- ತಿರುಪತಿಯಿಂದ ಸಿಕಂದರಾಬಾದ್ಗೆ ಹೊರಟಿದ್ದ ವಂದೇ ಭಾರತ್ ರೈಲು
- ಘಟನೆಗೆ ಕಾರಣರಾದ ಪ್ರಯಾಣಿಕನನ್ನು ಬಂಧಿಸಿದ ರೈಲ್ವೆ ಪೊಲೀಸರು
ಮೇಕ್ ಇನ್ ಇಂಡಿಯಾದ ಭಾಗವಾಗಿ ದೇಶದಲ್ಲಿ ಚಾಲ್ತಿಯಲ್ಲಿರುವ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಉದ್ಘಾಟನೆಯಾದಂದಿನಿಂದ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಾಗುತ್ತಲೇ ಇದೆ.
ಈ ಬಾರಿ ಮಾತ್ರ ಸುದ್ದಿಯಾಗಿದ್ದು ಆಂಧ್ರಪ್ರದೇಶದಿಂದ. ಟಿಕೆಟ್ ಇಲ್ಲದೆ ಪ್ರಯಾಣಿಸುತ್ತಿದ್ದ ಪ್ರಯಾಣಿಕನೋರ್ವ ಟಾಯ್ಲೆಟ್ನಲ್ಲಿ ಮಾಡಿದ ಧೂಮಪಾನದಿಂದ ಹೊಗೆ ಸೃಷ್ಟಿಯಾಗಿ, ಕೆಲ ಕಾಲ ಆತಂಕದ ವಾತಾವರಣ ಉಂಟಾದ ಘಟನೆ ನೆಲ್ಲೂರು ಜಿಲ್ಲೆಯ ಮನುಬೋಳು ರೈಲು ನಿಲ್ದಾಣದ ಬಳಿ ನಡೆದಿದೆ.
ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಹೊಗೆಯಿಂದಾಗಿ ಸುಮಾರು ಒಂದು ಗಂಟೆ ಕಾಲ ಸ್ಥಗಿತಗೊಳಿಸಿದ್ದ ಸುದ್ದಿ ಈಗ ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡಿದ್ದು, ಘಟನೆಯಿಂದ ರೈಲಿನ ಬೋಗಿಯೊಳಗೆ ಹೊಗೆ ತುಂಬಿಕೊಂಡಿದ್ದ ವಿಡಿಯೋಗಳು ಹರಿದಾಡಿದೆ.
ತಿರುಪತಿಯಿಂದ ಸಿಕಂದರಾಬಾದ್ಗೆ ಹೊರಟಿದ್ದ ವಂದೇ ಭಾರತ್ ರೈಲಿನಲ್ಲಿ ಈ ಘಟನೆ ನಡೆದಿದೆ.
ಅಷ್ಟಕ್ಕೂ ಆಗಿದ್ದೇನು?
ರೈಲಿನಲ್ಲಿ ಟಿಕೆಟ್ ಇಲ್ಲದೆ ಪ್ರಯಾಣಿಸುತ್ತಿದ್ದ ವ್ಯಕ್ತಿಯೋರ್ವ ಟಿಕೆಟ್ ಪರಿಶೀಲಿಸುವ ಅಧಿಕಾರಿ ಟಿಟಿಯ ಕೈಗೆ ಸಿಕ್ಕಿ ಬೀಳಬಾರದೆಂದು ಸಿ -13 ಕೋಚ್ನ ಶೌಚಾಲಯದೊಳಗೆ ಹೋಗಿ ಕೂತಿದ್ದಾನೆ. ಸುಮ್ಮನೆ ಕೂತಿದ್ದಿದ್ದರೆ ಇದು ಸುದ್ದಿಯೇ ಆಗುತ್ತಿರಲಿಲ್ಲವೇನೋ. ಸುಮ್ಮನೆ ಕೂರದ ಆತ ಸಿಗರೇಟ್ ಸೇದಿ, ಅದರ ತುಂಡನ್ನು ಶೌಚಾಲಯದಲ್ಲಿದ್ದ ಕಸದ ಬುಟ್ಟಿಗೆ ಹಾಕಿದ್ದಾನೆ. ಈ ವೇಳೆ ಬೆಂಕಿಯುಂಟಾಗಿ ಹೊಗೆ ಎದ್ದಿದೆ. ಈ ವೇಳೆ ಶೌಚಾಲಯದೊಳಗೆ ಬೆಂಕಿ ನಂದಿಸಲು ಅಳವಡಿಸಲಾಗಿದ್ದ ಏರೋಸಾಲ್ ಸ್ವಯಂಚಾಲಿತವಾಗಿ ಕೆಲಸ ಮಾಡಿದೆ. ಏರೋಸಾಲ್ ಯಂತ್ರದಿಂದ ಪೌಡರ್ ಬರಲಾರಂಭಿಸಿದ್ದರಿಂದ ರೈಲಿನ ಬೋಗಿಯಲ್ಲಿ ಹೊಗೆಯ ವಾತಾವರಣ ನಿರ್ಮಾಣಗೊಂಡಿದೆ. ಹೊಗೆಯಿಂದ ಇತರ ಪ್ರಯಾಣಿಕರು ತುಂಬಾ ಭಯಭೀತರಾಗಿದ್ದರು. ಎಲ್ಲದರ ನಡುವೆ ಗಾಬರಿಯಿಂದ ಟಿಕೆಟ್ ಇಲ್ಲದ ಪ್ರಯಾಣಿಕ ಶೌಚಾಲಯದಲ್ಲೇ ಕೂತಿದ್ದಾನೆ.
ಕೂಡಲೇ ರೈಲಿನ ಸಿಬ್ಬಂದಿ ಲೋಕೋ ಪೈಲಟ್ಗೆ ಮಾಹಿತಿ ನೀಡಿದ್ದಾರೆ. ನಿಲ್ದಾಣದಲ್ಲಿ ರೈಲು ನಿಂತಿದ್ದರಿಂದ ಗಾಬರಿಗೊಂಡ ಪ್ರಯಾಣಿಕರು ಕೆಳಗಿಳಿದಿದ್ದಾರೆ. ರೈಲಿನ ಮೂರನೇ ಬೋಗಿಯ ವಾಶ್ರೂಂನಲ್ಲಿ ಹೊಗೆ ಬರುತ್ತಿರುವುದನ್ನು ಸಿಬ್ಬಂದಿ ಪರಿಶೀಲಿಸಿದರು. ಈ ವೇಳೆ ಉಪಕರಣಗಳಿಗೆ ಸುಟ್ಟ ಸಿಗರೇಟಿನ ತುಂಡು ಅಂಟಿಕೊಂಡಿದ್ದರಿಂದ ಹೊಗೆ ಹಬ್ಬಿರುವುದು ದೃಢಪಟ್ಟಿದೆ. ಬಳಿಕ ಘಟನೆಗೆ ಕಾರಣನಾದ ಹಾಗೂ ಟಿಕೆಟ್ ಇಲ್ಲದೆ ಪ್ರಯಾಣಿಸುತ್ತಿದ್ದವನನ್ನು ರೈಲ್ವೆ ಪೊಲೀಸರು ಬಂಧಿಸಿದ್ದಾರೆ. ಬಂಧಿತನ ವಿವರ ಲಭ್ಯವಾಗಿಲ್ಲ.