- ಗಬ್ಬುವಾಸನೆಯಲ್ಲಿಯೇ ಇಡೀ ರಾತ್ರಿ ಕಳೆದ ನಿವಾಸಿಗಳು
- ಅನುಗ್ರಹ ಬಡಾವಣೆಯಲ್ಲಿ ಪ್ರತಿ ವರ್ಷ ಸಣ್ಣ ಪ್ರಮಾಣದಲ್ಲಿ ಪ್ರವಾಹ
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಕೇವಲ ಅರ್ಧ ಗಂಟೆ ಸುರಿಯುತ್ತಿರುವ ಮಳೆಯನ್ನು ತಡೆದುಕೊಳ್ಳದ ಉದ್ಯಾನನಗರಿ ರಸ್ತೆಗಳ ತುಂಬೆಲ್ಲ ನೀರು ನಿಂತಿದೆ. ಇನ್ನೂ ಕೆಲವು ಬಡಾವಣೆಯ ನೂರಾರು ಮನೆಗಳಿಗೆ ಒಳಚರಂಡಿ ನೀರು ನುಗ್ಗಿ ಅವಾಂತರ ಸೃಷ್ಟಿಸಿದೆ.
ಬೆಂಗಳೂರಿನ ದೇವರಚಿಕ್ಕನಹಳ್ಳಿಯಲ್ಲಿ ಒಳಚರಂಡಿ ಕಾಮಗಾರಿ ನಡೆಯುತ್ತಿದೆ. ಕಾಮಗಾರಿ ಹಿನ್ನೆಲೆ, ಚರಂಡಿಗೆ ಕಟ್ಟಿದ ಗೋಡೆಯನ್ನು ಕೆಡವಲಾಗಿದೆ. ಕಾಮಗಾರಿ ಇನ್ನೂ ಸಂಪೂರ್ಣವಾಗಿ ಪೂರ್ಣಗೊಂಡಿಲ್ಲ. ಮಂಗಳವಾರ ಸುರಿದ ಮಳೆಗೆ ನೂರಾರು ಮನೆಗಳಿಗೆ ಚರಂಡಿ ನೀರು ನುಗ್ಗಿದೆ. ಇದರಿಂದ ರಾತ್ರಿಯಿಡಿ ಜನರು ನಿದ್ದೆ ಇಲ್ಲದೇ ಗಬ್ಬು ವಾಸನೆಯಲ್ಲಿ ಇಡೀ ರಾತ್ರಿ ಕಳೆಯುವಂತಾಯಿತು.
“ಚರಂಡಿ ಕಾಮಗಾರಿ ಇನ್ನೂ ಸಂಪೂರ್ಣವಾಗಿ ಪೂರ್ಣಗೊಂಡಿಲ್ಲ. ಇದರಿಂದ ಚರಂಡಿ ನೀರು ಮನೆಗಳಿಗೆ ನುಗ್ಗಿದೆ. ಮನೆ ಮುಂದೆ ನಿಲ್ಲಿಸಿದ್ದ ವಾಹನಗಳು ಚರಂಡಿ ನೀರಿನಲ್ಲಿ ಮುಳುಗಿ ಹೋಗಿವೆ. ಮನೆಗಳಿಗೆ ನೀರು ನುಗ್ಗಿದರಿಂದ ಜನ ಇಷ್ಟೇಲ್ಲಾ ಕಷ್ಟಗಳನ್ನು ಅನುಭವಿಸುತ್ತಿದ್ದರೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಅಧಿಕಾರಿಗಳು ಸ್ಥಳಕ್ಕೆ ಬಂದಿಲ್ಲ ಎಂದು ದೇವರಚಿಕ್ಕನಹಳ್ಳಿಯ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಮನೆಗೆ ಚರಂಡಿ ನೀರು ನುಗ್ಗಿ ತುಂಬಾ ಅವಾಂತರ ಸೃಷ್ಟಿಯಾಗಿದೆ. ಗಬ್ಬು ವಾಸನೆಯಲ್ಲಿಯೇ ದಿನ ಕಳೆಯುವಂತಾಗಿದೆ. ರಾತ್ರಿಯೆಲ್ಲಾ ಮಳೆಯ ನೀರನ್ನು ಹೊರಹಾಕುವುದೇ ಕೆಲಸವಾಗಿತ್ತು. ಇದೆಲ್ಲಾ ಸಂಪೂರ್ಣವಾಗಿ ಸರಿ ಹೋಗಬೇಕೆಂದರೆ ಇನ್ನೂ ಎರಡು ದಿನ ಬೇಕಾಗುತ್ತಿದೆ. ಚರಂಡಿಗೆ ಮಳೆಗಾಲಕ್ಕೂ ಮುನ್ನವೇ ಮೊದಲೇ ಗೋಡೆ ಕಟ್ಟಿದರೇ ಇಷ್ಟೇಲ್ಲ ಸಮಸ್ಯೆ ಇರುತ್ತಿರಲಿಲ್ಲ” ಎಂದರು.
“ಚರಂಡಿ ನೀರು ನುಗ್ಗಿರುವದರಿಂದ ಮನೆಯಲ್ಲಾ ವಾಸನೆಯಿದೆ. ಮನೆಯಲ್ಲಿ ಮಲಗಿಕೊಳ್ಳುವುದು ಕಷ್ಟಕರವಾಗಿದೆ. ಬೇರೆಯವರ ಮನೆಗೆ ಹೋಗಿ ಮಲಗಿಕೊಳ್ಳುತ್ತಿದ್ದೇವೆ. ನಾವು ಬಾಡಿಗೆ ಮನೆಯಲ್ಲಿರುವವರು ಮನೆ ಖಾಲಿ ಮಾಡಬೇಕೆಂದರೆ ಅವಧಿ ಮುಗಿಯುವವರಿಗೆ ನೀಡಿದ ಡೌನ್ ಪೆಮೇಂಟ್ ಕೊಡುವುದಿಲ್ಲ ಎಂದು ಮನೆ ಮಾಲೀಕರು ಹೇಳುತ್ತಾರೆ. ಇತ್ತ ಕಡೆ ಬಿಬಿಎಂಪಿ ಅಧಿಕಾರಿಗಳು ಬಂದು ನಮ್ಮ ಸಮಸ್ಯೆ ಬಗೆಹರಿಸುತ್ತಿಲ್ಲ” ಎಂದು ನೋವು ತೋಡಿಕೊಂಡರು.
ಈ ಸುದ್ದಿ ಓದಿದ್ದೀರಾ? ರಾಜ್ಯದಲ್ಲಿ ಇನ್ನೂ ಮೂರು ದಿನ ಮಳೆ: ಹವಾಮಾನ ಇಲಾಖೆ
ಅನುಗ್ರಹ ಬಡಾವಣೆ ಜನರ ಗೋಳು
ಅನುಗ್ರಹ ಬಡಾವಣೆಯ ರಸ್ತೆಗಳಲ್ಲಿ ಮಂಡಿಯುದ್ದಕ್ಕೂ ಕೊಳಚೆ ನೀರು ನಿಂತಿತ್ತು. ಬಡಾವಣೆಯಲ್ಲಿರುವ ಹಲವಾರು ಮನೆಗಳಿಗೆ ನೀರು ನುಗ್ಗಿತ್ತು. ಮನೆಯವರು ನೀರನ್ನು ಹೊರಹಾಕಲು ರಾತ್ರಿಯೆಲ್ಲಾ ಹರಸಾಹಸ ಪಡುವಂತಾಯಿತು.
ಬೊಮ್ಮನಹಳ್ಳಿ ವಲಯ ಬಿಬಿಎಂಪಿ ಜಂಟಿ ಆಯುಕ್ತ ಕೃಷ್ಣಮೂರ್ತಿ ಮಾತನಾಡಿ, “ಅನುಗ್ರಹ ಬಡಾವಣೆ ತಗ್ಗು ಪ್ರದೇಶದಲ್ಲಿದೆ. ಪ್ರತಿ ವರ್ಷ ಇಲ್ಲಿ ಸ್ವಲ್ಪ ಪ್ರಮಾಣದಲ್ಲಿ ಪ್ರವಾಹವಾಗುತ್ತದೆ. ಈ ಹಿಂದೆ ನೀರು ಹರಿವಿಕೆ ಕಡಿಮೆ ಪ್ರಮಾಣದಲ್ಲಿ ಇತ್ತು. ಇದೀಗ ಕಟ್ಟಡ ನಿರ್ಮಾಣ ಹೆಚ್ಚಾಗಿದೆ. ಕಾಂಕ್ರೀಟ್ ರಸ್ತೆಗಳಾಗಿವೆ. ಇದರಿಂದ ನೀರು ಹರಿಯುವ ಪ್ರಮಾಣ ಹೆಚ್ಚಾಗಿದೆ” ಎಂದು ಹೇಳಿದರು.