- ‘ರಾಜ್ಯ ‘ಕರ್ನಾಟಕ’ ಎಂದು ನಾಮಕರಣಗೊಂಡು 50 ವರ್ಷ ಪೂರೈಸುತ್ತಿದೆ’
- ವರ್ಷವಿಡಿ ಕಾರ್ಯಕ್ರಮ ಆಯೋಜಿಸಲು ರೂಪರೇಷೆ ಸಿದ್ಧತೆಗೆ ಸೂಚನೆ
ಮೈಸೂರು ರಾಜ್ಯ ‘ಕರ್ನಾಟಕ’ ಎಂದು ನಾಮಕರಣಗೊಂಡು 50 ವರ್ಷ ಪೂರ್ಣಗೊಳ್ಳುತ್ತಿರುವ ಸಂದರ್ಭದಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಆಯೋಜಿಸಲು ಸೂಚಿಸಲಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಶಿವರಾಜ್ ತಂಗಡಗಿ ಹೇಳಿದ್ದಾರೆ.
ಶುಕ್ರವಾರ ಕನ್ನಡ ಭವನದ ಅಂತರಂಗದಲ್ಲಿ ನಡೆದ ಇಲಾಖೆಯ ಆಯವ್ಯಯ ಸಭೆ ಉದ್ದೇಶಿಸಿ ಮಾತನಾಡಿ, “ಮೈಸೂರು ರಾಜ್ಯ 20-10-1973 ರಂದು ಕರ್ನಾಟಕ ಎಂದು ಮರುನಾಮಕರಣವಾಗಿದ್ದು, ಅದಕ್ಕೆ ಈಗ 50 ವರ್ಷ ಪೂರೈಸುತ್ತಿದೆ. ಈ ಐತಿಹಾಸಿಕ ಸಂದರ್ಭದಲ್ಲಿ ಕನ್ನಡ ನಾಡು, ನುಡಿ, ಸಂಸ್ಕೃತಿ ಸಾರುವಂತಹ ವಿಶೇಷ ಕಾರ್ಯಕ್ರಮ ರೂಪಿಸಿ ವರ್ಷವಿಡಿ ಆಯೋಜಿಸಲು ಸೂಕ್ತ ರೂಪರೇಷೆಗಳನ್ನು ಸಿದ್ಧಪಡಿಸಿ ಸಲ್ಲಿಸಬೇಕೆಂದು ಅಧಿಕಾರಿಗಳಿಗೆ” ಸೂಚಿಸಿದರು.
“ಈ ಬಾರಿ ಆಯವ್ಯಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯಕ್ರಮಗಳಿಗೆ ಹೆಚ್ಚಿನ ಅನುದಾನ ಕೋರಲಾಗುವುದು. ಆ ಮೂಲಕ ಸಂಸ್ಕೃತಿ ಇಲಾಖೆಯ ಕಾರ್ಯಕ್ರಮಗಳು ವ್ಯಾಪಕವಾಗಿ ಮತ್ತು ಹೆಚ್ಚು ಆಕರ್ಷಣೀಯವಾಗಿ ಯೋಜಿಸಲು ಉದ್ದೇಶಿಸಲಾಗಿದೆ. ರವೀಂದ್ರ ಕಲ್ಲಾಕ್ಷೇತ್ರವನ್ನು ನವೀಕರಿಸಿ, ಅಲ್ಲಿ ಆಸನ ವ್ಯವಸ್ಥೆ ಧ್ವನಿ ಮತ್ತು ಬೆಳಕು ಸುಧಾರಣೆ ಮಾಡಲು ಕ್ರಮ ಕೈಗೊಳ್ಳುವಂತೆ” ಸೂಚಿಸಿದರು.
ಈ ಸುದ್ದಿ ಓದಿದ್ದೀರಾ? ಭ್ರಷ್ಟ ಪಿಡಿಒಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಸಚಿವ ಪ್ರಿಯಾಂಕ್ ಖರ್ಗೆ ಸೂಚನೆ
“ಕರ್ನಾಟಕ ಪರಂಪರೆ ಬಿಂಬಿಸುವಂತಹ ಚಾಲುಕ್ಯ ಉತ್ಸವ, ಆನೆಗುಂದಿ ಉತ್ಸವ, ಲಕ್ಕುಂಡಿ ಉತ್ಸವ, ಹಂಪಿ ಉತ್ಸವ, ನವರಸಪುರ ಉತ್ಸವ, ಕದಂಬ ಉತ್ಸವ, ಇಟಗಿ ಉತ್ಸವ ಹಾಗೂ ಕನಕಗಿರಿ ಉತ್ಸವ ಮುಂತಾದ ಉತ್ಸವ ಇನ್ಮುಂದೆ ನಿಗದಿತ ದಿನಾಂಕಗಳಂದು ಪ್ರವಾಸಿಗರ ಅನುಕೂಲ ದೃಷ್ಟಿಯಲ್ಲಿ ಇಟ್ಟುಕೊಂಡು ಆಯೋಜಿಸಬೇಕು. ಮತ್ತು ಅದಕ್ಕೊಂದು ವೇಳಾಪಟ್ಟಿಯನ್ನು ಸಿದ್ಧಪಡಿಸಬೇಕು” ಎಂದು ಹೇಳಿದರು.
“ಉತ್ತರ ಕರ್ನಾಟಕ ಮತ್ತು ಹೈದರಾಬಾದ್ ಕರ್ನಾಟಕ ಭಾಗಗಳಲ್ಲಿ ಜಾನಪದ ಲೋಕ ಸ್ಥಾಪನೆಗೆ ಸೂಕ್ತ ಯೋಜನೆ ರೂಪಿಸಬೇಕು. ಐತಿಹಾಸಿಕ ಸ್ಮಾರಕಗಳ ಮುಂದೆ ಪ್ರತಿ ತಿಂಗಳು ರಜಾ ದಿನಗಳಂದು ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲು ಪ್ರವಾಸೋದ್ಯಮ ಇಲಾಖೆಯ ಸಹಯೋಗದೊಂದಿಗೆ ಕಾರ್ಯಕ್ರಮ ರೂಪಿಸಲು ಕ್ರಮ ಕೈಗೊಳ್ಳಬೇಕು” ಎಂದು ಸಚಿವರು ಸಭೆಯಲ್ಲಿ ನಿರ್ದೇಶಿಸಿದರು.
ಸಭೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ಡಾ. ಎನ್ ಮಂಜುಳಾ, ನಿರ್ದೇಶಕ ವಿಶ್ವನಾಥ ಪಿ ಹಿರೇಮಠ ಹಾಗೂ ಇತರ ಉನ್ನತ ಅಧಿಕಾರಿಗಳು ಹಾಜರಿದ್ದರು.