ರಾತ್ರಿ ವೇಳೆ ಜಮೀನುಗಳಲ್ಲಿ ವಾಸಿಸುವ ರೈತರಿಗೆ ಸಮರ್ಪಕ ವಿದ್ಯುತ್ ಪೂರೈಸಬೇಕು ಎಂದು ಆಗ್ರಹಿಸಿ ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ರಾಜ್ಯ ರೈತ ಸಂಘ ಪ್ರತಿಭಟನೆ ನಡೆಸಿತು.
“ರಾಜ್ಯಾದ್ಯಂತ ಲಕ್ಷಾಂತರ ರೈತರು ತಮ್ಮ ಜಮೀನುಗಳಿಗೆ ನೀರಾವರಿ ಸೌಲಭ್ಯಕ್ಕಾಗಿ ಪಂಪ್ಸೆಟ್ಗಳಿಗೆ ತಮ್ಮ ಇಲಾಖೆಯಿಂದ ವಿದ್ಯುತ್ ಪಡೆದಿದ್ದು ಕೃಷಿ ಪಂಪ್ಸೆಟ್ ನೀರು ಬಳಸಿಕೊಂಡು ತೆಂಗು, ಅಡಕೆ, ಮಾವು, ದಾಳಿಂಬೆ, ಪಪ್ಪಾಯಿ ಸೇರಿದಂತೆ ಇತರೆ ತೋಟಗಾರಿಕೆ ಬೆಳೆ ಮತ್ತು ಅಲ್ಪಾವಧಿ ಬೆಳೆಗಳಾದ ಶೇಂಗಾ, ರಾಗಿ, ಜೋಳ, ಭತ್ತ, ನವಣೆ, ಮೆಕ್ಕೆಜೋಳ, ತರಕಾರಿ ಬೆಳೆ, ಹೂವು, ಹಣ್ಣು ಇತ್ಯಾದಿ ಮರ ಗಿಡಗಳನ್ನು ಬೆಳೆದು ಜತೆಗೆ ಪಶುಸಂಗೋಪನೆ, ಕುರಿ, ಮೇಕೆ, ಹಸು, ಎತ್ತು, ಎಮ್ಮೆ, ಕೋಳಿ ಇತ್ಯಾದಿ ಹೈನುಗಾರಿಕೆ ಉಪಕಸುಬಾಗಿ ಸಾಕಾಣಿಕೆ ಮಾಡುತ್ತಿದ್ದು, ಅವುಗಳ ರಕ್ಷಣೆಗೆ ರೈತರು ತಮ್ಮ ಜಮೀನುಗಳಲ್ಲಿ ವಾಸಿಸುತ್ತಾರೆ. ಆದರೆ ರಾತ್ರಿ ಸಮಯದಲ್ಲಿ ಕಾಡು ಮೇಡು, ಹೊಲಗದ್ದೆ, ತೋಟಗಳಲ್ಲಿ ವಾಸಿಸುತ್ತಿದ್ದವರು ಸಮರ್ಪಕ ವಿದ್ಯುತ್ ಬೆಳಕಿಲ್ಲದೆ ಸಿಂಗಲ್ ಫೇಸ್ (ಓಪನ್ಡೆಲ್ವಾ) ವಿದ್ಯುತ್ನಿಂದ ಜೀವನ ಸಾಗಿಸುತ್ತಿದ್ದಾರೆ” ಎಂದರು.
“ರೈತರಿಗೆ ಮಾಹಿತಿ ನೀಡದೆ ರಾತ್ರಿ ಸಮಯದಲ್ಲಿ ಏಕಾಏಕಿ ಸಿಂಗಲ್ ಫೇಸ್ ವಿದ್ಯುತ್ ನಿಲುಗಡೆ ಮಾಡಿದ್ದು, ಇದರಿಂದ ತೋಟದಲ್ಲಿ ವಾಸಿಸುವ ರೈತರು ಆತಂತಕ್ಕೆ ಈಡಾಗಿದ್ದಾರೆ. ಕೊಲೆ, ದರೋಡೆ, ಸುಲಿಗೆ, ಕಳ್ಳಕಾಕರ ಹಾವಳಿ ಹೆಚ್ಚಾಗುವುದರಿಂದ ರೈತರು ರಾತ್ರಿ ಸಮಯದಲ್ಲಿ ವಾಸಿಸಲು ತುಂಬಾ ತೊಂದರೆ ಅನುಭವಿಸುತ್ತಿದ್ದಾರೆ. ಕೂಡಲೇ ಈ ಪದ್ಧತಿಯನ್ನು ನಿಲ್ಲಿಸಸಬೇಕು” ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ತುಂಗಭದ್ರಾ ಎಡದಂಡೆ ಕಾಲುವೆ ನೀರಿನ ಅಸಮರ್ಪಕ ಬಳಕೆ; ಕ್ರಮಕ್ಕೆ ಆಗ್ರಹ
ಮುಖಂಡ ಹೊರಕೇರಪ್ಪ ಮಾತನಾಡಿ, “ಇಂದು ಸಾಂಕೇತಿಕವಾಗಿ ಪ್ರತಿಭಟನೆ ಹಮ್ಮಿಕೊಂಡಿದ್ದು, ಮತ್ತೆ ಸಿಂಗಲ್ ಫೇಸ್ ವಿದ್ಯುತ್ ಸ್ಥಗಿತಗೊಂಡಲ್ಲಿ ಸೆಪ್ಟಂಬರ್ 18ರಂದು ಜಿಲ್ಲೆಯ ಕ್ಯಾದಿಗೆರೆ ಟೈಪಾನ್ನಲ್ಲಿ ರಾಷ್ಟ್ರೀಯ ಹೆದ್ದಾರಿಯನ್ನು ಬಂದ್ ಮಾಡಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಆನೇಕ ಪ್ರಗತಿಪರ ಸಂಘಟನೆಗಳು ಒಗ್ಗೂಡಿ ರಾಜ್ಯಾದ್ಯಂತ ತೀವ್ರ ಹೋರಾಟ ನಡೆಸಲಾಗುವುದು” ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಅಧ್ಯಕ್ಷ ಶಿವಕುಮಾರ್, ತಿಪ್ಪೇಸ್ವಾಮಿ, ಶ್ರೀನಿವಾಸ್ ದಸ್ತಗಿರಿ ಸಾಬ್, ಚೇತನ್ ಯಳ್ನಾಡು, ವಿನಯ್, ರಂಗಸ್ವಾಮಿ, ಅಂಜನಮೂರ್ತಿ, ಆರ್ ವಿ ಗೌಡ ಸೇರಿದಂತೆ ಇತರರು ಇದ್ದರು.