- ಕಾಡಾನೆ ಸಮಸ್ಯೆ ಪೀಡಿತ ಪ್ರದೇಶದಲ್ಲಿರುವ ಹಲಸುಲಿಗೆ ಗ್ರಾಮ
- ಶಾಸಕ ಸಿಮೆಂಟ್ ಮಂಜು ಶಾಲೆಗೆ ಭೇಟಿ ನೀಡುವಂತೆ ಒತ್ತಾಯ
ಬೇಸಿಗೆ ರಜೆ ಮುಗಿದು ತರಗತಿಗಳು ಆರಂಭವಾಗಿವೆ. ಲವಲವಿಕೆಯಿಂದ ಶಾಲೆಗಳತ್ತ ಬರುವ ಮಕ್ಕಳನ್ನು ಸ್ವಾಗತಿಸಲು ಅಗತ್ಯ ಸಿದ್ಧತೆ ಕೈಗೊಳ್ಳುವುದು ಶಿಕ್ಷಣ ಇಲಾಖೆ ಅಧಿಕಾರಿಗಳ ಜವಾಬ್ದಾರಿ. ಆದರೆ, ಇಲ್ಲೊಂದು ಸರ್ಕಾರಿ ಶಾಲೆ ಕನಿಷ್ಠ ಮೂಲ ಸೌಕರ್ಯಗಳೂ ಇಲ್ಲದೆ ನಲುಗುತ್ತಿದೆ.
ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಹಲಸುಲಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ದುಸ್ಥಿತಿಯ ಬಗ್ಗೆ ಗ್ರಾಮಸ್ಥ ಸಂದೇಶ್ ಎಂಬುವರು ಫೇಸ್ಬುಕ್ ಪೋಸ್ಟ್ ಹಾಕುವ ಮೂಲಕ ಶಾಸಕರು ಶಾಲೆಗೆ ಭೇಟಿ ನೀಡಿ ಅಗತ್ಯ ಮೂಲ ಸೌಕರ್ಯ ಒದಗಿಸಬೇಕು ಎಂದು ಒತ್ತಾಯಿಸಿದ್ದಾರೆ.
ಹಲಸುಲಿಗೆ ಗ್ರಾಮ ಕಾಡಾನೆ ಸಮಸ್ಯೆ ಪೀಡಿತ ಪ್ರದೇಶ. ಈ ಭಾಗದಲ್ಲಿ ನಿತ್ಯ ಕಾಡಾನೆಗಳು ಸಂಚಾರ ಮಾಡುತ್ತಲೇ ಇರುತ್ತವೆ. ಈ ಕಾರಣದಿಂದಾಗಿ ಗ್ರಾಮದ ಮಕ್ಕಳು ಪಟ್ಟಣದ ಶಾಲೆಗೆ ಹೋಗಿಬರುವುದು ಕಷ್ಟ. ಹಾಗಾಗಿ ಇರುವ ಒಂದು ಶಾಲೆಗಾದರೂ ಅಗತ್ಯ ಸೌಕರ್ಯ ಕಲ್ಪಿಸಿ ಎಂಬುದು ಅವರ ಆಗ್ರಹವಾಗಿದೆ.
ಶಾಲೆಯ ಫೋಟೊಗಳ ಜೊತೆಗೆ ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿರುವ ಸಂದೇಶ್, “ಇದು ನಮ್ಮ ಹಲಸುಲಿಗೆ ಪಂಚಾಯಿತಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಅವಸ್ಥೆ ಮತ್ತು ಅವ್ಯವಸ್ಥೆ. ಶಾಲೆಯ ಮುಖ್ಯ ದ್ವಾರದ ಬೋರ್ಡ್ ನೋಡಿ ಎಷ್ಟೊಂದು ಸುಂದರವಾಗಿದೆ. ಶೌಚಾಲಯ ಎಷ್ಟೊಂದು ಶುಚಿತ್ವ, ಅಚ್ಚುಕಟ್ಟಾಗಿ ಇದೆ” ಎಂದು ಪರೋಕ್ಷವಾಗಿ ಅವ್ಯವಸ್ಥೆಯ ಕುರಿತು ವ್ಯಂಗ್ಯವಾಡಿದ್ದಾರೆ.
“ಈ ಶಾಲೆಯ ಆವರಣದಲ್ಲಿ ಗಿಡಗುಂಟೆಗಳು ಬೆಳೆದು ನಿಂತಿವೆ. ಇದು ನಮ್ಮೂರಿನ ಹೆಮ್ಮೆಯ ಶಾಲೆ, ಕಟ್ಟಡ ನೋಡಿ ಎಷ್ಟು ಶೀತಿಲವಾಗಿದೆ, ಅನಾತಿ ದೂರದಲ್ಲಿ ಗ್ರಾಮ ಪಂಚಾಯಿತಿ ಕಚೇರಿ ಇದ್ದರೂ ಪಂಚಾಯಿತಿ ಅಧ್ಯಕ್ಷರಾಗಲಿ ಸದಸ್ಯರಾಗಲಿ ಈ ಬಗ್ಗೆ ಗಮನ ಹರಿಸಿಲ್ಲ” ಎಂದು ಆರೋಪಿಸಿದ್ದಾರೆ.
“ಸಕಲೇಶಪುರ ಕ್ಷೇತ್ರದಿಂದ ಮೂರು ಬಾರಿ ಗೆದ್ದು ಶಾಸಕರಾಗಿದ್ದ ಎಚ್ ಕೆ ಕುಮಾರಸ್ವಾಮಿ ಅವರನ್ನು ದೂರಿ ಎನು ಪ್ರಯೋಜನ ಇಲ್ಲ. ಯಾಕೆಂದರೆ ಇದು ಅವರ ಗಮನಕ್ಕೆ ಬಾರದ ವಿಷಯ. ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ ಸದಸ್ಯರು ಶಾಸಕರ ಗಮನಕ್ಕೆ ತಂದ್ದಿದ್ದರೆ ಈ ಶಾಲೆಗೆ ಅನುದಾನ ನಿಡುತ್ತಿದ್ದರೇನೊ” ಎಂದು ಜನ ಪ್ರತಿನಿಧಿಗಳ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ.
“ಸಕಲೇಶಪುರ ಕ್ಷೇತ್ರದ ಶಾಸಕ ಸಿಮೆಂಟ್ ಮಂಜು ಅವರು ಹಲಸುಲಿಗೆಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಗೆ ಮೂಲ ಸೌಕರ್ಯ ಕಲ್ಪಿಸುವ ಬಗ್ಗೆ ಗಮನಹರಿಸಬೇಕು. ಈ ಶಾಲೆಗೆ ಸುಸಜ್ಜಿತವಾದ ಶೌಚಾಲಯ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡಬೇಕು. ದಯವಿಟ್ಟು ಒಮ್ಮೆ ಈ ಶಾಲೆಗೆ ಭೇಟಿ ನೀಡಿ ಇಲ್ಲಿನ ಸಮಸ್ಯೆಗಳನ್ನು ಬಗೆಹರಿಸುವ ಪ್ರಯತ್ನ ಮಾಡಿ” ಎಂದು ಮನವಿ ಮಾಡಿರುವ ಅವರು, “ಇಲ್ಲವಾದರೆ ಸಾರ್ವಜನಿಕರೇ ಈ ಶಾಲೆಗೆ ಒಂದು ಉತ್ತಮ ಗುಣಮಟ್ಟದ ಶೌಚಾಲಯ ನಿರ್ಮಿಸುವ ಬಗ್ಗೆ ಯೋಚನೆ ಮಾಡಬೇಕಾದೀತು” ಎಂದು ಎಚ್ಚರಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೀದರ್ | ನಿವೇಶನ ಇದ್ದರೂ ಕನ್ನಡ ಭವನ ನಿರ್ಮಾಣಕ್ಕೆ ಹಿಂದೇಟು: ಶಾಂತಲಿಂಗ ಮಠಪತಿ