ಬರಗಾಲದ ಹಿನ್ನೆಲೆಯಲ್ಲಿ ತೋಟಗಾರಿಕೆ ಹಾಗೂ ಇತರೆ ಕೃಷಿ ಬೆಳೆಗಳಿಗೆ ನೀರಿನ ಅವಶ್ಯಕತೆ ಹೆಚ್ಚಿದೆ. ಈ ನಿಟ್ಟಿನಲ್ಲಿ ರೈತರ ಬೇಡಿಕೆ, ಚಿತ್ರದುರ್ಗ ಜಿಲ್ಲಾಡಳಿತ ಹಾಗೂ ನೀರಾವರಿ ಇಲಾಖೆ ಸಲಹಾ ಸಮಿತಿ ಸಭೆಯ ಆದೇಶದಂತೆ ಅಕ್ಟೋಬರ್ 17 ರಿಂದ 30ದಿನಗಳ ಕಾಲ ವಾಣಿ ವಿಲಾಸ ಸಾಗರ ಅಚ್ಚುಕಟ್ಟು ಪ್ರದೇಶದ ಭಾಗಕ್ಕೆ ನಾಲೆಗಳ ಮೂಲಕ ನೀರು ಹರಿಸಲು ತೀರ್ಮಾನಿಸಲಾಗಿದೆ.
ಪ್ರಸ್ತುತ ಸಾಲಿನಲ್ಲಿ ವಾಡಿಕೆಗಿಂತ ಅತಿ ಕಡಿಮೆ ಮಳೆಯಿಂದ ಹಿರಿಯೂರು ತಾಲೂಕನ್ನು ಬರಗಾಲ ಪೀಡಿತವೆಂದು ಘೋಷಿಸಿದ್ದು, ಅಚ್ಚುಕಟ್ಟು ವ್ಯಾಪ್ತಿಯಲ್ಲಿರುವ ತೋಟಗಾರಿಕೆ ಹಾಗೂ ಇತರೆ ಕೃಷಿ ಬೆಳೆಗಳಿಗೆ ನೀರು ಅವಶ್ಯವಾಗಿದೆ. ಆದ್ದರಿಂದ ನೀರು ಹರಿಸುವಂತೆ ರೈತರ ಬೇಡಿಕೆಯಿತ್ತು. ಇದರಿಂದ ಅ.13ರಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾಉಸ್ತುವಾರಿ ಸಚಿವ ಡಿ ಸುಧಾಕರ್ ಹಾಗೂ ವಿವಿ ಸಾಗರ ನೀರಾವರಿ ಸಲಹಾ ಸಮಿತಿ ನೇತೃತ್ವದಲ್ಲಿ ಸಭೆ ನಡೆಸಿ, ಅ.17 ರಿಂದ ನ.16ರವರೆಗೆ 30 ದಿನಗಳ ಕಾಲ ನಾಲೆಗಳ ಮೂಲಕ ವಾಣಿವಿಲಾಸ ಸಾಗರ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಹರಿಸಲು ಸೂಚಿಸಲಾಗಿದೆ.
ಅಚ್ಚುಕಟ್ಟೆ ಭಾಗಕ್ಕೆ ನಾಲೆಗಳಲ್ಲಿ ನೀರು ಹರಿಸುವುದರಿಂದ ನಾಲೆಯ ಅಕ್ಕಪಕ್ಕದ ಎಲ್ಲ ಗ್ರಾಮಗಳಲ್ಲಿ ಅಂತರ್ಜಲ ಮಟ್ಟ ಹೆಚ್ಚಾಗಲಿದೆ. ಅಲ್ಲದೇ ಅಡಿಕೆ, ತೆಂಗು ಸೇರಿದಂತೆ ತೋಟಗಾರಿಕಾ ಬೆಳೆಗಳು ಹಾಗೂ ಅಲ್ಪ ಸ್ವಲ್ಪ ಒಣಗಿರುವ ಕೃಷಿ ಬೆಳೆ ಉಳಿಸಿಕೊಳ್ಳಲು ಸಹಾಯವಾಗುತ್ತದೆ. ಆದ್ದರಿಂದ ನೀರು ಹರಿಸಲು ಸೂಚಿಸಿದ್ದು, ಎಲ್ಲ ಇಲಾಖೆಯ ಸಹಯೋಗದೊಂದಿಗೆ ಸಮರ್ಪಕವಾದ ನೀರು ನಿರ್ವಹಣೆ ಮಾಡಲು ಹಾಗೂ ಯಾವುದೇ ಕಾರಣಕ್ಕೂ ನೀರು ಪೋಲಾಗದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
“ಅಚ್ಚುಕಟ್ಟು ವ್ಯಾಪ್ತಿಯಲ್ಲಿ ಬರುವ ಎಲ್ಲ ಹಳ್ಳಿಗಳಿಗೆ ನೀರು ಹರಿಸುವ ಪೂರ್ವದಲ್ಲಿ ಮುಂಜಾಗ್ರತೆಯಿಂದ ಜನ ಜಾನುವಾರುಗಳಿಗೆ ಹಾಗೂ ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಎಚ್ಚರ ವಹಿಸಬೇಕು. ನಿಯಮ ಮೀರಿ ನೀರು ಹರಿಸಲು ಮುಂದಾದರೆ ಕಾನೂನು ಕ್ರಮ ಜರುಗಿಸಲಾಗುತ್ತದೆ” ಎಂದು ನೀರಾವರಿ ಇಲಾಖೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ಪ್ರಸ್ತುತ ಡ್ಯಾಂನಲ್ಲಿ 122.15 ಅಡಿ ನೀರು ಸಂಗ್ರಹವಿದ್ದು, ಅ.17 ರಿಂದ 30 ದಿನಗಳ ಕಾಲ ಅಚ್ಚುಕಟ್ಟು ಪ್ರದೇಶಕ್ಕೆ ನಿರಂತರವಾಗಿ ನೀರು ಹರಿಯಲಿದೆ. ಇದರಿಂದ ಜಲಾಶಯ ವ್ಯಾಪ್ತಿಯ ತೋಟಗಾರಿಕೆ ಬೆಳೆಗಳಾದ ತೆಂಗು, ಅಡಕೆ, ಬಾಳೆ ಮುಂತಾದ ಬೆಳೆಗಳ 5,557 ಎಕರೆ ಹಾಗೂ 6,578 ಎಕರೆ ಖುಷ್ಕಿ ಜಮೀನು ಸೇರಿದಂತೆ ಒಟ್ಟು 12,135 ಎಕರೆ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಹರಿಸಲು ಜಿಲ್ಲಾಡಳಿತ ಮುಂದಾಗಿದೆ.
ಈ ವರ್ಷದ ಆರಂಭದಲ್ಲಿ ಫೆಬ್ರವರಿ 2ರಿಂದ ಮಾರ್ಚ್ 4ರವರೆಗೆ ಈ ಅಚ್ಚುಕಟ್ಟು ಪ್ರದೇಶಕ್ಕೆ 1ನೇ ಹಂತದ ನೀರು ಹರಿಸಿದ್ದು, ಮಾರ್ಚ್ 24ರಿಂದ ಏಪ್ರಿಲ್ 23 ರವರೆಗೆ 2ನೇ ಹಂತದ ನೀರು ಹರಿಸಿದ್ದಾರೆ. ಮೇ 19 ರಿಂದ ಜೂನ್ 17 ರವರೆಗೆ 3ನೇ ಹಂತನ ನೀರು ಹರಿದಿತ್ತು. ಆದರೆ ಈ ವರ್ಷ ವಾಡಿಕೆಯಷ್ಟೂ ಮಳೆಯಿಲ್ಲದೆ ತೋಟಗಳು ಒಣಗುತ್ತಿರುವ ಕಾರಣ ನಾಲ್ಕನೇ ಬಾರಿ ನೀರು ಹರಿಸಲು ಮುಂದಾಗಿದ್ದು, ಅಕ್ಟೋಬರ್ 17 ರಿಂದ ನವೆಂಬರ್ 16ರವರೆಗೆ ನೀರು ಹರಿಯಲಿದೆ.
ವಾಣಿವಿಲಾಸ ಸಾಗರ ನೀರಿನ ಪ್ರಮಾಣದ ವಿವರಗಳು
ಜಲಾಶಯದ ಒಟ್ಟು ನೀರಿನ ಸಂಗ್ರಹಣಾ ಸಾಮರ್ಥ್ಯ- 30.422 ಟಿಎಂಸಿ
ಬಳಕೆಗೆ ಬಾರದ ನೀರಿನ ಪ್ರಮಾಣ- 1.87 ಟಿಎಂಸಿ
ಪ್ರಸ್ತುತ ನೀರಿನ ಪ್ರಮಾಣ- 22.00 ಟಿಎಂಸಿ(122.12ಅಡಿ)
ಹಿರಿಯೂರು, ಚಿತ್ರದುರ್ಗ, ಚಳ್ಳಕೆರೆ, ಡಿಆರ್ಡಿಒ ಹಾಗೂ 18 ಹಳ್ಳಿಗಳ ಕುಡಿವ ನೀರು- 0.2115 ಟಿಎಂಸಿ
ಅಚ್ಚುಕಟ್ಟು ಪ್ರದೇಶಕ್ಕೆ 30 ದಿನಗಳ ಕಾಲ ಹರಿಸಲು ಬೇಕಾಗುವ ನೀರಿನ ಪ್ರಮಾಣ- 1.25 ಟಿಎಂಸಿ
ಅ.13 ರಿಂದ 2024ರ ಜ.31ರವರೆಗೆ ಆವಿಯಾಗುವ ನೀರಿನ ಪ್ರಮಾಣ- 0.378 ಟಿಎಂಸಿ
ಒಟ್ಟು ಬಳಕೆಯಾಗುವ ನೀರಿನ ಪ್ರಮಾಣ- 1.839 ಟಿಎಂಸಿ
ಜಲಾಶಯದಲ್ಲಿಉಳಿಯಬಹುದಾದ ನೀರಿನ ಪ್ರಮಾಣ- 20.171 ಟಿಎಂಸಿ (120 ಅಡಿ)