ಬೆಂಗಳೂರು ಉತ್ತರ ಭಾಗದ ಒತ್ತುವರಿ ತೆರವು ಕಾರ್ಯದಲ್ಲಿ ನೊಟೀಸ್ ನೀಡದೆ ವಾಸದ ಮನೆ ತೆರವುಗೊಳಿಸಿದ್ದಾರೆ. ಕೇಳಲು ಹೋದರೆ ಕಾನೂನು ಬಗ್ಗೆ ಮಾತನಾಡಬೇಡ ಇಲ್ಲಿಂದ ಎದ್ದು ನಡಿ ಎಂದು ಜಿಲ್ಲಾಧಿಕಾರಿ ನಿಂದಿಸಿದ್ದಾರೆ. ನನಗೆ ನ್ಯಾಯ ಕೊಡಿಸಿ ಎಂದು ಪ್ರಗತಿಪರ ಸಂಘಟನೆಗಳಲ್ಲಿ ಸಾಮಾಜಿಕ ಕಾರ್ಯಕರ್ತೆ ಎಲ್ ಮಂಜುಳಾ ಮಹೇಶ್ ಅವರು ಮನವಿ ಮಾಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಪೋಸ್ಟ್ ಮಾಡಿರುವ ಅವರು, “ವಿಧಾನಸಭಾ ಚುನಾವಣೆಗು ಮುನ್ನ ನಡೆದ ತೆರವು ಕಾರ್ಯಾಚರಣೆಯಲ್ಲಿ ಬೆಂಗಳೂರು ನಗರ ಜಿಲ್ಲೆ ಯಲಹಂಕ ಮತಕ್ಷೇತ್ರದ ಕುಂಬಾರಳ್ಳಿಯಲ್ಲಿ ಸರ್ವೆ ನಂ.8ರಲ್ಲಿ ವಾಸವಿದ್ದ ಮನೆಯನ್ನು ತೆರವು ಮಾಡಿದ್ದರು. ತೆರವಿಗೆ ಮುನ್ನ ಯಾವುದೇ ನೊಟೀಸ್ ನೀಡಿಲ್ಲ. ಅಕ್ಕಪಕ್ಕದವರಿಗೆಲ್ಲ ನೊಟೀಸ್ ನೀಡಿದ್ದಾರೆ. ಆದರೆ, ನಮ್ಮ ಮನೆ ತೆರವು ಮಾಡುವಾಗ ಪಕ್ಕದಲ್ಲಿ ಕಾರ್ಖಾನೆಯ ಶೆಡ್ ನಿರ್ಮಿಸಿಕೊಂಡಿರುವವರ ಬಳಿ ಸಹಿ ಮಾಡಿಸಿಕೊಂಡು ಮನೆ ತೆರವು ಮಾಡಿದ್ದಾರೆ” ಎಂದು ಆರೋಪಿಸಿದ್ದಾರೆ.
ಈ ಕುರಿತು ಸಾಮಾಜಿಕ ಕಾರ್ಯಕರ್ತೆ ಮಂಜುಳಾ ಮಹೇಶ್ ಈ ದಿನ.ಕಾಮ್ನೊಂದಿಗೆ ಮಾತನಾಡಿ, “ತೆರವು ಕಾರ್ಯಾಚರಣೆ ಹೆಸರಿನಲ್ಲಿ 2022ರ ಡಿಸೆಂಬರ್ನಲ್ಲಿ ಮನೆ ಒಡೆದು ಹಾಕಿದ್ದಾರೆ. ಅಂದಿನಿಂದ ಈವರೆಗೆ ಬೇರೆಕಡೆ ಮನೆ ಕೊಡುತ್ತೇವೆ ಚುನಾವಣೆ ಮುಗಿಯಲಿ ಎಂದು ಹೇಳಿಕೊಂಡು ಬಂದಿದ್ದರು. ಇಂದು(ಆ.4) ಸಭೆ ಇದೆ ಬನ್ನಿ ಎಂದು ಕರೆದಿದ್ದರು. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ಬಂದಿದ್ದೆವು” ಎಂದು ತಿಳಿಸಿದರು.
“ನನಗೆ ಅನ್ಯಾಯ ಆಗಿದೆ. ನನ್ನ ಮೇಲೆ ಅಧಿಕಾರಿಗಳೇ ದೌರ್ಜನ್ಯ ನಡೆಸಿದ್ದಾರೆ. ಸಂಬಂಧಪಟ್ಟವರ ಕುರಿತು ಪ್ರಕರಣ ದಾಖಲಿಸಿ ಎಂದು ಜಿಲ್ಲಾಧಿಕಾರಿ ಬಳಿ ಮಾನವಿ ಮಾಡಿದೆ. ಆದರೆ, ಅವರು ನನಗೆ ಕಾನೂನಿನ ಬಗ್ಗೆ ಹೇಳಲು ಬರಬೇಡ. ನಿನಗೆ ಮನೆ ಬೇಕೆಂದರೆ ಎಂಎಲ್ಎಗೆ ಹೇಳಿ ರಾಜೀವ್ ಗಾಂಧಿ ವಸತಿ ನಿಗಮದಲ್ಲಿ ಮನೆ ಸಾಂಕ್ಷನ್ ಮಾಡಿಸಿ ನಿಮ್ಮ ಹೆಸರು ಹಾಕಿಸಿ ಕೊಡುತ್ತೇವೆ. ಆದರೆ ಪರಿಹಾರ ನೀಡಲು ಆಗುವುದಿಲ್ಲ. ಅದಕ್ಕೆಲ್ಲ ಅವಕಾಶವಿಲ್ಲವೆಂದು ಹೇಳುತ್ತಿದ್ದಾರೆ” ಎಂದರು.
“ನನ್ನ ಮಕ್ಕಳನ್ನೆಲ್ಲ ಅಧಿಕಾರಿಗಳು ಬೀದಿಯಲ್ಲಿ ಎಳೆದಾಡಿದ್ದಾರೆ. ಬೇರೆಯವರಿಂದ ಐದು ವರ್ಷದ ನನ್ನ ಮಗಳ ಮೇಲೆ ಅತ್ಯಾಚಾರ, ಗಂಡ ಮಕ್ಕಳ ಕೊಲೆ ಮಾಡಿಸುವುದಾಗಿ ಬೇರೆಯವರಿಂದ ಧಮ್ಕಿ ಮಾತುಗಳು ಬರುತ್ತಿವೆ. ನನಗೆ ನ್ಯಾಯ ದೊರಕಿಸಿ. ದೌರ್ಜನ್ಯ ಎಸಗಿರುವ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಿ ಎಂದರೆ ನನಗೆ ಹೇಳಲು ಬರಬೇಡ, ನನ್ನೊಂದಿಗೆ ವಾದ ಮಾಡಬೇಡ ಇಲ್ಲಿಂದ ಎದ್ದು ಹೋಗು ಮೊದಲು ಎಂದು ನನ್ನ ಮೇಲೆ ಗದರುತ್ತಾ ಎದ್ದು ಹೊರಟರು” ಎಂದು ಆರೋಪಿಸಿದರು.
ಈ ಸುದ್ದಿ ಓದಿದ್ದೀರಾ? ಲಂಚ ಪಡೆಯುತ್ತಿದ್ದ ಬಿಬಿಎಂಪಿ ಸಿಬ್ಬಂದಿ ಬಂಧನ
“ನನಗೆ ಅಧಿಕಾರಿಗಳ ಮೇಲೆ ಯಾವುದೇ ಭರವಸೆ, ನಂಬಿಕೆ ಇಲ್ಲ. ಸತತವಾಗಿ ಎಂಟು ತಿಂಗಳುಗಳಿಂದ ಡಿಸಿ ಕಚೇರಿಗೆ ಅಲೆದಿದ್ದೇನೆ. ಆದರೆ, ನನ್ನ ಮೇಲಿನ ದೌರ್ಜನ್ಯಕ್ಕೆ ನನಗೆ ನ್ಯಾಯ ದೊರಕಿಲ್ಲ. ಹಾಗಾಗಿ ನನಗೆ ನ್ಯಾಯ ಸಿಗುವವರೆಗೂ ನಾನು ಡಿಸಿ ಕಚೇರಿ ಬಳಿಯಿಂದ ತೆರಳುವುದಿಲ್ಲ. ನನಗೆ ನ್ಯಾಯ ದೊರಕಿಸಿ, ಎಲ್ಲ ಸಂಗಟನೆಗಳು ನನ್ನೊಂದಿಗೆ ಕೈಜೋಡಿಸಿ, ಕಾನೂನು ಉಲ್ಲಂಘಿಸಿರುವವರ ಮೇಲೆ ಕ್ರಮ ಆಗಲೇಬೇಕು. ದೌರ್ಜನ್ಯ ಎಸಗಿದವರ ವಿರುದ್ಧ ದಲಿತ ದೌರ್ಜನ್ಯ ಪ್ರಕರಣ ದಾಖಲಿಸಬೇಕು. ಎಲ್ಲರೂ ಸಹಕರಿಸಿ” ಎಂದು ಮನವಿ ಮಾಡಿದರು.