ಹಳೆಯ ವಾಹನಗಳ ನಂಬರ್ ಪ್ಲೇಟ್ಗಳನ್ನು ಬದಲಾಯಿಸಿ ಹೈ ಸೆಕ್ಯುರಿಟಿ ರಿಜಿಸ್ಟ್ರೇಷನ್ ಪ್ಲೇಟ್ (ಎಚ್ಎಸ್ಆರ್ಪಿ) ಅಳವಡಿಸುವಂತೆ ರಾಜ್ಯ ಸರ್ಕಾರ ಮೇ 31ರವರೆಗೆ ಗಡುವು ವಿಸ್ತರಿಸಿದೆ. ಆದರೆ, ಇದೀಗ ರಾಜ್ಯ ಸರ್ಕಾರವು ಖರೀದಿಸುತ್ತಿರುವ ಹೊಸ ಬಸ್ಸುಗಳಿಗೆ ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಇಲ್ಲದೆ ರಸ್ತೆಗೆ ಇಳಿಸಲಾಗುತ್ತಿದೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.
“ರಸ್ತೆ ಸಾರಿಗೆ ನಿಗಮಗಳು ಅಂತಹ ಬಸ್ಸುಗಳನ್ನು ರಸ್ತೆಯಲ್ಲಿ ಓಡಿಸುತ್ತಿವೆ. ಈ ಕ್ರಮವು ರಾಜ್ಯ ಮತ್ತು ದೇಶದ ಎಲ್ಲ ಸಾರಿಗೆ ಮತ್ತು ಸಾರಿಗೆಯೇತರ ವಾಹನಗಳಿಗೆ ಎಚ್ಎಸ್ಆರ್ಪಿ ಕಡ್ಡಾಯಗೊಳಿಸುವ ಕೇಂದ್ರ ಮೋಟಾರು ವಾಹನಗಳ ನಿಯಮಗಳು (ಸಿಎಂವಿಆರ್) 1989, ನಿಯಮ 50ನ್ನು ಸರ್ಕಾರಿ ಸ್ವಾಮ್ಯದ ಸಾರಿಗೆ ನಿಗಮಗಳು ಉಲ್ಲಂಘಿಸುತ್ತಿರುವುದು ಕಳವಳವನ್ನು ಹುಟ್ಟುಹಾಕಿದೆ” ಎನ್ನುತ್ತಿದ್ದಾರೆ.
“ಸರ್ಕಾರಿ ನಿಗಮಗಳು ಸರ್ಕಾರದ ನಿಯಮಗಳನ್ನು ಪಾಲಿಸದಿರುವುದು ಅನ್ಯಾಯ. ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಇಲ್ಲದ ಬಸ್ಗಳು ರಸ್ತೆಗಿಳಿದರೆ, ಹಳೆಯ ವಾಹನಗಳಿಗೆ ಎಚ್ಎಸ್ಆರ್ಪಿ ಅಳವಡಿಸುವ ಅಗತ್ಯವಿಲ್ಲವೆಂಬ ತಪ್ಪು ಸಂದೇಶವನ್ನು ಸಾರ್ವಜನಿಕರಿಗೆ ನೀಡುತ್ತದೆ. ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಕೆಕೆಆರ್ಟಿಸಿ ಕೂಡ ಎಚ್ಎಸ್ಆರ್ಪಿಗಳಿಲ್ಲದ ಹೊಸ ಬಸ್ಗಳನ್ನು ರಸ್ತೆಗಿಳಿಸುವಂತಿದೆ. ಇದು ನಿಜಕ್ಕೂ ವಿನ್ಯಾಸದ ದೋಷ ಅಥವಾ ಅಧಿಕಾರಿಗಳ ಮೌಲ್ಯಮಾಪನದ ಕೊರತೆಯಾಗಿರಬಹುದು” ಎಂದು ಕಲಬುರಗಿಯ ಟೆಕ್ಕಿ ಮತ್ತು ಸಾಮಾಜಿಕ ಕಾರ್ಯಕರ್ತ ಸುನಿಲ್ ಕುಲಕರ್ಣಿ ಅಸಮಾಧಾನ ವ್ಯಕ್ತಪಡಿಸಿದರು.
“ಆಟೋಮೊಬೈಲ್ ಮೂಲ ಉಪಕರಣ ತಯಾರಕರಿಂದ (ಒಇಎಂ) ಆರ್ಟಿಸಿಗಳು ಚಾಸಿಸ್ ಸಂಖ್ಯೆ ಖರೀದಿಸಿ ತಮ್ಮ ಕಾರ್ಯಾಗಾರಗಳಲ್ಲಿ ವಾಹನಗಳನ್ನು ನಿರ್ಮಿಸುತ್ತವೆ ಅಥವಾ ಹೊರಗುತ್ತಿಗೆ ನೀಡುತ್ತವೆ. ಐಷಾರಾಮಿ ಬಸ್ಸುಗಳನ್ನು ಹೊರತುಪಡಿಸಿ, ಎಲ್ಲ ಬಸ್ಗಳು ಅಂತರ್ ನಿರ್ಮಿತ ನಂಬರ್ ಪ್ಲೇಟ್ಗಳಿಲ್ಲದೆ ಬರುತ್ತವೆ. ಬಸ್ ತಯಾರಿಯಾದ ಬಳಿಕ ಅವರು ಆರ್ಟಿಒದಲ್ಲಿ ನೋಂದಣಿಗೆ ಹೋಗುತ್ತಾರೆ. ಅಲ್ಲಿ ಎಚ್ಎಸ್ಆರ್ಪಿ ಫೋಟೋವನ್ನು https://parivahan.gov.in ನಲ್ಲಿ ಅಪ್ಲೋಡ್ ಮಾಡಬೇಕು. ಒಇಎಂಗಳು ಮತ್ತು ಬಸ್ ತಯಾರಕರ ನಡುವಿನ ಸಮನ್ವಯದ ಕೊರತೆಯಿಂದ ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಅಳವಡಿಸದ ಬಸ್ಗಳು ರಸ್ತೆಗಿಳಿಯಲು ಕಾರಣವಾಗಬಹುದು. ಅನೇಕ ಖಾಸಗಿ ಬಸ್ಸುಗಳು ಮತ್ತು ಭಾರೀ ವಾಹನಗಳು ಈ ಕಾರ್ಯ ವಿಧಾನವನ್ನು ಅನುಸರಿಸುತ್ತಿವೆ” ಎಂದು ಬೆಂಗಳೂರಿನ ಆಟೋಮೋಟಿವ್ ಸಲಹೆಗಾರರೊಬ್ಬರು ಮಾಧ್ಯವೊಂದಕ್ಕೆ ತಿಳಿಸಿದ್ದಾರೆ.
ಆರ್ಟಿಒದಲ್ಲಿ ನೋಂದಾಯಿಸಬೇಕಾದ ಅಗತ್ಯವಿಲ್ಲದ ಸಾಂವಿಧಾನಿಕ ಮುಖ್ಯಸ್ಥರು ಮತ್ತು ಸೇನಾ ಅಧಿಕಾರಿಗಳು ಬಳಸುವ ವಾಹನಗಳಿಗೆ ಮಾತ್ರ ಎಲ್ಲ ನಂಬರ್ ಪ್ಲೇಟ್ಗಳಿಂದ ವಿನಾಯಿತಿ ನೀಡಲಾಗಿದೆ. ಅಸ್ತಿತ್ವದಲ್ಲಿರುವ ನಿಯಮಗಳ ಪ್ರಕಾರ, ಆರ್ಟಿಒ ಅಧಿಕಾರಿಗಳು ಅಥವಾ ಸಂಚಾರ ಪೊಲೀಸರು 2019 ಏಪ್ರಿಲ್ 1ರ ನಂತರ ತಯಾರಿಸಿದ ಮತ್ತು ಎಚ್ಎಸ್ಆರ್ಪಿಗಳಿಲ್ಲದ ಬಸ್ಗಳಿಗೆ ದಂಡ ವಿಧಿಸಬಹುದು” ಎಂದು ಕಾನೂನು ವಿಷಯಗಳ ಬರಹಗಾರ್ತಿ ಉಮಾ ವೈದ್ಯ ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ಕಲಬುರಗಿ | ಕಳಪೆ ಕಾಮಗಾರಿ ಆರೋಪ; ಕೆಲಸ ನಿಲ್ಲಿಸಲು ಆಗ್ರಹ
ಹುಬ್ಬಳ್ಳಿಯ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಭರತ್ ಎಸ್ ಮಾತನಾಡಿ, “ಹೊಸ ಬಸ್ಗಳಲ್ಲಿ ಎಚ್ಎಸ್ಆರ್ಪಿ ಅಳವಡಿಸಲಾಗುವುದು. ಯಾವುದೇ ವಿಭಾಗವು ಹೊಸ ವಾಹನಗಳಿಗೆ ಎಚ್ಎಸ್ಆರ್ಪಿಗಳನ್ನು ಹೊಂದಿಲ್ಲದಿದ್ದರೆ, ಅದನ್ನು ಶೀಘ್ರದಲ್ಲೇ ಸರಿಪಡಿಸಲಾಗುವುದು” ಎಂದು ಹೇಳಿದರು.