ದಾವಣಗೆರೆ ನಗರದ ಬಾರ್ ಲೈನ್ ರಸ್ತೆಯಲ್ಲಿರುವ ಮಸ್ಜಿದ್ ಎ ಮಹಮ್ಮದೀಯ ಮಸೀದಿಯಲ್ಲಿ “ನಮ್ಮೂರ ಮಸೀದಿ ನೋಡ ಬನ್ನಿ” ಸಾರ್ವಜನಿಕ ಮಸೀದಿ ಸಂದರ್ಶನ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಮಾನವತೆ, ಭ್ರಾತೃತ್ವ ಮತ್ತು ಸೌಹಾರ್ದ ಸಂದೇಶ ಸಾರುವ ನಿಟ್ಟಿನಲ್ಲಿ ಎಲ್ಲ ಧರ್ಮ, ಪಂಥದ ಮಹಿಳೆಯರು ಸೇರಿದಂತೆ ಎಲ್ಲರಿಗೂ ಆಹ್ವಾನ ನೀಡಲಾಗಿದ್ದು, ದಾವಣಗೆರೆಯ ಸುತ್ತಮುತ್ತಲಿನ ವಿವಿಧ ಜಾತಿ ಜನಾಂಗದ ಧರ್ಮದ ಜನರು ಮಸೀದಿಗೆ ಭೇಟಿ ನೀಡಿ, ಅಲ್ಲಿ ಮಸೀದಿಯ ವಿಚಾರಗಳನ್ನು ತಿಳಿದುಕೊಂಡರು.
ಮಸೀದಿ ಕಮಿಟಿಯವರು ಮತ್ತು ಬಾಂಧವರು, ಸ್ವಯಂಸೇವಕರು ಬರುವವರಿಗೆ ಸ್ವಾಗತಿಸಿ, ಮಸ್ಜಿದ್ ನ ಒಳಗಡೆ ಪ್ರಾರ್ಥನಾಲಯದಲ್ಲಿ ಇಸ್ಲಾಂ ಎಂದರೇನು, ಅಲ್ಲಾಹ್ ಎಂದರೆ ಯಾರು, ಇಸ್ಲಾಂನ ಅರ್ಥವೇನು? ಎಂಬುದರ ಕುರಿತು ಸಾರ್ವಜನಿಕರಿಗೆ ತಿಳಿಸಿ ಕೊಡುವ ಪ್ರಯತ್ನವನ್ನು ಮಾಡಿದರು.

ಇಸ್ಲಾಂ ಎಂದರೆ ಶಾಂತಿ, ಮುಸ್ಲಿಮ್ ಎಂದರೆ ಶರಣಾಗತಿ ಬಯಸುವವನು ಇನ್ನಿತರ ಬರಹದ ಫಲಕಗಳು ಮತ್ತು ಆಝಾನ್ ಬಗೆಗಿನ ವಿವರ ಮತ್ತು ಕುರಾನಿನ ವಿವಿಧ ಅಂಶಗಳನ್ನು ಅಲ್ಲಿನ ಪ್ರದರ್ಶನ ಫಲಕಗಳಲ್ಲಿ ಪ್ರದರ್ಶಿಸುವ ಹಾಗೂ ಮಸೀದಿ ಸಂದರ್ಶನಕ್ಕೆ ಬಂದವರಿಗೆ ಆತ್ಮೀಯವಾಗಿ ವಿವರಿಸುತ್ತಿದ್ದು ಕಂಡು ಬಂತು.
ಈ ಬಗ್ಗೆ ಭೇಟಿ ನೀಡಿದ ಸಾಮಾಜಿಕ ಹೋರಾಟಗಾರ, ಕಬ್ಬು ಬೆಳೆಗಾರರ ಸಂಘದ ನಿರ್ದೇಶಕ ತೇಜಸ್ವಿ ಪಟೇಲ್ ಮಾತನಾಡಿ, “ಮಸೀದಿ ಸಂದರ್ಶನ ಒಂದು ಅತ್ಯುತ್ತಮ ನಡೆಯಾಗಿದ್ದು, ಇದರಿಂದ ಸಾರ್ವಜನಿಕ ಜೀವನದಲ್ಲಿ ಎಲ್ಲರೂ ಸೌಹಾರ್ದತೆಯನ್ನು ಸಾಧಿಸಲು ಸಾಧ್ಯವಾಗುತ್ತದೆ. ಈ ರೀತಿಯ ಕಾರ್ಯಕ್ರಮಗಳು ಎಲ್ಲ ಭಾಗಗಳನ್ನು ನಡೆಯಬೇಕು. ಮಹಿಳೆಯರು ಸೇರಿದಂತೆ ಎಲ್ಲರಿಗೂ ಮುಕ್ತ ಅವಕಾಶ ಪ್ರತಿದಿನಗಳಲ್ಲೂ ಕಲ್ಪಿಸಬೇಕು” ಎಂದು ಅಭಿಪ್ರಾಯಬಿಟ್ಟರು.
ದಲಿತ ಸಂಘರ್ಷ ಸಮಿತಿಯ ಸಂಚಾಲಕ ಮಂಜುನಾಥ್ ಕುಂದವಾಡ ಮಾತನಾಡಿ, “ಇಲ್ಲಿಗೆ ಭೇಟಿ ನೀಡಿ ಇಸ್ಲಾಂ ಧರ್ಮದ ಬಗೆಗಿನ ಅರ್ಥ, ಅಲ್ಲಾಹನ ಅರ್ಥಗಳನ್ನು ತಿಳಿದು ಕೊಂಡಂತಾಗಿದೆ ಮತ್ತು ಎಲ್ಲ ಧರ್ಮಗಳ ಸಾರಗಳು ಒಂದೇ. ಯಾವ ಧರ್ಮಗಳು ಕೂಡ ಮೇಲು ಕೀಳಲ್ಲ. ಎಲ್ಲರೂ ಇಲ್ಲಿನ ಸಹೋದರತೆಯ ಭಾವನೆಯಿಂದ ಬಾಳಬೇಕು. ಈ ಮಸೀದಿ ಸಂದರ್ಶನ ಕಾರ್ಯಕ್ರಮವು ಒಂದು ಮಾದರಿ ಹೆಜ್ಜೆಯಾಗಿದೆ” ಎಂದು ಅಭಿಪ್ರಾಯಪಟ್ಟರು.ದಲಿತ ಸಂಘರ್ಷ ಸಮಿತಿಯ ಸಂಚಾಲಕ ಹೆಗ್ಗೆರೆ ರಂಗಪ್ಪ ಮಾತನಾಡಿ, “ಎಲ್ಲ ಧರ್ಮಗಳ ಸಾರಗಳು ಒಂದೇ ಇದ್ದು, ಇವನಾರಾವ ಎನ್ನದೆ, ಇವ ನಮ್ಮವ ಇವ ನಮ್ಮವ ಎಂದು ಬಸವಣ್ಣನವರು ಹೇಳಿದಂತೆ, ಕನಕದಾಸರ ಕುಲಕುಲವೆಂದು ಹೊಡೆದಾಡುವಿರೇಕೆ, ಕುಲದ ನೆಲೆಯನೇನಾದರೂ ಬಲ್ಲಿರಾ ಎಂಬಂತೆ, ಕುವೆಂಪುರವರು ಹೇಳಿದ ವಿಶ್ವಮಾನವ ಪರಿಕಲ್ಪನೆಯಂತೆ ಮನುಷ್ಯ ಬಾಳಬೇಕಾಗಿದೆ. ಇದೊಂದು ಉತ್ತಮ ಕಾರ್ಯಕ್ರಮವಾಗಿದ್ದು ಇದು ಮಾದರಿ ಕಾರ್ಯಕ್ರಮವಾಗಿ ಎಲ್ಲೆಡೆ ನಡೆಯಬೇಕು” ಎಂದು ಅಭಿಪ್ರಾಯಪಟ್ಟರು.
ದಾವಣಗೆರೆ ವಿಶ್ವಮಾನವ ಮಂಟಪದ ರುದ್ರಮುನಿ ಆವರಗೆರೆ ಮಾತನಾಡಿ, ಆದಿಯಲ್ಲಿಯೇ ಆದಿಕವಿ ಪಂಪ ಮನುಜ ಕುಲಂ ತಾನೊಂದೇ ವಲಂ ಎಂದು ಹೇಳುವಂತೆ ಪ್ರಪಂಚದಲ್ಲಿನ ಎಲ್ಲ ಧರ್ಮಗಳು ಒಂದೇ. ಎಲ್ಲ ಮಾನವರು ಒಂದೇ. ಹಾಗಾಗಿ ಎಲ್ಲರೂ ಸಮಾಜದಲ್ಲಿನ ಮೇಲು ಕೀಳು ತೊರೆದು ಸಹೋದರತೆಯಿಂದ ಮಾಡಬೇಕು ಎಂದು ಹೇಳಿದರು.
ನೋಡ ಬನ್ನಿ ನಮ್ಮೂರ ಮಸೀದಿ ಕಾರ್ಯಕ್ರಮಕ್ಕೆ ಬೆಂಗಳೂರಿನಿಂದ ಮಸೀದಿ ನೋಡಲು ಆಗಮಿಸಿದ್ದ ವೈದ್ಯೆ ಡಾ. ಸ್ವಾತಿ ಮಾತನಾಡಿ, “ಸಾಮರಸ್ಯ ಕೆಟ್ಟು ಹೋಗಿರುವ ಇಂದಿನ ಸಮಾಜದಲ್ಲಿ ಇದೊಂದು ಉತ್ತಮವಾದ ಕಾರ್ಯಕ್ರಮ. ರಾಜಕೀಯವಾಗಿ ಇಂದಿನ ಪರಿಸ್ಥಿತಿಯಲ್ಲಿ ಇಸ್ಲಾಂ ಎಂದರೆ ಭಯ, ದ್ವೇಷ ಮಾಡುವಂತಹದ್ದು ಎನ್ನುವ ತಪ್ಪು ತಿಳುವಳಿಕೆಗಳನ್ನು ಹೋಗಲಾಡಿಸಲು ಇಂತಹ ಕಾರ್ಯಕ್ರಮಗಳು ಅತ್ಯಗತ್ಯವಾಗಿದೆ. ನಾನು ಮೊದಲ ಬಾರಿಗೆ ಮಸೀದಿ ಒಳಗಡೆ ಬಂದು ಇಲ್ಲಿನ ವಾತಾವರಣವನ್ನು ಗಮನಿಸುತ್ತಿದ್ದೇನೆ ಮತ್ತು ಇಸ್ಲಾಂ ಎಂದರೆ ಶರಣಾಗತಿ ಶಾಂತಿ ಎಂಬ ಅರಿವು ತಿಳಿದಂತಾಗಿದೆ. ಇಂತಹ ಕಾರ್ಯಕ್ರಮಗಳನ್ನು ಪ್ರತಿ ವರ್ಷವೂ ಮಾಡಬೇಕು ಮತ್ತು ಎಲ್ಲರೂ ಇಲ್ಲಿಗೆ ಬರಬೇಕು ಎಂದು ಆಶಿಸುತ್ತೇನೆ” ಎಂದು ತಿಳಿಸಿದರು.
“ನಾನು ಇದೇ ರಸ್ತೆಯಲ್ಲಿ 25 ವರ್ಷಗಳಿಂದ ಅಂಗಡಿ ಇಟ್ಟುಕೊಂಡಿದ್ದೆ. ಈವರೆಗೆ ಮಸೀದಿ ಒಳಗಡೆ ಬಂದಿರಲಿಲ್ಲ. ಪ್ರೀತಿಯಿಂದ ಆಹ್ವಾನಿಸಿದ್ದರು. ಹಾಗಾಗಿ ಬಂದೆ. ತುಂಬಾ ಖುಷಿಯಾಯಿತು. ಮುಸ್ಲಿಮರು ಹಾಗೂ ಮಸೀದಿಯ ಬಗ್ಗೆ ತಿಳಿದುಕೊಂಡೆ” ಎಂದು ಸ್ಥಳೀಯ ವ್ಯಾಪಾರಿ ತಿಳಿಸಿದರು.
ಮಸೀದಿ ಸಂದರ್ಶನ ಕಾರ್ಯಕ್ರಮದಲ್ಲಿ ರೈತ ಸಂಘದ ಬಲ್ಲೂರ್ ರವಿಕುಮಾರ್, ಜಬೀನಾಖಾನಂ, ಕರಿಬಸಪ್ಪ, ಪ್ರಕಾಶ್, ಅಲ್ಲಾಭಕ್ಷ್, ಸಾಜಿದ್, ಶೋಯಬ್, ತಾರಿಕ್, ಮಸೀದಿ ಕಮಿಟಿಯ ಅಧ್ಯಕ್ಷ ಸೈಯದ್ ಮನ್ಸೂರ್, ಇನಾಯತುಲ್ಲ, ರಫೀಕ್, ಸೈಯದ್ ನಯಾಜ್, ನೂರುಲ್ಲಾ, ಸೈಯದ್, ಉಬೇಧುಲ್ಲ ಯಾಕೂಬ್ ಮತ್ತು ಇತರರು ಭಾಗವಹಿಸಿದ್ದರು.
