- ಸೂಕ್ತ ದಾಖಲೆ ಒದಗಿಸಲು ಕಾಲವಕಾಶ ನೀಡಿದ ಅಧಿಕಾರಿಗಳು
- ತಾವು ಸಹಕಾರಿ ಬ್ಯಾಂಕಿನವರು ಎಂದ ಕಾರಿನಲ್ಲಿದ್ದವರು
ಬಾಗಲಕೋಟೆ ಜಿಲ್ಲೆ ಜಮಖಂಡಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹುನ್ನೂರು ಚೆಕ್ಪೋಸ್ಟ್ನಲ್ಲಿ ಸಂಶಯಾಸ್ಪದವಾಗಿ ಸಾಗಿಸುತ್ತಿದ್ದ ಮತ್ತು ದಾಖಲೆ ಇಲ್ಲದ ₹2.10 ಕೋಟಿ ನಗದನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಜಮಖಂಡಿಯ ಹುನ್ನೂರು ಚೆಕ್ ಪೋಸ್ಟನಲ್ಲಿ ಕಾರ್ಯನಿರತ ಸ್ಟಾಟಿಸ್ಟಿಕಲ್ ಸರ್ವೆನೆಸ್ಟ್ ತಂಡದ ಸದಸ್ಯರು ತಪಾಸಣೆ ನಡೆಸುತ್ತಿರುವ ವೇಳೆಯಲ್ಲಿ ಅನುಮಾನಾಸ್ಪದವಾಗಿ ಬಂದ ವಾಹನವನ್ನು ತಡೆದು ತಪಾಸಣೆ ನಡೆಸಿದ ವೇಳೆ ದಾಖಲೆ ಇಲ್ಲದ ಅಂದಾಜು ₹2.10 ಕೋಟಿ ಹಣ ಪತ್ತೆಯಾಗಿದ್ದು, ಅದನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಪಿ ಸುನೀಲ್ಕುಮಾರ ತಿಳಿಸಿದ್ದಾರೆ.
ಕಾರಿನಲ್ಲಿ ಇದ್ದವರು ತಾವು ಸಹಕಾರಿ ಬ್ಯಾಂಕಿಗೆ ಸಂಬಂಧಿಸಿದವರು ಎಂದು ತಿಳಿಸಿದ್ದಾರೆ. ಹಣದ ಕುರಿತು ಒದಗಿಸಿರುವ ದಾಖಲೆಗಳು ಪರಿಪೂರ್ಣ ವೆಂದು ಪರಿಗಣಿಸಲು ಸಾಧ್ಯವಾಗದ ಹಿನ್ನೆಲೆ ಅವರಿಗೆ ದಾಖಲೆ ಒದಗಿಸಲು ಅವಕಾಶ ನೀಡಿ, ಹಣವನ್ನು ವಶಪಡಿಸಿಕೊಳ್ಳಲಾಗಿದೆ.
ಚೆಕ್ಪೋಸ್ಟ್ ನಲ್ಲಿ ದೊರೆತಿರುವ ಹಣದ ಮಾಲೀಕರು ಒಂದು ಸೌಹಾರ್ದ ಕ್ರೆಡಿಟ್ ಸಹಕಾರಿ ಲಿಮಿಟೆಡ್ಗೆ ಸಂಬಂಧಿಸಿದವರಾಗಿದ್ದು, ಅವರು ಹಿಪ್ಪರಗಿ, ಸತ್ತಿ, ಅಥಣಿ, ಬನಹಟ್ಟಿ ಹಾಗೂ ರಬಕವಿ ಬೇರೆ ಬೇರೆ ಶಾಖೆಗಳಿಗೆ ಹಣ ರವಾನಿಸುತಿರುವುದಾಗಿ ಮಾಹಿತಿ ನೀಡಿದ್ದಾರೆ.
ಚೆಕ್ ಪೋಸ್ಟ್ ನಲ್ಲಿ ತಪಾಸಣೆ ನಡೆಸುವ ವೇಳೆ ನಿಗದಿತ ನಮೂನೆಯಲ್ಲಿ ದಾಖಲೆಗಳು ಇಲ್ಲದೆ ಇರುವುದಕ್ಕೆ ಮತ್ತು ಚುನಾವಣೆ ಹಿನ್ನೆಲೆಯಲ್ಲಿ ಅಕ್ರಮ ಸಾಗಾಣಿಕೆಗೆ ಬಳಸುವ ಸಂಶಯ ಕಂಡು ಬಂದಿರುವುದರಿಂದ ಜಿಲ್ಲಾಮಟ್ಟದ ಸಮಿತಿ ನೇತೃತ್ವದಲ್ಲಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.