ಭದ್ರಾ ಮೇಲ್ದಂಡೆ ಯೋಜನೆ ಹಾಗೂ ಉತ್ತಮ ಮಳೆಯಿಂದ ವಾಣಿವಿಲಾಸ ಜಲಾಶಯ 89 ವರ್ಷಗಳ ನಂತರ ಎರಡನೇ ಬಾರಿಗೆ ಭರ್ತಿಯಾಗಿದೆ. ಚಿತ್ರದುರ್ಗ ಜಿಲ್ಲೆಯ ಏಕೈಕ ಸಹಕಾರ ಕ್ಷೇತ್ರದ ವಾಣಿವಿಲಾಸ ಸಕ್ಕರೆ ಕಾರ್ಖಾನೆಯನ್ನು ಪುನರ್ ಆರಂಭಿಸುವ ಬದ್ಧತೆಯನ್ನು ಸರ್ಕಾರ ತೋರಬೇಕು ಎಂದು ಭಾರತ ಕಮ್ಯುನಿಸ್ಟ್ ಪಕ್ಷದ ಕಾರ್ಯದರ್ಶಿ ಎಸ್ ಸಿ ಕುಮಾರ್ ಒತ್ತಾಯಿಸಿದರು.
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ನಗರದಲ್ಲಿ ಸೋಮವಾರ ಎಐಟಿಯುಸಿ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಕಾರ್ಮಿಕ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು. “ವಾಣಿವಿಲಾಸ ಸಕ್ಕರೆ ಕಾರ್ಖಾನೆಯಿಂದ ನಾಲ್ಕು ನೂರಕ್ಕೂ ಹೆಚ್ಚು ಕಾರ್ಮಿಕ ಕುಟುಂಬಗಳಿಗೆ ನೇರವಾಗಿ ಕೆಲಸ ದೊರೆತಿತ್ತು. ರೈತರೂ ಸೇರಿದಂತೆ ಸಾವಿರಾರು ಜನರಿಗೆ ಪರೋಕ್ಷವಾಗಿ ಅನುಕೂಲವಾಗಿತ್ತು. ಹಾಗಾಗಿ ಸರ್ಕಾರ ತಕ್ಷಣ ತಜ್ಞರ ಸಭೆ ಕರೆದು ಸಕ್ಕರೆ ಕಾರ್ಖಾನೆಯನ್ನು ಮತ್ತೆ ಆರಂಭಿಸಬೇಕು” ಎಂದು ಒತ್ತಾಯಿಸಿದರು.
“ಆಮೆಗತಿಯಲ್ಲಿ ನಡೆಯುತ್ತಿರುವ ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿಯನ್ನು ಕಾಲಮಿತಿಯ ಒಳಗೆ ಪೂರೈಸಿ ರೈತರಿಗೆ ನೆರವಾಗಬೇಕು. ತುಮಕೂರು–ಚಿತ್ರದುರ್ಗ–ದಾವಣಗೆರೆ ನೇರ ರೈಲು ಮಾರ್ಗ, ಚಿತ್ರದುರ್ಗ ನಗರದಲ್ಲಿ ರೈಲು ನಿಲ್ದಾಣದ ಸಮೀಪ ಮೇಲ್ಸೇತುವೆ ನಿರ್ಮಿಸಬೇಕು” ಎಂದು ಅವರು ಮನವಿ ಮಾಡಿದರು.
ಈ ಸುದ್ದಿ ಓದಿದ್ದೀರಾ? ಮೈಸೂರು | ಕೃಷ್ಣರಾಜ ಮತ ಕ್ಷೇತ್ರದಲ್ಲಿ ನೀರಿನ ಸಮಸ್ಯೆ; ನೀರು ಸರಬರಾಜು ಕೇಂದ್ರಕ್ಕೆ ಶಾಸಕ ಭೇಟಿ
“ಕೇಂದ್ರ ಸರ್ಕಾರ ಜಾರಿಗೆ ತಂದಿರುವ ರೈತ ಮತ್ತು ಕಾರ್ಮಿಕ ವಿರೋಧಿ ಕಾನೂನುಗಳನ್ನು ರದ್ದುಪಡಿಸಬೇಕು. ರಾಜ್ಯದಲ್ಲಿ ಚುನಾವಣೆ ಸಮಯದಲ್ಲಿ ಕಾಂಗ್ರೆಸ್ ನೀಡಿದ್ದ ಭರವಸೆಯಂತೆ ಅಂಗನವಾಡಿ ಕಾರ್ಯಕರ್ತೆ, ಆಶಾಕಾರ್ಯಕರ್ತೆಯರ ವೇತನ ಹೆಚ್ಚಿಸಬೇಕು. ಅವರಿಗೆ ಪಿಂಚಣಿ ವ್ಯವಸ್ಥೆ ಜಾರಿಗೆ ತರಬೇಕು” ಎಂದು ಕುಮಾರ್ ಒತ್ತಾಯಿಸಿದರು.
ಕಾರ್ಯಕ್ರಮದಲ್ಲಿ ನಿರ್ಮಲಾ, ರಂಗಸ್ವಾಮಿ, ನಾಗರಾಜ್, ಪಿ ಎಂ ಮಂಜುಳ, ಸೀಬಾ, ಇಂದಿರಾ ಈ.ಕೆಂಚಮ್ಮ, ಲಲಿತಮ್ಮ, ಚಿಂತಾಮಣಿ, ಕೆ.ಕೆಂಚಮ್ಮ, ರವಿಕುಮಾರ್, ರಾಮಯ್ಯ, ಮಂಜುಳಾ ಸೇರಿದಂತೆ ಕಾರ್ಮಿಕರು ಇದ್ದರು.