ನೈಜ ಕೃಷಿ ವಿಜ್ಞಾನಿ ರೈತ. ಪದವಿ ಪಡೆದ ಕೃಷಿ ವಿಜ್ಞಾನಿ ನಮ್ಮನ್ನು ದಾರಿ ತಪ್ಪಿಸಬಹುದು. ಆದರೆ ರೈತನೆಂಬ ಕೃಷಿ ವಿಜ್ಞಾನಿ ದಾರಿ ತಪ್ಪಿಸಲು ಸಾಧ್ಯವಿಲ್ಲ ಎಂದು ಸಾಣೇಹಳ್ಳಿ ಪಂಡಿತಾರಾಧ್ಯ ಶ್ರೀ ಅಭಿಪ್ರಾಯಪಟ್ಟರು.
ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ಸಾಣೇಹಳ್ಳಿಯ ಒಳಾಂಗಣ ರಂಗಮಂದಿರದಲ್ಲಿ ಸರ್ವೋದಯ ಕೃಷಿ ಘಟಕ ಹಾಗೂ ಶ್ರೀ ಶಿವಕುಮಾರ ಕಲಾಸಂಘದ ಸಂಯುಕ್ತಾಶ್ರಯದಲ್ಲಿ ನಡೆದ ಸಾಧಕ ರೈತರ ಸಮ್ಮಿಲನ ಕಾರ್ಯಕ್ರಮದಲ್ಲಿ ದಿವ್ಯ ಸಾನ್ನಿಧ್ಯವಹಿಸಿ ಮಾತನಾಡಿದರು.
“ಅನೇಕರು ರಾಜಕೀಯವಾಗಿ ಬೆಳೆದಂತೆ ರೈತರ ಮಗ, ಒಕ್ಕಲಿಗನ ಮಗನೆಂದು ಹೇಳಿಕೊಳ್ಳುವವರು. ರಾಜಕೀಯದಲ್ಲಿ ಉನ್ನತ ಸ್ಥಾನಕ್ಕೆ ಹೋದರೂ ರೈತರ ಸಮಸ್ಯೆಗಳಿಗೆ ಸ್ಪಂದಿಸದೇ ಇರುವವರನ್ನು ಕಾಣುತ್ತೇವೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
“ನಮ್ಮ ಸರ್ಕಾರ ರೈತರಿಗೆ ಬೇಕಾದ ವಿದ್ಯುತ್, ನೀರು, ಗೊಬ್ಬರದ ಸೌಲಭ್ಯಗಳನ್ನು ಒದಗಿಸುವುದರ ಕಡೆ ಗಮನಹರಿಸಬೇಕು. ಆಗ ರೈತನ ಬದುಕಿನಲ್ಲಿ ನೆಮ್ಮದಿ ಕಾಣಲು ಸಾಧ್ಯ. ಇಲ್ಲಿ ನಡೆದ ಕಾರ್ಯಕ್ರಮ ರೈತರಿಗೆ ಹೊಸ ಬೆಳಕನ್ನು ಕಾಣುವಂತಾಗಬೇಕು. ಈ ವರ್ಷದ ನಮ್ಮ ನಾಟಕೋತ್ಸವ ಕಾರ್ಯಕ್ರಮದಲ್ಲಿ ಕೃಷಿಗೆ ಹೆಚ್ಚು ಒತ್ತುಕೊಡಬೇಕು ಅನ್ನಿಸಿದೆ. ನಮ್ಮ ಸುತ್ತಮುತ್ತ ಅನೇಕ ರೈತ ಸಾಧಕರಿದ್ದಾರೆ. ಅವರನ್ನು ಗುರುತಿಸುವ ಕೆಲಸವಾಗಬೇಕು. ನಿಜವಾದ ರೈತ ಆನಂದಿಂದ, ಸ್ವಾಭಿಮಾನದಿಂದ ಬದುಕುತ್ತಾನೆ. ನಿಜವಾದ ರಕ್ಷಕರು ನಮ್ಮ ರೈತರು” ಎಂದು ಅಭಿಪ್ರಾಯಪಟ್ಟರು.
“ಮನುಷ್ಯನ ದಾಹ ಹೆಚ್ಚಾದಂತೆ ತನ್ನ ಸುಖವನ್ನು ಹಾಳು ಮಾಡಿಕೊಳ್ಳುತ್ತಿದ್ದಾನೆ. ಪಂಚಭೂತಗಳು ಮಾನವನ ಜೀವನಕ್ಕೆ ಬೇಕಾದ ಎಲ್ಲ ಆಹಾರವನ್ನು ಕೊಡುತ್ತವೆ. ಆದರೆ ಮಾನವ ದುರಾಸೆಯಿಂದ ಪಂಚಭೂತಗಳನ್ನು ನಾಶ ಮಾಡಿದ್ದಾನೆ. ದುರಾಸೆ ಬಿಟ್ಟರೆ ನೆಮ್ಮದಿ ಜೀವನ ಮಾಡಲು ಸಾಧ್ಯ. ನಾವೆಲ್ಲ ಬೇರೆ ಬೇರೆ ಸಮಸ್ಯೆಗಳನ್ನು ತೆಗೆದುಕೊಂಡು ತಲೆಮೇಲೆ ಹಾಕಿಕೊಂಡಿದ್ದೇವೆ. ಇದರ ಬದಲು ದುರಾಸೆ ದೂರ ಮಾಡಿಕೊಂಡು ಸರಳಜೀವನ ನಡೆಸಿದರೆ ಯಾವ ಸಮಸ್ಯೆಗಳು ಸೃಷ್ಟಿಯಾಗಲು ಸಾಧ್ಯವಿಲ್ಲ” ಎಂದು ತಿಳಿಸಿದರು.
ದಿವ್ಯ ಸಾನ್ನಿಧ್ಯ ವಹಿಸಿದ್ದ ಮುರುಘಾಮಠದ ಶ್ರೀ ಬಸವಕುಮಾರ ಸ್ವಾಮೀಜಿ ಮಾತನಾಡಿ, “ರೈತರು ನಿಜವಾದ ಪ್ರತಿಭಾನ್ವಿತರು. ಅವರನ್ನು ಪುರಸ್ಕರಿಸಬೇಕು. ಭೂಮಿಯಲ್ಲಿ ರಾಸಾಯನಿಕ ಹೆಚ್ಚಾಗಿ ಭೂಮಿ ಸತ್ವವನ್ನೇ ಕಳೆದುಕೊಂಡಿದೆ. ಉತ್ಪಾದಕರ ವರ್ಗ ರೈತರ ವರ್ಗ. ನಿಜವಾದ ಸಾಧಕರೆಂದರೆ ರೈತರ ವರ್ಗವೇ” ಎಂದು ಹೆಮ್ಮೆ ವ್ಯಕ್ತಪಡಿಸಿದರು.
“ಸರ್ಕಾರದಿಂದ ಕೃಷಿ ಮೇಳಕ್ಕೆ ಲಕ್ಷಗಟ್ಟಲೆ ಹಣ ಖರ್ಚು ಮಾಡುವರು. ಯಾವ್ಯಾವುದಕ್ಕೆ ಖರ್ಚು ಮಾಡುತ್ತಾರೆ ಎನ್ನುವುದನ್ನು ಅರಿಯದಾಗಿದೆ. ಯಾವುದೇ ಮೇಳ ಮಾಡಿದರೂ ಅದು ಸಾರ್ಥಕ ಮೇಳವಾಗಬೇಕು. ಶ್ರೀಗಳು ವೈಚಾರಿಕವಾಗಿ ಕೆಲಸ ಮಾಡುತ್ತಿದ್ದಾರೆ. ಬಸವತತ್ವವೇ ತಮ್ಮ ಉಸಿರಾಗಿಸಿ ಬದುಕಿದ್ದಾರೆ. ನಮ್ಮಂತಹ ಕಿರಿಯರಿಗೆ ಮಾರ್ಗದರ್ಶಕರಾಗಿ ನಮ್ಮೊಡನಿರುವುದೇ ನಮ್ಮ ಹೆಮ್ಮೆಯಾಗಿದೆ. ರಂಗಶಂಕರವನ್ನು ಸಾಣೇಹಳ್ಳಿಯಲ್ಲಿ ನೋಡುತ್ತಿದ್ದೇವೆ. ಸಾಣೇಹಳ್ಳಿಯನ್ನು ಪೂಜ್ಯ ಪಂಡಿತಾರಾಧ್ಯ ಶ್ರೀಗಳು ಎಲೆಕ್ಟ್ರಾನಿಕ್ ಸಿಟಿಯಂತೆ ಮಾಡಿದ್ದಾರೆ” ಎಂದರು.
ಈ ಸುದ್ದಿ ಓದಿದ್ದೀರಾ? ಹಾವೇರಿ | ಭವಿಷ್ಯನಿಧಿ ಯೋಜನೆ ಅನುಷ್ಠಾನಕ್ಕೆ ಹಮಾಲಿ ಕಾರ್ಮಿಕರ ಆಗ್ರಹ
ಮಾಜಿ ಶಾಸಕ ಮಹಿಮಾ ಪಟೇಲ್ ಮಾತನಾಡಿ, “ಕೆಲವೇ ಕೆಲವು ಜನಗಳಿಂದ ಹೊಸ ಪರಿವರ್ತನೆ ಪ್ರಾರಂಭವಾಗುತ್ತದೆ. ಸಮೂಹದ ಮೂಲಕ ಹೋದಾಗ ಹುಮ್ಮಸ್ಸು ಹೆಚ್ಚುತ್ತದೆ. ನಮ್ಮ ಹಿರಿಯರು ಏನು ಬೆಳೆಯುತ್ತಿದ್ದರೋ ಅದನ್ನು ಊಟ ಮಾಡುತ್ತಿದ್ದರು. ಏನು ಊಟ ಮಾಡುತ್ತಿದ್ದರೋ ಅದನ್ನು ಬೆಳೆಯುತ್ತಿದ್ದರು. ಈಗ ಹಣದ ಭೂತದ ಹಿಂದೆ ಓಡಿ ನಮ್ಮ ಆರೋಗ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ದೇವೆ. ನಮ್ಮ ಆರೋಗ್ಯಕ್ಕಾಗಿ ನಾವು ತಿನ್ನಲು ಬೆಳೆಯಬೇಕು” ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಕೃಷಿ ಸಾಧಕರನ್ನು ಸನ್ಮಾನಿಸಿದರು. ಕೃಷಿ ಸಾಧಕರಾದ ಚಂದ್ರಶೇಖರ್ ನಾರಾಯಣಪುರ, ಶಿವಪ್ರಸಾದ್, ಮಂಜುನಾಥ, ವಿಶ್ವೇಶ್ವರ ಸಜ್ಜನ್, ಹೊಯ್ಸಳ ಅಪ್ಪಾಜಿ, ಡಾ.ಗಿರೀಶ್, ಡಾ.ಸೋಮಶೇಖರ್ ಹಾಗೂ ರೈತರು ಸೇರಿದಂತೆ ಇತರರು ಇದ್ದರು.
