ಮತದಾನದಿಂದ ಯಾವುದೇ ಅರ್ಹ ಮತದಾರರು ವಂಚಿತರಾಗಬಾರದು. ಇದನ್ನರಿತು ಅಂಚೆ ಮತದಾನದ ಚುನಾವಣಾ ಕರ್ತವ್ಯಕ್ಕೆ ನಿಯೋಜಿತರಾಗಿರುವ ಅಧಿಕಾರಿಗಳು ಮತ್ತು ಸಿಬ್ಬಂದಿ ಚುನಾವಣಾ ಆಯೋಗದ ನಿಯಮಾನುಸಾರ ಕರ್ತವ್ಯ ನಿರ್ವಹಿಸಬೇಕು ಎಂದು ಚಿಕ್ಕಬಳ್ಳಾಪು ಅಪರ ಜಿಲ್ಲಾಧಿಕಾರಿ ಡಾ ಎನ್ ತಿಪ್ಪೇಸ್ವಾಮಿ ತಿಳಿಸಿದರು.
ಚಿಕ್ಕಬಳ್ಳಾಪುರ ನಗರದ ಜಿಲ್ಲಾ ಪಂಚಾಯಿತಿಯ ಸರ್ ಎಂ ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ಜಿಲ್ಲಾಡಳಿತದಿಂದ ಆಯೋಜಿಸಿದ್ದ ಅಂಚೆ ಮತದಾನದ ಕುರಿತ ತರಬೇತಿ ಕಾರ್ಯಗಾರಕ್ಕೆ ಚಾಲನೆ ನೀಡಿ ಮಾತನಾಡಿದರು.
“ಚುನಾವಣೆಗಳು ನ್ಯಾಯಸಮ್ಮತವಾಗಿ, ಪಾರದರ್ಶಕವಾಗಿ, ಶಾಂತಿಯುತವಾಗಿ ಭಯಮುಕ್ತ ವಾತಾವರಣದಲ್ಲಿ ನಡೆಯುವುದು ಎಷ್ಟು ಮುಖ್ಯವೊ, ಪ್ರತಿ ಮತದಾರರೂ ಕೂಡ ಚುನಾವಣಾ ಪ್ರಕ್ರಿಯೆಗಳಲ್ಲಿ ಪಾಲ್ಗೊಳ್ಳುವಿಕೆಯೂ ಅತಿ ಮುಖ್ಯವಾಗಿರುತ್ತದೆ. ಆದ್ದರಿಂದ ಚುನಾವಣೆ ಕರ್ತವ್ಯಕ್ಕೆ ನಿಯೋಜನೆ ಆಗುವ ಕೆಲವು ಅಧಿಕಾರಿಗಳು, ರಕ್ಷಣಾ ಪಡೆಗಳ ಅಧಿಕಾರಿಗಳು, ಸೈನಿಕರು 85 ವರ್ಷಕ್ಕೂ ಮೇಲ್ಪಟ್ಟವರ ಮತದಾನಕ್ಕಾಗಿ ಅಂಚೆ ಮತದಾನದ ವ್ಯವಸ್ಥೆ ಮಾಡುವಂತೆ ಚುನಾವಣಾ ಆಯೋಗ ಒಂದು ಸುವರ್ಣಾವಕಾಶವನ್ನು ಕಲ್ಪಿಸಿದೆ” ಎಂದು ಹೇಳಿದರು.
“ಚುನಾವಣಾ ಆಯೋಗ ಗುರುತಿಸುವ ಆಯ್ದ ಸೇವೆಗಳ ಮತದಾರರಿಗೆ ಅಂಚೆ ಮತದಾನ ಮಾಡಲು ನಮೂನೆಗಳನ್ನು ವಿತರಿಸುವ ಕಾರ್ಯದಿಂದ ಹಿಡಿದು ಮತದಾನ ಮತ್ತು ಮತ ಎಣಿಕೆ ಮಾಡುವವರೆಗಿನ ಪ್ರಕ್ರಿಯೆಗಳನ್ನು ಸುಸೂತ್ರವಾಗಿ ನಡೆಸಲು ಕೆಲವು ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ತಾವೆಲ್ಲರೂ ಚುನಾವಣಾ ಆಯೋಗ ನೀಡುವ ನಿರ್ದೇಶನಗಳು, ಸೂಚನೆಗಳನ್ನು ಕಾರ್ಯಾಗಾರದ ಮೂಲಕ ಅರಿತುಕೊಂಡು ತಮ್ಮ ಕಾರ್ಯಗಳನ್ನು ಕರಾರುವಕ್ಕಾಗಿ ನಿರ್ವಹಿಸಬೇಕು” ಎಂದು ಸೂಚಿಸಿದರು.
“ಅಂಚೆ ಮತದಾನಕ್ಕೆ ಅರ್ಹವಾಗಿರುವ ಅಂಗವಿಕಲರು, ರಕ್ಷಣಾ ಪಡೆಗಳ ವರ್ಗದವರು ಹಾಗೂ ಹಿರಿಯ ನಾಗರಿಕರ ಮಾಹಿತಿಯನ್ನು ಪಡೆದು ಅವರೆಲ್ಲರಿಗೂ ನಿಗದಿತ ನಮೂನೆಗಳನ್ನು ತಲುಪಿಸಿ ತಪ್ಪದೇ ಅಂಚೆ ಮತದಾನವನ್ನು ನಿಗದಿತ ನಿಯಮಗಳ ರೀತಿ ಮಾಡಿಸುವುದು ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಮತ್ತು ಸಿಬ್ಬಂದಿ ಜವಾಬ್ದಾರಿಯುತವಾಗಿ ಕೆಲಸ ಮಾಡಬೇಕು” ಎಂದು ತಿಳಿಸಿದರು.
ಚುನಾವಣಾ ಆಯೋಗದ ರಾಜ್ಯ ತರಬೇತುದಾರ ಶಂಕರ್ ರೆಡ್ಡಿ, ಅಂಚೆ ಮತದಾನ ಪ್ರಕ್ರಿಯೆ ಹಾಗೂ ಅದರ ಮಹತ್ವದ ಕುರಿತು ಸಮಗ್ರವಾಗಿ ಹಾಗೂ ಸವಿಸ್ತಾರವಾಗಿ ಪಿಪಿಟಿ ಮೂಲಕ ತಿಳಿಸಿಕೊಟ್ಟರು.
ಈ ಸುದ್ದಿ ಓದಿದ್ದೀರಾ? ಕಲಬುರಗಿ | ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವಂತೆ ಮನವಿ
ಕಾರ್ಯಾಗಾರದಲ್ಲಿ ಉಪವಿಭಾಗಾಧಿಕಾರಿ ಡಿ ಎಚ್ ಅಶ್ವಿನ್, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಸಂತೋಷ್ ಕುಮಾರ್ ಪಾಟೀಲ್, ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಧನುರೇಣುಕ, ಜಿಲ್ಲಾ ಉದ್ಯೋಗಾಧಿಕಾರಿ ಎಂ ಪ್ರಸಾದ್, ಚುನಾವಣಾ ತಹಶೀಲ್ದಾರ್ ಮುನಿಸ್ವಾಮಿ ರೆಡ್ಡಿ ಹಾಗೂ ಅಂಚೆ ಮತದಾನದ ಚುನಾವಣಾ ಕರ್ತವ್ಯಕ್ಕೆ ನಿಯೋಜಿತರಾಗಿರುವ ಅಧಿಕಾರಿಗಳು ಮತ್ತು ಸಿಬ್ಬಂದಿ ಇದ್ದರು.