ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಅವರನ್ನು ಅಧಿಕಾರದಿಂದ ಯಾಕೆ ಕೆಳಗೆ ಇಳಿಸಿದ್ದರು ಮತ್ತು ಯಾರು ಇಳಿಸಿದ್ದರು ಎನ್ನುವುದು ಇಲ್ಲಿಯವರೆಗೂ ಯಾರಿಗೂ ಗೊತ್ತಿಲ್ಲ ಎಂದು ಜೆಡಿಎಸ್ ಸದಸ್ಯ ಜಿಟಿ ದೇವೇಗೌಡ ಹೇಳಿದರು.
ವಿಧಾನಮಂಡಲ ಅಧಿವೇಶನದಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ ಸಿಎಂ ಆಗಿದ್ದ ಸಂದರ್ಭದಲ್ಲಿ ಉಪ ಮುಖ್ಯಮಂತ್ರಿಯಾಗಿದ್ದ ಲಕ್ಷ್ಮಣ್ ಸವದಿ ಅವರಿಗೆ ಗೊತ್ತಿದ್ದರೆ ಹೇಳಬೇಕು ಎಂದು ಲಕ್ಷ್ಮಣ್ ಸವದಿಯವರ ಕಾಲೆಳೆದ ಅವರು, ಯಡಿಯೂರಪ್ಪ ಅವರನ್ನು ಕೆಳಗಿಸಲು ಏನು ಕಾರಣ ಎಂಬುದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಬಿಟ್ಟರೆ ಇನ್ನು ಯಾರಿಗೂ ಗೊತ್ತಿಲ್ಲ ಎಂದು ಕುಟುಕಿದರು.
ಭಾರತೀಯ ಜನತಾ ಪಕ್ಷದಲ್ಲಿ ಅಧಿಕೃತ ವಿರೋಧ ಪಕ್ಷದ ನಾಯಕರಿಲ್ಲ. ಹಾಗೆಯೇ ಲೋಕಸಭೆಯಲ್ಲಿ ಕಾಂಗ್ರೆಸ್ಗೆ ವಿರೋಧ ಪಕ್ಷದ ನಾಯಕನಿಲ್ಲ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ಲಕ್ಷ್ಮಣ ಸವದಿ, ವಿರೋಧ ಪಕ್ಷದ ನಾಯಕ ಯಾಕಿಲ್ಲ ಎನ್ನುವುದು ನನಗಿಂತ ನಿಮಗೇ ಚೆನ್ನಾಗಿ ಗೊತ್ತಿದೆ. ಆದರೆ, ನೀವು ಹೇಳುತ್ತಿಲ್ಲ ಅಷ್ಟೆ. ವಿರೋಧ ಪಕ್ಷದ ನಾಯಕ ಇನ್ನು ಆಯ್ಕೆ ಆಗಿಲ್ಲ ಎಂದು ಹೇಳುತ್ತಿದ್ದೀರಾ, ಕಾದು ನೋಡಿ ಅದು ನಿಮ್ಮ ಬಾಗಿಲಿಗೆ ಬರಲಿದೆ. ಆ ಕಾರಣಕ್ಕಾಗಿಯೇ ಎರಡನೇ ಸೀಟ್ನಲ್ಲಿ ಯಾರು ಕೂರುತ್ತಿಲ್ಲ.
ಮೇಲಿನವರು ನನಗೆ ಅನೇಕರು ಹಳೆ ಪರಿಚಯಸ್ಥರು ಇದ್ದಾರಲಾ ಅವ್ರು ಹೇಳ್ತಾ ಇರ್ತಾರೆ. ವಿರೋಧ ಪಕ್ಷದಲ್ಲಿ ಕುಳಿತು ಯಾರಾದರೂ ಸರಿಯಾಗಿ ಕೆಲಸ ಮಾಡುವವರು ಇದ್ದರೆ ಅದು ಕುಮಾರಸ್ವಾಮಿ. ಅದಕ್ಕಾಗಿ ಕುರ್ಚಿಯನ್ನು ಖಾಲಿ ಬಿಟ್ಟಿದ್ದಾರೆ. ಅಲ್ಲಿವರೆಗೂ ನೀವು ತಾಳ್ಮೆಯಿಂದ ಇರಿ ಎಂದು ಜಿ ಟಿ ದೇವೇಗೌಡರ ಕಾಲೆಳೆದರು.