ಸ್ನೇಹಿತನನ್ನೇ ಕೊಂದು, ಆತನ ಮೃತದೇಹವನ್ನು ಗುಹೆಯಲ್ಲಿ ಸುಟ್ಟಯ ಹಾಕಿದ್ದ ಪ್ರಕರಣ ಬೆಳಕಿಗೆ ಬಂದಿದ್ದು, ಆರೋಪಿಯನ್ನು ಚಿಕ್ಕಬಳ್ಳಾಪುರದ ಪಾತಪಾಳ್ಯ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಕೊಲೆ ಮಾಡಿ, ಹೆದರಿದ್ದ ಮತ್ತೊಬ್ಬ ಆರೋಪಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ವರದಿಯಾಗಿದೆ.
ಆಂಧ್ರ ಪ್ರದೇಶದ ದಾದಿವಾರಪಲ್ಲಿ ನಿವಾಸಿ ವೆಂಕಟರಮಣ ನಾಯ್ಕ ಎಂಬಾತನನ್ನು ಆತನ ಇಬ್ಬರು ಸ್ನೇಹಿತರಾದ ಬಾಬು ಮತ್ತು ಪ್ರಭಾಕರ್ ಹತ್ಯೆಗೈದು ಸುಟ್ಟುಹಾಕಿದ್ದರು. ವೆಂಕಟರಮಣ ಮನೆಗೆ ಬಾರದ ಹಿನ್ನೆಲೆಯಲ್ಲಿ, ಆತನ ತಂದೆ ಜ.7ರಂದು ಆಂಧ್ರದ ಅಮ್ಮಡಗೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪೊಲೀಸರು ನಾಪತ್ತೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು.
ಈ ವೇಳೆ, ಮೃತನ ಸ್ನೇಹಿತ ಬಾಬುನನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ತನಿಖೆಯಲ್ಲಿ ಕೃತ್ಯದ ಬಗ್ಗೆ ಒಪ್ಪಿಕೊಂಡಿರುವ ಆರೋಪಿ, ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ವಂಡಮಾನ್ ಜಲಾಶಯದ ಬಳಿ ವೆಂಕಟರಮಣನನ್ನು ಕೊಂದು, ಸುಟ್ಟು ಹಾಕಿರುವುದಾಗಿ ತಿಳಿಸಿದ್ದಾನೆ.
ಬಳಿಕ, ಅಮ್ಮಡಗೂರು ಪೊಲೀಸರು ಪಾತಪಾಳ್ಯ ಪೊಲೀಸರಿಗೆ ಮಾಹಿತಿ ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಪೊಲೀಸರ ತನಿಖೆ ಬಗ್ಗೆ ತಿಳಿದ ಮತ್ತೊಬ್ಬ ಆರೋಪಿ ಪ್ರಭಾಕರ್ ಭಯದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಬಾಬು ಹಾಗೂ ವೆಂಕಟರಮಣ ನಾಯ್ಕ ಮಧ್ಯೆ ಜಮೀನು ವಿವಾದ ಇತ್ತು. ಇಬ್ಬರು ಪದೇ-ಪದೇ ಜಗಳ ಆಡುತ್ತಿದ್ದರು. ಇದೇ ವಿಚಾರಕ್ಕೆ ಕೊಲೆ ಮಾಡಿದ್ದಾರೆ. ಮೃತದೇಹವನ್ನು ವಂಡಮಾನ್ ಜಲಾಶಯದ ಬಳಿಗೆ ತಂದು ಸುಟ್ಟು ಹಾಕಿದ್ದಾರೆ ಎಂದು ತಿಳಿದುಬಂದಿದೆ.