- ಅಗಸ್ಟ್ 27 ರಂದು ರಸ್ತೆ ಸುರಕ್ಷತಾ ಜಾಗೃತಿ ಓಟ ಆಯೋಜನೆ
- ರಸ್ತೆ ಸುರಕ್ಷತಾ ಜಾಗೃತಿ ಓಟದಲ್ಲಿ ಭಾಗವಹಿಸುವಂತೆ ಎಸ್ಪಿ ಕರೆ
ಬೀದರ್ ಜಿಲ್ಲೆಯ ಸಾರ್ವಜನಿಕರಿಗೆ ರಸ್ತೆ ಸುರಕ್ಷತೆಯ ಅರಿವು ಮೂಡಿಸುವ ಉದ್ದೇಶದಿಂದ ಜಿಲ್ಲೆಯ ಸಂಘ-ಸಂಸ್ಥೆಗಳ ಸಹಕಾರದೊಂದಿಗೆ ಅಗಸ್ಟ್ 27 ರಂದು ರಸ್ತೆ ಸುರಕ್ಷತಾ ಜಾಗೃತಿ ಓಟವನ್ನು ಆಯೋಜಿಸಲಾಗುತ್ತಿದೆ ಎಂದು ಜಿಲ್ಲಾ ಪೊಲೀಸ್ ವರೀಷ್ಠಾಧಿಕಾರಿ ಚನ್ನಬಸವಣ್ಣ ಎಸ್.ಎಲ್ ಹೇಳಿದರು.
ಬೀದರ್ ಜಿಲ್ಲಾ ಪೊಲೀಸ್ ವರೀಷ್ಠಾಧಿಕಾರಿಗಳ ಕಛೇರಿ ಆವರಣದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಅವರು ಮಾತನಾಡಿದರು.
“ಬೀದರ್ ಜಿಲ್ಲೆಯಲ್ಲಿ 2022ನೇ ಸಾಲಿನಲ್ಲಿ 332 ಹಾಗೂ 2023ನೇ ಸಾಲಿನಲ್ಲಿ 201 ಮಂದಿ ರಸ್ತೆ ಅಪಘಾತದಲ್ಲಿ ಸಾವನಪ್ಪಿದ್ದಾರೆ. ಅವರಲ್ಲಿ ಹೆಚ್ಚಿನವರು ಹೆಲ್ಮೆಟ್ ಹಾಗೂ ಸೀಟ್ ಬೆಲ್ಟ್ ಹಾಕದೆ ಇರುವುದೇ ಮುಖ್ಯ ಕಾರಣ ಎಂದು ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ರಸ್ತೆ ಸುರಕ್ಷತಾ ಜಾಗೃತಿ ಓಟದ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲು ನಿರ್ಧರಿಸಲಾಗಿದೆ” ಎಂದರು.
“ರಸ್ತೆ ಸುರಕ್ಷತಾ ಜಾಗೃತಿ ಓಟವು ಅಗಸ್ಟ್ 27 ರಂದು ಬೆಳಿಗ್ಗೆ 5 ಗಂಟೆಗೆ ಬೀದರ್ನ ಐತಿಹಾಸಿಕ ಕೋಟೆಯಿಂದ ಪ್ರಾರಂಭವಾಗಿ ನಗರದ ಪ್ರಮುಖ ಬೀದಿಗಳಿಂದ ಸಾಗಲಿದೆ. ಮತ್ತೆ ಕೋಟೆಗೆ ಬಂದು ಸೇರಲಿದೆ. ಓಟದಲ್ಲಿ 10 ಕಿ.ಮೀ., 5 ಕಿ.ಮೀ., ಹಾಗೂ 2.5 ಕಿ.ಮೀಟರ್ನ ಮೂರು ವಿಭಾಗಗಳಾಗಿ ವಿಂಗಡಿಸಲಾಗಿದೆ. ಈ ಓಟದಲ್ಲಿ ಭಾಗವಹಿಸಲು ಇಚ್ಚಿಸುವವರು ಕ್ಯೂ.ಆರ್ ಕೋಡ್ ಸ್ಕಾನ್ ಮಾಡಿ ನಿಗದಿತ ಮಾಹಿತಿಗಳಾದ ಟಿ-ಶರ್ಟ್ ಸೈಜ್, ಆರೋಗ್ಯದ ಗುಣಮಟ್ಟ ಸೇರಿದಂತೆ ವಿವಿಧ ಮಾಹಿತಿ ನೀಡಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು. ಕ್ಯೂ..ಆರ್ ಕೋಡ್ಗಳನ್ನು ನಗರದ ಪ್ರಮುಖ 10 ಸಾರ್ವಜನಿಕರ ಸ್ಥಗಳಲ್ಲಿ ಅಳವಡಿಸಲಾಗುವುದು” ಎಂದು ಮಾಹಿತಿ ನೀಡಿದರು.
“ಈ ಓಟದಲ್ಲಿ ಶಾಲಾ-ಕಾಲೇಜಿನ ಮಕ್ಕಳು, ಎನ್ಎನ್ಸಿಕೆಡೇಟ್ಗಳು, ಸಂಘ ಸಂಸ್ಥೆಗಳ ಸದಸ್ಯರು, ಪೊಲೀಸ್ ಇಲಾಖೆಯ ಸಿಬ್ಬಂದಿಗಳು ಸೇರಿ ಒಟ್ಟು 3,000 ಸಾವಿರ ಮಂದಿ ಭಾಗವಹಿಸಲಿದ್ದಾರೆ. ಓಟದಲ್ಲಿ ಭಾಗವಹಿಸಲು ನೋಂದಣಿ ಮಾಡದವರಿಗೆ ಅಗಸ್ಟ್ 26 ರಂದು ಮಂಗಲ್ ಪೇಟ್ದಲ್ಲಿರುವ ಪೊಲೀಸ್ ಕಲ್ಯಾಣ ಮಂಟಪದಲ್ಲಿ ಟಿ-ಶರ್ಟ್ ಹಾಗೂ ಕ್ಯಾಪ್ ವಿತರಿಸಲಾಗುವುದು. ಓಟವನ್ನು ಮೊದಲು ಮುಗಿಸುವ ಮೂರು ಜನರಿಗೆ ವಿಶೇಷ ಮೆಡಲ್ ಪ್ರಧಾನ ಮಾಡಲಾಗುವುದು. ಈ ಓಟದಲ್ಲಿ ಮಾಧ್ಯಮದವರು ಸಹ ಭಾಗವಹಿಸಬೇಕು” ಎಂದು ಅವರು ಕೋರಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ರಾಜ್ಯದ ಅತಿ ಎತ್ತರದ ವ್ಯಕ್ತಿಗೆ ಬೇಕಿದೆ ಸಹಾಯಹಸ್ತ
“ಓಟದ ಭಾಗವಹಿಸುವವರಿಗೆ ಟೀ-ಶರ್ಟ್, ಕ್ಯಾಪ್, ಮೆಡಲ್, ಟಿಫೀನ್ ವ್ಯವಸ್ಥೆಗೆ ಜಿಲ್ಲೆಯ ಸಂಘ-ಸಂಸ್ಥೆಗಳ ಮುಖ್ಯಸ್ಥರು ಸಹಕಾರ ನೀಡುತ್ತಿದ್ದಾರೆ. ಆದರಿಂದ, ಬೀದರ್ ಜನರು ರಸ್ತೆ ಸುರಕ್ಷತಾ ನಿಯಮಗಳನ್ನು ಪಾಲಿಸಿ ಹಾಗೂ ರಸ್ತೆ ಸುರಕ್ಷತಾ ಜಾಗೃತಿ ಓಟದಲ್ಲಿ ಭಾಗವಹಿಸಬೇಕು” ಎಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಮಹೇಶ ಮೇಘಣ್ಣನವರ, ಪೊಲೀಸ್ ನಿರೀಕ್ಷಕ ವೆಂಕಟೇಶ ಕೆ ಯಡಹಳ್ಳಿ, ಸಿಪಿಐ ಮಲ್ಲಿಕಾರ್ಜುನ ಯಾತನೂರ, ಪಿಎಸ್ಐ ತಸ್ಲೀಂ ಸುಲ್ತಾನಾ, ಪೋಲಿಸ ಇಲಾಖೆಯ ಇತರೆ ಅಧಿಕಾರಿ ಸಿಬ್ಬಂದಿಗಳು ಸೇರಿದಂತೆ ಬೀದರ ಜಿಲ್ಲೆ ವಿವಿಧ ಸಂಘ-ಸAಸ್ಥೆಗಳ ಮುಖ್ಯಸ್ಥರು ಇದ್ದರು.