ರಾಷ್ಟ್ರಧ್ವಜವನ್ನು ತಾಲಿಬಾನಿ ಧ್ವಜಕ್ಕೆ ಹೋಲಿಸಿ ಅವಮಾನ ಮಾಡಿರುವ ಮಾಜಿ ಸಚಿವ ಸಿ.ಟಿ ರವಿ ವಿರುದ್ಧ ದೇಶದ್ರೋಹಿ ಪ್ರಕರಣ ದಾಖಲಿಸಬೇಕು. ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಆಗ್ರಹಿಸಿ ಪರಿಶಿಷ್ಟ ಜಾತಿ ಪರಿಶಿಷ್ಟ/ಪಂಗಡ ಸಂಘಟನೆಗಳ ಒಕ್ಕೂಟ ಒತ್ತಾಯಿಸಿದೆ.
ಬಾಗಲಕೋಟೆ ಜಿಲ್ಲೆಯ ಮುಧೋಳದಲ್ಲಿ ಪ್ರತಿಭಟನೆ ನಡೆಸಿರುವ ಸಂಘಟನೆಗಳ ಕಾರ್ಯಕರ್ತರು ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದ್ದಾರೆ.
“ಕಳೆದ ನಾಲ್ಕು ದಿನಗಳ ಹಿಂದೆ ಮಾಜಿ ಸಚಿವ ಸಿ ಟಿ ರವಿ ಸಂವಿಧಾನಬದ್ಧವಾದ ರಾಷ್ಟ್ರದ ತಿರಂಗಾ ಧ್ವಜವನ್ನು ತಾಲಿಬಾನಿ ಧ್ವಜಕ್ಕೆ ಹೋಲಿಸಿ ಅವಮಾನಿಸಿದ್ದನ್ನು ಖಂಡಿಸುತ್ತೇವೆ. ಇಂತಹ ದೇಶವಿರೋಧಿ ಹೇಳಿಕೆ ನೀಡುವ ಮೂಲಕ ಭಾರತಕ್ಕೆ ಮತ್ತು ಸಂವಿಧಾನಕ್ಕೆ ಅಗೌರವ ತೋರಿದ ಸಿ ಟಿ ರವಿ ವಿರುದ್ಧ ದೇಶದ್ರೋಹಿ, ಸಮಾಜದ್ರೋಹಿ ಕಾಯ್ದೆಯಡಿ ಪ್ರಕರಣ ದಾಖಲಿಸಿ ಅವರನ್ನು ಜೈಲಿಗೆ ಕಳುಹಿಸಲು ಸರ್ಕಾರ ಮುಂದಾಳತ್ವ ವಹಿಸಬೇಕು” ಎಂದು ಸಂಘಟಕರು ಆಗ್ರಹಿಸಿದರು.
ಹೋರಾಟಗಾರ ಗಣೇಶ್ ಮೈತ್ರಿ ಮಾತನಾಡಿ, “ದೇಶದ ಪ್ರಧಾನಿಯವರು ಹರ್ಘರ್ ತಿರಂಗಾ ಎಂಬ ಅಭಿಯಾನವನ್ನು ಕಳೆದ ವರ್ಷ ಕೈಗೊಳ್ಳಲು ಪ್ರೇರೆಪಿಸಿದ್ದನ್ನು ಮರೆತಿರುವ ಸಿ ಟಿ ರವಿ ಅದೇ ತಿರಂಗಾ ಧ್ವಜಕ್ಕೆ ಅವಮಾನ ಎಸಗಿರುವುದು ಭಾರತೀಯರೆಲ್ಲರ ಮನಸ್ಸಿಗೆ ತುಂಬಾ ನೋವು, ಆತಂಕ ಮತ್ತು ಆಘಾತ ತಂದಿರುತ್ತದೆ” ಎಂದರು.
“ಮಂಡ್ಯ ಜಿಲ್ಲೆಯ ಕೆರೆಗೋಡಿನಂತಹ ಚಿಕ್ಕ ಹಳ್ಳಿಯಲ್ಲಿ ಧ್ವಜ ವಿವಾದ ಹುಟ್ಟು ಹಾಕಿ ಆ ಮೂಲಕ ರಾಜಕೀಯ ಲಾಭ ಪಡೆದುಕೊಳ್ಳಲು ಈ ರೀತಿ ದೇಶ ವಿರೋಧಿ ಹೇಳಿಕೆ ನೀಡಿರುವುದು ಮುಂದೆ ರಾಜ್ಯದಾದ್ಯಂತ ವ್ಯಾಪಿಸುವ ಹುನ್ನಾರವವೂ ಇದರಲ್ಲಿ ಅಡಗಿರುವ ಶಂಕೆಯಿದೆ. ಸಂವಿಧಾನ ಬದಲಿಸುತ್ತೇವೆ, ಕೆಂಪು ಕೋಟೆಯ ಮೇಲೆ ಕೇಸರಿ ಧ್ವಜ ಹಾರಿಸುತ್ತೇವೆಂದು ದೇಶ ವಿರೋಧಿ ಹೇಳಿಕೆಗಳನ್ನು ನೀಡುವ ಮೂಲಕ ಕೋಮು ಗಲಭೆ ಎಬ್ಬಿಸುವ ಹುನ್ನಾರವೂ ನಡೆದಿರುವುದು ರಾಜ್ಯದ ವಿವಿಧ ಭಾಗಗಳಲ್ಲಿ ಕಂಡುಬರುತ್ತಿವೆ. ದೇಶ ಮತ್ತು ಸಂವಿಧಾನ, ಪ್ರಜಾಪ್ರಭುತ್ವ ಉಳಿಯಬೇಕು. ಅದರ ಅಡಿಯಲ್ಲಿಯೇ ಭಾರತ ಮುನ್ನಡೆಯಬೇಕು. ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಕಾರಣದಿಂದಲೇ ಮಾಜಿ ಶಾಸಕ, ಸಚಿವರಂತಹ ಉನ್ನತ ಹುದ್ದೆ ಅಲಂಕರಿಸಿ ಅಧಿಕಾರ ಅನುಭವಿಸಿ, ಇಂದು ಸ್ವಾರ್ಥಕ್ಕಾಗಿ ಈ ರೀತಿ ದೇಶದ್ರೋಹಿ ಹೇಳಿಕೆ ನೀಡಿರುವವರ ವಿರುದ್ಧ ಸರ್ಕಾರವು ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು” ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಗದಗ | ಸಾರ್ವಜನಿಕರ ಸುರಕ್ಷಿತ ಪ್ರಯಾಣಕ್ಕಾಗಿ ಹೊಸ ಬಸ್ಗಳ ಖರೀದಿಗೆ ಕ್ರಮ: ಸಚಿವ ರಾಮಲಿಂಗಾ ರೆಡ್ಡಿ
ಈ ಸಂದರ್ಭದಲ್ಲಿ ಸಂಘಟನೆಯ ಮುಖಂಡರು ಲಕ್ಷಣ ಮಲಗಿ, ರವಿ ಕಾಂಬಳೆ, ಮಂಜುನಾಥ, ಯಶವಂತ ಮಾದರ, ಕುಮಾರ ಕಾಳಮ್ಮನವರ ಸೇರಿದಂತೆ ಇತರರು ಇದ್ದರು.