವರದಿ ಸಿದ್ಧಪಡಿಸಿದ್ದಾರೆ ಎನ್ನುವ ಆರೋಪಗಳ ಬಗ್ಗೆ ಪ್ರತಿಕ್ರಿಯಿಸಿ, “40 ದಿನ ಮನೆ ಮನೆಗೆ ಹೋಗಿ ಸಮೀಕ್ಷೆ ಮಾಡಲಾಗಿದೆ. ಜಾತಿ, ಲಿಂಗ, ಧರ್ಮ, ಆಸ್ತಿ-ಪಾಸ್ತಿ ಎಲ್ಲವೂ ಸೇರಿ 55 ಪ್ರಶ್ನೆ ಕೇಳಿದ್ದೇವೆ. ಕೂಲಂಕಷವಾಗಿ ಅಂಕಿ ಅಂಶಗಳ ಸಮೇತ ವರದಿ ಸಿದ್ಧ ಮಾಡಲಾಗಿದ್ದು, ರಾಜ್ಯ ಸರ್ಕಾರ ವರದಿ ನೋಡಿದ ಬಳಿಕ ಮುಂದಿನ ತೀರ್ಮಾನ ಮಾಡಲಿ” ಎಂದು ಹೇಳಿದರು.
ವರದಿಗೆ ಒಕ್ಕಲಿಗರ, ಲಿಂಗಾಯತರ ವಿರೋಧ ವಿಚಾರವಾಗಿ ಮಾತನಾಡಿದ ಕಾಂತರಾಜ, “ಎರಡು ಸಮುದಾಯಗಳು ವಿರೋಧ ಮಾಡಬಹುದು. ಆದರೆ ವರದಿ ಮೊದಲು ನೋಡಲಿ. ಆಮೇಲೆ ಅದು ಸರಿಯಿಲ್ಲ ಎಂದರೆ ವಿರೋಧ ಮಾಡಲಿ. ವರದಿ ನೋಡಿ ಅದರಲ್ಲಿ ಏನಾದರು ತಪ್ಪು ಇದ್ದರೆ ನಾನು ಒಪ್ಪಿಕೊಳ್ಳುವೆ. ಆಯೋಗದಲ್ಲಿ ಕಷ್ಟ ಪಟ್ಟು ವರದಿ ಮಾಡೋ ಕೆಲಸ ಮಾಡಿದ್ದೇವೆ” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಬ್ರ್ಯಾಂಡ್ ಬೆಂಗಳೂರಿನಲ್ಲಿ ಬಡವರ ಪ್ರಾಣಕ್ಕೆ ಗ್ಯಾರಂಟಿಯಿಲ್ಲ
“ಜಾತಿಗಣತಿ ವರದಿಗೆ ಕಾರ್ಯದರ್ಶಿ ಸಹಿ ಇಲ್ಲ ಎನ್ನುವುದು ಸರಿಯಲ್ಲ. ವರದಿಯ ಒಂದು ವಾಲ್ಯೂಮ್ಗೆ ಕಾರ್ಯದರ್ಶಿ ಸಹಿ ಹಾಕಿಲ್ಲ ಅಷ್ಟೇ. ಮೂಲ ಪ್ರತಿ ಕಾಣೆಯಾಗಿದೆ ಎನ್ನುವುದು ನನಗೆ ಗೊತ್ತಿಲ್ಲ. 2019ರಲ್ಲಿ ನಾನು ವರದಿ ಕೊಟ್ಟಿದ್ದು, ನಾನು ಇದ್ದಾಗ ಮೂಲಪ್ರತಿ ಇತ್ತು. ಇದು ಜಾತಿ ಗಣತಿ ಅಲ್ಲ, ಸಾಮಾಜಿಕ ಹಾಗೂ ಶೈಕ್ಷಣಿಕ ವರದಿ” ಎಂದು ಹೇಳಿದರು.
ಕುಮಾರಸ್ವಾಮಿ ಅವಧಿಯಲ್ಲಿ ವರದಿ ಸ್ವೀಕಾರ ಮಾಡಲಿಲ್ಲವಾ ಎಂದು ಪ್ರಶ್ನಿಸಿದಾಗ, “ಕುಮಾರಸ್ವಾಮಿಗೆ ಅಪಾಯಿಂಟ್ಮೆಂಟ್ ಕೇಳಿದ್ವಿ. ಆದರೆ ಅವರು ಸಮಯ ಕೊಡಲಿಲ್ಲ. ಹಿಂದುಳಿದ ವರ್ಗಗಳ ಗಮನದಲ್ಲಿಟ್ಟುಕೊಂಡು ಈ ಸಮೀಕ್ಷೆ ನಡೆಸಲಾಗಿದೆ” ಎಂದರು.
ಇದು ಕಾಂತರಾಜ ವರದಿನಾ? ಜಯಪ್ರಕಾಶ್ ಹೆಗ್ಡೆ ವರದಿನಾ ಎಂಬ ಪ್ರಶ್ನೆಗೆ ”ವರದಿ ಕೊಟ್ಟಿದ್ದು, ಸಮೀಕ್ಷೆ ಮಾಡಿದ್ದು ನಾವು. ಈಗ ಸರ್ಕಾರ ಏನಾದ್ರು ತೀರ್ಮಾನ ಮಾಡಬಹುದು. ಆದರೆ ನಾವು ಮಾಡಿದ ಕೆಲಸಕ್ಕೆ ಅವರ ವರದಿ ಅಂತ ಹೇಳೋಕೆ ಹೇಗೆ ಸಾಧ್ಯ. ಜನರು ಕೇಳೋ ಅನುಮಾನಗಳಿಗೆ ಈಗಿನ ಅಧ್ಯಕ್ಷರು ಹೇಗೆ ಉತ್ತರ ಕೊಡೋಕೆ ಸಾಧ್ಯ. ಈಗ ವರದಿ ಅವರು ರೆಡಿ ಮಾಡಿದ್ರೆ ನಾವು ಹೇಗೆ ಉತ್ತರ ಕೊಡೋಕೆ ಸಾಧ್ಯ” ಎಂದರು.