ಮಂಗಳೂರಿನಿಂದ ಲಕ್ಷದ್ವೀಪಕ್ಕೆ ಸರಕುಗಳನ್ನು ಹೊತ್ತು ಹೊರಟಿದ್ದ ‘ಮಂಜಿ ಬೋಟ್’ ಸಮುದ್ರದ ಮಧ್ಯೆ ನೀರಿನಲ್ಲಿ ಮುಳುಗಿದೆ. ಪರಿಣಾಮ, ಹಡಗಿನಲ್ಲಿದ್ದ ಎಂಟು ಮಂದಿ ಸಿಬ್ಬಂದಿ ಅಪಾಯದ ಸುಳಿಗೆ ಸಿಲುಕಿದ್ದರು. ಅವರನ್ನು ಮೀನುಗಾರರು ರಕ್ಷಿಸಿದ್ದಾರೆ.
ಸುಮಾರು ಮೂರು ದಿನ ಜೀವ ಕೈಯಲ್ಲಿ ಹಿಡಿದು ಸಿಬ್ಬಂದಿ ಬದುಕಿದ್ದು, ಯಾವ ಕ್ಷಣದಲ್ಲಿ ಏನು ಬೇಕಾದರೂ ಆಗಬಹುದೆಂಬ ಆತಂಕದಲ್ಲಿ ಅನ್ನಾಹಾರವಿಲ್ಲದೆ ಬಳಲಿದ್ದಾರೆ.
ಲಕ್ಷ ದ್ವೀಪಕ್ಕೆ ಮಂಗಳೂರಿನಿಂದ ಆಹಾರ ವಸ್ತು, ಜಲ್ಲಿ, ಸಿಮೆಂಟ್ ಮತ್ತಿತರ ಸರಕುಗಳನ್ನು ದೊಡ್ಡ ದೋಣಿ (ಮಂಜಿ) ಮೂಲಕ ಒಯ್ಯಲಾಗುತ್ತದೆ. ಅಂತೆಯೇ, ಮಾರ್ಚ್ 12ರಂದು ಮಂಗಳೂರಿನಿಂದ ಜಲ್ಲಿ, ಸಿಮೆಂಟ್ ಇನ್ನಿತರ ಸಾಮಗ್ರಿ ಹೊತ್ತು ಒಂದು ಮಂಜಿ ಹೊರಟಿತ್ತು.
ಸರಕು ತಂಬಿದ ಮಂಜಿ ಸಮುದ್ರದ ಮಧ್ಯೆ ಸಾಗುತ್ತಿದ್ದಂತೆಯೇ ತಾಂತ್ರಿಕ ತೊಂದರೆಗೀಡಾಗಿ ಮುಳುಗಲು ಆರಂಭವಾಯಿತು. ಈ ನಡುವೆ ಅದನ್ನು ಉಳಿಸಿಕೊಳ್ಳುವ ಯಾವ ಪ್ರಯತ್ನವೂ ಸಫಲವಾಗಲಿಲ್ಲ. ಬೋಟು ಕ್ಷಣ ಕ್ಷಣವೂ ಮುಳುಗುತ್ತಿತ್ತು.
ಈ ನಡುವೆ, ಮಂಜಿಯ ಕ್ಯಾಪ್ಟನ್ ಮತ್ತು ಕೆಲವು ಸಿಬ್ಬಂದಿ ಸಣ್ಣ ಬೋಟಿನಲ್ಲಿ ಸಮುದ್ರಕ್ಕೆ ಹಾರಿ ಜೀವ ಉಳಿಸಿಕೊಳ್ಳಲು ಪ್ರಯತ್ನಿಸಿದರು. ಆದರೆ, ಇನ್ನೂ ಕೆಲವು ಸಿಬ್ಬಂದಿಗೆ ಬೇರೆ ದಾರಿಯೇ ಇರಲಿಲ್ಲ. ಅವರು ಆಳ ಸಮುದ್ರದಲ್ಲಿ ಮುಳುಗುತ್ತಿರುವ ಮಂಜಿಯಲ್ಲಿ ನಿಂತು ಜೀವ ರಕ್ಷಣೆಗಾಗಿ ಕೈಬೀಸುತ್ತಿದ್ದರು.
ಈ ನಡುವೆ, ಲಕ್ಷದ್ವೀಪದ ಕಲ್ಪೇನಿ ದ್ವೀಪದ ಬಳಿ ಮೀನುಗಾರಿಕೆ ನಡೆಸುತ್ತಿದ್ದ ಮೀನುಗಾರರು ಅವರನ್ನು ಕಂಡು ರಕ್ಷಣೆಗೆ ಧಾವಿಸಿದ್ದಾರೆ. ಮಂಜಿಯಲ್ಲಿದ್ದ ಎಂಟು ಮಂದಿ ಸಿಬ್ಬಂದಿಯನ್ನು ತಮ್ಮ ಬೋಟಿಗೆ ಹತ್ತಿಸಿಕೊಂಡು ಕಲ್ಪೇನಿ ದ್ವೀಪಕ್ಕೆ ಕರೆದೊಯ್ದಿದ್ದಾರೆ.
ಮಂಗಳೂರಿನಿಂದ ಹೊರಟ ಬೋಟ್ ನಾಪತ್ತೆಯಾದ ಬಗ್ಗೆ ಕರಾವಳಿ ಕೋಸ್ಟ್ ಗಾರ್ಡ್ಗೆ ಮಾಹಿತಿ ನೀಡಲಾಗಿತ್ತು. ಅವರು ಮೂರು ದಿನಗಳ ಕಾಲ ಆಳ ಸಮುದ್ರದಲ್ಲಿ ಹುಡುಕಿದರೂ ಸಿಕ್ಕಿರಲಿಲ್ಲ. ಇದೀಗ ಅವರ ಸಿಬ್ಬಂದಿಯ ರಕ್ಷಣೆ ಆಗಿರುವುದನ್ನು ತಿಳಿದ ಕೋಸ್ಟ್ ಗಾರ್ಡ್ ಟೀಮ್ ಸ್ಪೀಡ್ ಬೋಟ್ ಮೂಲಕ ಹೋಗಿ ಅವರನ್ನು ಕೇರಳದ ಕೊಚ್ಚಿಗೆ ಕರೆತಂದಿದೆ.
ಈ ಸುದ್ದಿ ಓದಿದ್ದೀರಾ? ವಿಜಯಪುರ | ಕಾಂಗ್ರೆಸ್ ಗೆಲುವಿಗೆ ಒಳ್ಳೆಯ ವಾತಾವರಣವಿದೆ: ರಾಜು ಆಲಗೂರ ವಿಶ್ವಾಸ
ಸಮುದ್ರ ಮಧ್ಯದಲ್ಲಿ ಜೀವನ್ಮರಣ ಸ್ಥಿತಿಯಲ್ಲಿದ್ದ ಮಂಜಿ ಸಿಬ್ಬಂದಿಗಳನ್ನು ರಕ್ಷಿಸಿದ ಮೀನುಗಾರರ ಮಾನವೀಯತೆ, ಸಮಯಪ್ರಜ್ಞೆಗೆ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗಿದೆ. ಇದೇ ವೇಳೆ ಇನ್ನು ಮುಂದೆ ಸರಕು ಸಾಗಣೆ ಬೋಟುಗಳ ವಿಚಾರದಲ್ಲಿ ಹೆಚ್ಚಿನ ಮುತುವರ್ಜಿ ವಹಿಸುವಂತೆ ಸೂಚಿಸಲಾಗಿದೆ. ತಾಂತ್ರಿಕ ಸಮಸ್ಯೆಗಳಿದ್ದರೆ ಪರಿಹರಿಸಿಕೊಂಡೇ ಬೋಟು ಇಳಿಸಬೇಕೆಂದು ಸೂಚಿಸಲಾಗಿದೆ.