ಪ್ರಕೃತಿಯ ಮಡಿಲಲ್ಲಿರುವ ಸೌಂದರ್ಯದ ತಾಣವಾಗಿರುವ ಚಿಕ್ಕಮಗಳೂರಿನ ಶೃಂಗೇರಿ ತಾಲೂಕಿನ ಹಲವು ಭಾಗಗಳಲ್ಲಿ ಅಕ್ರಮ ಮದ್ಯ ಮಾರಾಟ ಎಗ್ಗಿಲ್ಲದೆ ನಡೆಯುತ್ತಿದೆ. ತಾಲೂಕಿನಲ್ಲಿ ಆದಿವಾಸಿ, ಬುಡಕಟ್ಟು, ದಲಿತ ಸಮುದಾಯದ ಯವಕರು ಅಕ್ರಮ ಮದ್ಯದ ಹಾವಳಿಗೆ ಬಲಿಯಾಗುತ್ತಿದ್ದಾರೆ ಎಂದು ತಿಳಿದುಬಂದಿದೆ.
ಕೊಪ್ಪ ತಾಲೂಕಿನ ಕಲ್ಲುಗುಡ್ಡೆ, ಮೇಗೂರು, ಹೆಗ್ಗರಕೂಡಿಗೆ, ಕಚ್ಚಿಗೆ, ಗಡಿಕಲ್, ಹಾಗಲಗಂಡಿ ಹೆತ್ತನಹಟ್ಟಿ, ಉತ್ತಮೇಶ್ವರ ಹಾಗೂ ಶೃಂಗೇರಿ ತಾಲೂಕಿನ ಕುಂಚೇಬೈಲು ಸೇರಿದಂತೆ ಎಲ್ಲೆಡೆ ಮದ್ಯವನ್ನು ದಿನಸಿ ಅಂಗಡಿ ಸೇರಿದಂತೆ ಮನೆ ಮನೆಯಲ್ಲಿಯೂ ಅಕ್ರಮವಾಗಿ ಮಾರಾಟ ಮಾಡಲಾಗುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ನೂರಾರು ವರ್ಷಗಳಿಂದ ಇಲ್ಲಿ ಮೂಲ ನಿವಾಸಿಗಳು ವಾಸಿಸುತ್ತ ಬಂದಿದ್ದಾರೆ. ದಲಿತ ಸಮುದಾಯದವರೇ ಹೆಚ್ಚಿನವರಿರುವ ಈ ಊರಿನಲ್ಲಿ ಬಹುತೇಕರು ಕೊಟ್ಟೆ (ಕುಡಿಯುವ ಎಣ್ಣೆ)ಯನ್ನು ಸೇವಿಸಿ ಸಾಯುತ್ತಿದ್ದಾರೆ.
ಸ್ಥಳೀಯ ನಿವಾಸಿ ಸುಮಿತ್ರ ಈ ದಿನ.ಕಾಮ್ನೊಂದಿಗೆ ಮಾತನಾಡಿ, “ಮೇಗುರೂ ಭಾಗದ ಕುಂಚೇ ಬೈಲು ಸುತ್ತಮುತ್ತಲಿರುವ ಗ್ರಾಮಗಳಲ್ಲಿ 40ಕ್ಕಿಂತ ಅಧಿಕ ಮಂದಿ ಮೃತಪಟ್ಟಿದ್ದಾರೆ. ಮೊದಲೆಲ್ಲ ಇದಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಸಾಯುತ್ತಿದ್ದರು. ಕೆಲವರಿಗೆ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಅಂತಹವರು ಖಾಯಿಲೆಯಿಂದ ಬಳಲುತ್ತಿರಲಿಲ್ಲ, ಚೇತರಿಸಿಕೊಳ್ಳುತ್ತಿದ್ದರು. ಒಟ್ಟಾರೆಯಾಗಿ ಅಧಿಕ ಮಂದಿ ಹೆಚ್ಚಿನ ಕುಡಿತದ ಚಟದಿಂದ ಸಾಯುತ್ತಿದ್ದಾರೆ” ಎಂದು ಬೇಸರ ವ್ಯಕ್ತಪಡಿಸಿದರು.
ಕಿತ್ತಳೆಗೋಳಿಯಲ್ಲಿ ಆದಿವಾಸಿ ಗಿರಿಜನ ಬಂಗಾಳಿ ಪುಟ್ಟೆಗೌಡರ ಕುಟುಂಬದಲ್ಲಿ ಮೂರು ಮಂದಿ ಮದ್ಯಪಾನ ಸೇವಿಸಿ ಮೊದಲೇ ಮರಣ ಹೊಂದಿದ್ದಾರೆ. ನಂತರ ಪುಟ್ಟೆಗೌಡರು(50) ಅವರೂ ಕುಡಿತಕ್ಕೆ ಬಲಿಯಾದರು. ಸ್ಥಳೀಯರು ಕರ್ನಾಟಕ ಜನಶಕ್ತಿಗೆ ಮಾಹಿತಿ ತಿಳಿಸಿದ ಬಳಿಕ ಸಂಘಟನಾಕಾರರು ಸ್ಥಳಕ್ಕೇ ಧಾವಿಸಿ ಮೃತದೇಹ ಇಟ್ಟು ಸಾರಾಯಿ ವಿರೋಧಿಸಿ ಮಹಿಳೆಯರೊಂದಿಗೆ ಹೋರಾಟ ಮಾಡಿದರು. ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಆರೇಳು ತಿಂಗಳುಗಳ ಹಿಂದೆ ಅಕ್ರಮವಾಗಿ ಸಾರಾಯಿ ಮಾರುತ್ತಿದ್ದ ವ್ಯಕ್ತಿಗಳಿಗೆ ಕ್ರಮ ಕೈಗೊಳ್ಳುವುದಾಗಿ ಮುನ್ನೆಚ್ಚರಿಕೆ ನೀಡಿದ್ದರು.
ಸ್ಥಳೀಯ ನಿವಾಸಿಗಳು ಈ ದಿನ. ಕಾಮ್ನೊಂದಿಗೆ ಮಾತನಾಡಿ, “ಒಂದೇ ಕುಟುಂಬದಲ್ಲಿ ಇಷ್ಟು ಜನ ಸಾಯುತ್ತಾರೆಂದರೆ ಸಮಸ್ಯೆ ಗಂಭೀರವಾಗಿದೆ. ಮಲೆನಾಡಿನಲ್ಲಿ ಶ್ರೀಮಂತರು ಶ್ರೀಮಂತರಾಗಿದ್ದಾರೆ. ಬಡವರು ಬಡವರಾಗಿಯೇ ಉಳಿದಿದ್ದಾರೆ. ನಾವು ಕೂಲಿಯನ್ನೇ ಆವಲಂಬಿಸಿ ಬದುಕು ಕಟ್ಟಿಕೊಳ್ಳುತ್ತಾ ಜೀವನ ಸಾಗಿಸುತ್ತಿರುವ ಆದಿವಾಸಿ ಬುಡಕಟ್ಟು ದಲಿತ ಸಮುದಾಯಕ್ಕೆ ಸೇರಿದವರು. ನಮ್ಮಲ್ಲಿ ಕೆಲವರಿಗೆ ಮನೆ ಇಲ್ಲದೆ ಸೂರು ಕಟ್ಟಿಕೊಂಡು ಬದುಕುತ್ತಿದ್ದೇವೆ. ದುಡಿದ ಹಣವನ್ನೆಲ್ಲಾ ಸಾರಾಯಿ ಕುಡಿಯಲು ಖರ್ಚು ಮಾಡಿ ಕುಡಿದ ಮತ್ತಿನಲ್ಲಿ ಮನೆಯ ಮಹಿಳೆಯರಿಗೆ ಶೋಷಣೆ, ದೌರ್ಜನ್ಯ ಮಾಡುತ್ತಾರೆ. ಸುತ್ತಮುತ್ತಲಿನ ಗ್ರಾಮಗಳಲ್ಲಿ ತಿಂಗಳಿಗೆ ಒಬ್ಬರಾದರೂ ಕುಡಿತದಿಂದ ಬಲಿಯಾಗುತ್ತಿದ್ದಾರೆ” ಎಂದು ಅವಲತ್ತುಕೊಂಡರು.
ಸ್ಥಳೀಯ ನಿವಾಸಿ ರಾಧಾ ಈ ದಿನ.ಕಾಮ್ನೊಂದಿಗೆ ಮಾತನಾಡಿ, “ಸರ್ಕಾರದಿಂದ ಎಂಎಸ್ಐಎಲ್ ಮದ್ಯದಂಗಡಿ ತೆರೆಯಲು ಇಲ್ಲಿನ ಮಧ್ಯವರ್ತಿಗಳು ಪ್ರಯತ್ನಪಡುವ ಸಮಯದಲ್ಲಿ ಸುತ್ತಮುತ್ತಲಿನ ಸ್ಥಳೀಯ ಮಹಿಳೆಯರೆಲ್ಲ ಒಗ್ಗೂಡಿ ಚಿಕ್ಕಮಗಳೂರು ಜಿಲ್ಲೆಗೆ ಭೇಟಿ ನೀಡಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದೆವು. ಅಂದಿನಿಂದ ತಕ್ಕ ಮಟ್ಟಿಗೆ ಕೆಲವು ದಿನ ಮಾತ್ರ ನಿಯಂತ್ರಣದಲ್ಲಿತ್ತು. ನಂತರ ಯತಾಸ್ಥಿತಿಯಾಗಿ ದಿನಸಿ ಅಂಗಡಿ ಸೇರಿದಂತೆ ಮನೆ ಮನೆಯಲ್ಲಿ ಕೊಟ್ಟೆಯನ್ನು ಮಾರುತ್ತಿರುವುದರಿಂದ ವಿಪರೀತ ಸಮಸ್ಯೆ ಎದುರಾಗಿದೆ” ಎಂದರು.
ಈ ಸುದ್ದಿ ಓದಿದ್ದೀರಾ? ಗದಗ | ಕೊತಬಾಳ ಗ್ರಾಮಕ್ಕೆ ಗಾಂಧಿ ಗ್ರಾಮ ಪುರಸ್ಕಾರ
“ಇಂತಹ ಪರಿಸ್ಥಿತಿಯಲ್ಲಿ ಮದ್ಯದಂಗಡಿ ತೆರೆಯಲು ಸರ್ಕಾರ ಅನುಮತಿ ನೀಡಿದರೆ ಓದುವ ಮಕ್ಕಳಿಗೆ, ಕೂಲಿ ಕೆಲಸ ಮುಗಿಸಿ ಸಂಜೆ ಅಥವಾ ರಾತ್ರಿ ಸಮಯದಲ್ಲಿ ಒಂಟಿಯಾಗಿ ಓಡಾಡುವ ಹೆಣ್ಣು ಮಕ್ಕಳಿಗೆ ತೊಂದರೆಯಾಗುತ್ತದೆ. ಇನ್ನೂ ವಿಪರೀತ ಕುಡಿತಕ್ಕೆ ಒಳಗಾಗಿ ಜೀವನ ಹಾಗೂ ಜೀವ ಕಳೆದುಕೊಳ್ಳುತ್ತಾರೆಂಬ ಆತಂಕ ಎದುರಾಗಿದೆ. ಹಾಗಾಗಿ ಮುಂದಿನ ದಿನಗಳಲ್ಲಿ ಮಹಿಳಾ ಸಾರಾಯಿ ವಿರೋಧಿ ಹೋರಾಟ ಸಮಿತಿ ರಚನೆ ಮಾಡಿಕೊಂಡು ಎಲ್ಲರೂ ಒಟ್ಟಾಗಿ ಹೋರಾಟ ಮಾಡುತ್ತೇವೆ” ಎಂದು ಹೇಳಿದರು.