ಪಿಡಿಒ ನಿರ್ಲಕ್ಷ್ಯಕ್ಕೆ ಬೇಸತ್ತು ಸರ್ವಾನುಮತದಿಂದ ಸಾಮೂಹಿಕವಾಗಿ 11 ಸದಸ್ಯರು ರಾಜೀನಾಮೆ ನೀಡಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಜೆಜೆಹಳ್ಳಿ ಹೋಬಳಿ ವ್ಯಾಪ್ತಿಯ ಕರಿಯಾಲ ಗ್ರಾಮ ಪಂಚಾಯತಿಯಲ್ಲಿ ನಡೆದಿದೆ.
ರಾಜೀನಾಮೆ ನೀಡಿ ಮಾತನಾಡಿದ ಸದಸ್ಯರು, ಕರಿಯಾಲ ಗ್ರಾ.ಪಂ ಪಿಡಿಒ ಚಂದ್ರಕಲಾರವರು ಸರಿಯಾಗಿ ಕರ್ತವ್ಯ ಪಾಲನೆ ಮಾಡುತ್ತಿಲ್ಲ ಹಾಗೂ ಗ್ರಾಮಸ್ಥರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಇದರಿಂದ ಸಾರ್ವಜನಿಕ ಕೆಲಸ ಹಾಗೂ ಗ್ರಾಮಗಳ ಅಭಿವೃದ್ಧಿ ಕಾರ್ಯಗಳು ಸಂಪೂರ್ಣ ಸ್ಥಗಿತಗೊಂಡಿವೆ. ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರ ಮಾತಿಗೆ ಸ್ಪಂದಿಸದೇ ದುರ್ವತನೆ ತೋರುತ್ತಿರುವುದನ್ನು ಮನಗಂಡು ಸರ್ವ ಸದಸ್ಯರು ರಾಜೀನಾಮೆ ನೀಡಲು ತೀರ್ಮಾನಿಸಿದೆವು ಎಂದು ಹೇಳಿದ್ದಾರೆ.
ಗುರುವಾರ (ಫೆ.29) ಸದಸ್ಯರಾದ ಕೆ.ಬಸವರಾಜ್, ಎಂ.ಮಾರಪ್ಪ, ಸಾಕಮ್ಮ ರಾಜನಾಯ್, ಈರಣ್ಣ, ಪಿ.ಪ್ರಸನ್ನ ಕುಮಾರ್, ಡಿ.ವೆಂಕಟೇಶ್, ಭಾಗ್ಯಮ್ಮ, ಸುಶೀಲಮ್ಮ, ಆರ್. ಎಂ.ಮಂಜುಳಾ ಸೇರಿದಂತೆ 11 ಮಂದಿ ಸದಸ್ಯರು ಗ್ರಾಪಂ ಅಧ್ಯಕ್ಷರಿಗೆ ರಾಜೀನಾಮೆ ಸಲ್ಲಿಸಿ ಅಸಮಾಧಾನ ವ್ಯಕ್ತಪಡಿಸಿದರು.
ಉಳಿದಂತೆ ಮೂವರು ಸದಸ್ಯರು ಕಾರ್ಯ ನಿಮಿತ್ತ ಕೇಂದ್ರಸ್ಥಾನದಲ್ಲಿ ಇಲ್ಲದ ಕಾರಣ ಅವರು, ಶುಕ್ರವಾರ ರಾಜೀನಾಮೆ ನೀಡಲಿದ್ದು, ಅಧ್ಯಕ್ಷರು ಈ ಎಲ್ಲ ರಾಜೀನಾಮೆ ಜತೆಗೆ ತನ್ನ ರಾಜೀನಾಮೆಯನ್ನು ಚಿತ್ರದುರ್ಗ ಉಪವಿಭಾಗಾಧಿಕಾರಿಗೆ ಸಲ್ಲಿಸಲು ತೀರ್ಮಾನಿಸಿದ್ದಾರೆ ಎಂದು ಮಾಹಿತಿ ನೀಡಿದರು.
ಗ್ರಾಪಂ ವ್ಯಾಪ್ತಿಯ ಎಲ್ಲ ಗ್ರಾಮಗಳಲ್ಲಿ ಕುಡಿವ ನೀರಿನ ಸಮಸ್ಯೆ ವ್ಯಾಪಕವಾಗಿ ಉಲ್ಬಣಗೊಂಡಿದೆ. ಸಮಸ್ಯೆ ಬಗೆಹರಿಸುವಲ್ಲಿ ಪಿಡಿಒ ವಿಫಲರಾಗಿದ್ದಾರೆ. ಅವರ ಬೇಜವಾಬ್ದಾರಿಯಿಂದ ಅಭಿವೃದ್ಧಿ ಕಾರ್ಯಗಳು ಕುಂಠಿತಗೊಂಡಿದೆ. ಯಾವುದೇ ಸದಸ್ಯರಿಗೆ ಗೌರವ ಕೊಡುವುದಿಲ್ಲ ಎಂದು ಸದಸ್ಯರು ಆರೋಪಿಸಿದ್ದಾರೆ.
ಸಮಯಕ್ಕೆ ಸರಿಯಾಗಿ ಈ-ಸ್ವತ್ತು ಮಾಡಿಕೊಡುತ್ತಿಲ್ಲ. ವಸತಿ ಯೋಜನೆ ಮನೆಗಳಿಗೆ ಹಣ ಬಿಲ್ಪಾಸ್ ಮಾಡುತ್ತಿಲ್ಲ. ನರೇಗಾ ಯೋಜನೆಯಲ್ಲಿ ಯಾವುದೇ ಕೆಲಸಗಳು ನಡೆಯುತ್ತಿಲ್ಲ. ಕರ್ತವ್ಯಕ್ಕೆ ಸರಿಯಾಗಿ ಹಾಜರಾಗುವುದಿಲ್ಲ. ಎನ್ಆರ್ಜಿ ಕಾಮಗಾರಿ ರೈತರ ಸಾಮಗ್ರಿಗಳ ವೆಚ್ಚದ ಬಿಲ್ ಮಾಡದೇ, ಕುಡಿವ ನೀರಿನ ಹಾಗೂ ವಿದ್ಯುತ್ ಬಲ್ಟ್ ಖರೀದಿಯ ಬಿಲ್ ನೀಡದೇ ಸತಾಯಿಸುತ್ತಿದ್ದಾರೆ ಎಂದು ಆರೋಪಿಸಿರುವ ಸದಸ್ಯರು, ಇಂತಹ ಅನೇಕ ಸಮಸ್ಯೆಗಳಿದ್ದು, ಆಡಳಿತದಲ್ಲಿ ಅಸಹಾಯಕತೆ ತೋರಿರುವ ಪಿಡಿಒ ನಿರ್ಲಕ್ಷತೆಗೆ ಬೇಸತ್ತು ನಾವೆಲ್ಲರೂ ರಾಜೀನಾಮೆ ನೀಡಿದ್ದೇವೆ ಎಂದು ಸದಸ್ಯರು ತಿಳಿಸಿದ್ದಾರೆ.