ದಾವಣಗೆರೆಯಲ್ಲಿ ಜಲಸಿರಿ ಯೋಜನೆಯಡಿ ನಡೆಸಿರುವ ಕಾಮಗಾರಿ ಕಳಪೆಯಾಗಿದೆ ಎಂದು ಆರೋಪಿಸಲಾಗಿದೆ. ಕಾಮಗಾರಿ ನಡೆಸಿದ ಸುಯೇಜ್ ಪ್ರಾಜೆಕ್ಟ್ ಪ್ರೈವೇಟ್ ಲಿಮಿಟೆಡ್ ಎಂಬ ಗುತ್ತಿಗೆ ಕಂಪನಿ ವಿರುದ್ಧ ಜೆಡಿಎಸ್ ರಾಜ್ಯ ಕಾರ್ಯದರ್ಶಿ ಟಿ ಅಸ್ಗರ್ ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ. ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಈ ಕುರಿತು ಈ ದಿನ.ಕಾಮ್ ಜೊತೆ ಮಾತನಾಡಿದ ಟಿ ಅಸ್ಗರ್, “ದಾವಣಗೆರೆ ನಗರಕ್ಕೆ ನಿತ್ಯ 770 ಲಕ್ಷ ಲೀಟರ್ (77 ಎಂಎಲ್ಡಿ) ನೀರು ಅಗತ್ಯವಿದೆ. 2046ಕ್ಕೆ ನಗರದ ಜನಸಂಖ್ಯೆ ಎಷ್ಟಾಗಬಹುದೆಂದು ಅಂದಾಜಿಸಿ, ನಿತ್ಯ 1,570 ಲಕ್ಷ ಲೀಟರ್ (157 ಎಂಎಲ್ಡಿ) ನೀರು ಪೂರೈಸುವ ಪರಿಕಲ್ಪನೆಯೊಂದಿಗೆ ₹472.20 ಕೋಟಿ ವೆಚ್ಚದಲ್ಲಿ ಜಲಸಿರಿ ಯೋಜನೆ ರೂಪಿಸಲಾಗಿತ್ತು. ‘ಸುಯೇಜ್ ಪ್ರಾಜೆಕ್ಟ್ ಪ್ರೈವೇಟ್ ಲಿಮಿಟೆಡ್’ ಕಂಪನಿಯು ಕಾಮಗಾರಿಯ ಗುತ್ತಿಗೆ ಪಡೆದುಕೊಂಡು, 2018ರ ಮೇ ತಿಂಗಳಿನಲ್ಲಿ ಕಾಮಗಾರಿ ಆರಂಭಿಸಿತ್ತು. 2022ರ ಜನವರಿಗೆ ಮುಗಿಸಬೇಕಿತ್ತು. ಆದರೆ, ಇನ್ನೂ ಕಾಮಗಾರಿ ಮುಗಿದಿಲ್ಲ” ಎಂದು ಆರೋಪಿಸಿದ್ದಾರೆ.
“ನೀರು ಶುದ್ಧೀಕರಣ ಘಟಕದಿಂದ ಓವರ್ಹೆಡ್ ಟ್ಯಾಂಕ್ಗಳಿಗೆ ನೀರು ಹರಿಸುವ ಪೈಪ್ಲೈನ್ ಕಾಮಗಾರಿಯ ವ್ಯಾಪ್ತಿ 70.35 ಕಿ.ಮೀ ಇದ್ದು, ಇದರಲ್ಲಿಯೂ ಅನೇಕ ಕಾಮಗಾರಿಗಳು ಬಾಕಿ ಉಳಿದಿವೆ. ಓವರ್ಹೆಡ್ ಟ್ಯಾಂಕ್ಗಳಿಂದ ಮನೆಗಳಿಗೆ ನೀರು ಸರಬರಾಜು ಪೈಪ್ಲೈನ್ ಕಾಮಗಾರಿ ವ್ಯಾಪ್ತಿ 1,339 ಕಿಮೀ ಇದ್ದು, ಇದರಲ್ಲಿಯೂ ಅನೇಕ ಕಾಮಗಾರಿಗಳು ಬಾಕಿ ಉಳಿದಿವೆ. ಒಟ್ಟು 97,200 ಮನೆಗಳಿಗೆ ಸಂಪರ್ಕ ಕಲ್ಪಿಸುವ ಗುರಿ ಹೊಂದಿದ್ದು, ಇದರಲ್ಲಿ ಇನ್ನೂ ಹಲವು ಮನೆಗಳಿಗೆ ಸಂಪರ್ಕ ಒದಗಿಸಲು ಸಾಧ್ಯವಾಗಿಲ್ಲ” ಎಂದು ತಿಳಿಸಿದರು.
“ಕಳಪೆ ಗುಣಮಟ್ಟದ ಕಾಮಗಾರಿ ಮಾಡುತ್ತಿರುವ ಸುಯೇಜ್ ಪ್ರಾಜೆಕ್ಟ್ ಪ್ರೈವೇಟ್ ಲಿಮಿಟೆಡ್ ಕಂಪನಿಯ ವಿರುದ್ಧ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಬೇಕು” ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಕುಡಿಯುವ ನೀರಿಗೆ ಹಾಹಾಕಾರ; ಪಂಪ್ ಹೌಸ್ಗೆ ಸ್ಥಳೀಯರ ಮುತ್ತಿಗೆ
“ಜಲಸಿರಿ ಯೋಜನೆಗಾಗಿ ಹೊಸದಾಗಿ 18 ಓವರ್ಹೆಡ್ ಟ್ಯಾಂಕ್ಗಳ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ಕೆಲವು ಕೆಲಸಗಳು ಬಾಕಿ ಉಳಿದಿವೆ. ಯೋಜನೆಗೆ ಮಹಾನಗರ ಪಾಲಿಕೆಯ 32 ಹಳೆಯ ಓವರ್ಹೆಡ್ ಟ್ಯಾಂಕ್ಗಳು ಬಳಕೆಯಾಗಲಿದ್ದು, ಪುನರ್ ನವೀಕರಣ ನಡೆಯುತ್ತಿದೆ. ಈ ಎಲ್ಲ ಕಾಮಗಾರಿಗಾಗಿ ಕೆಯುಐಡಿಎಫ್ಸಿಯಿಂದ ಟೆಂಡರ್ ಪಡೆದ ‘ಸುಯೇಜ್ ಪ್ರಾಜೆಕ್ಟ್ ಪ್ರೈವೇಟ್ ಲಿಮಿಟೆಡ್’ ಕಂಪನಿಯು ಕಾಮಗಾರಿ ಪೂರ್ಣಗೊಳಿಸುವ ನಿಗದಿತ ಅವಧಿಗಿಂತ ಹೆಚ್ಚು ವಿಳಂಬ ಮಾಡಿದೆ. ಓವರ್ಹೆಡ್ ಟ್ಯಾಂಕ್ಗಳ ನವೀಕರಣ ಹಾಗೂ ಯೋಜನೆಗೆ ಬಳಸಿದ ಕಬ್ಬಿಣದ ಪೈಪ್ಗಳ ಗುಣ ಮಟ್ಟ ಉತ್ತಮವಾಗಿಲ್ಲ” ಎಂದು ಆರೋಪಿಸಿದರು.