ಕೇಂದ್ರ ಬಿಜೆಪಿ ಮತ್ತು ಪ್ರಧಾನಿ ಮೋದಿಯವರ ಹತ್ತು ವರ್ಷದ ಸಾಧನೆ, ಸುಳ್ಳು ಭರವಸೆ ಹಾಗೂ ಧಾರವಾಡ ಲೋಕಸಭಾ ಕ್ಷೇತ್ರದ ಸಂಸದ ಪ್ರಲ್ಹಾದ್ ಜೋಶಿಯವರು ಮಹದಾಯಿ ಯೋಜನೆ ಕುರಿತು, ಕುತಂತ್ರ ಮಾಡುತ್ತ ಬಂದಿದ್ದಾರೆ ಎಂದು ಲಕ್ಷ್ಮಣ ಬಕ್ಕಾಯಿ ಆರೋಪಿಸಿದರು.
ಧಾರವಾಡದಲ್ಲಿ ಈದಿನ.ಕಾಮ್ ಜೊತೆ ಮಾತನಾಡಿದ ಅವರು, ಮೇರಾ ಭಾರತ್ ಮೆರಾ ಪರಿವಾರ ಎಂದು ಹೇಳುವ ಪ್ರಧಾನಮಂತ್ರಿಗಳು ಉತ್ತರ ಭಾರತಕ್ಕೆ ಲಕ್ಷಾಂತರ ಕೋಟಿ ಅನುದಾನ ನೀಡಿ, ಮಂದಿರ ಉದ್ಘಾಟನೆ ಮಾಡುವುದರ ಜೊತೆಗೆ ವಿಶೇಷ ಅದ್ಯತೆ ನೀಡಿ ಉತ್ತರ ಭಾರತವನ್ನು ಮಾತ್ರ ಅಭಿವೃದ್ಧಿಗೊಳಿಸಿದ ಅವರಿಗೆ ಮಣಿಪುರ, ದಕ್ಷಿಣ ಭಾರತವೇಕೆ ಕಾಣಲಿಲ್ಲ? ಎಂದು ಪ್ರಶ್ನಿಸಿದರು.
ಕಳೆದ ಐದು ವರ್ಷಗಳಿಂದ ಉತ್ತರ ಕರ್ನಾಟಕ ಭಾಗದ ರೈತರು ಮಹದಾಯಿ ಕಳಸಾ-ಬಂಡೂರಿ ಹೋರಾಟವನ್ನು ಮಾಡುತ್ತ ಬಂದಿದ್ದರೂ, ರಾಜ್ಯ ಸರ್ಕಾರ ಬಜೆಟ್ ನೀಡಿದ್ದರೂ, ನ್ಯಾಯಾಲಯ ನ್ಯಾಯ ನೀಡಿದ್ದರೂ ಇವತ್ತಿಗೂ ಮಹದಾಯಿ ಯೋಜನೆ ಜಾರಿಗೆ ತರಲಾರದೇ ರೈತರ ಆದಾಯ ಎರಡುಪಟ್ಟು ಮಾಡುತ್ತೇನೆಂದು ಪ್ರಧಾನಿ ಮೋದಿಯವರು ಸುಳ್ಳು ಹೇಳುತ್ತಿದ್ದಾರೆ ಎಂದರು.
ಈ ಕುರಿತು ಧಾರವಾಡದ ಎಂಪಿ ಪ್ರಲ್ಹಾದ್ ಜೋಶಿಯವರು ಪರಿಸರ ಮತ್ತು ವನ್ಯಜೀವಿ ಇಲಾಖೆಯ ಅನುಮತಿಯನ್ನು ಒಂದೇ ತಿಂಗಳಲ್ಲಿ ಪಡೆಯುತ್ತೇನೆ ಎಂದು ಹೇಳಿ, ಇಂದಿಗೆ 6 ತಿಂಗಳು ಗತಿಸಿದರೂ ಉಪಯೋಗವಾಗಿಲ್ಲ. ಮಹದಾಯಿ ಯೋಜನೆ ಹೋರಾಟದ ಸಮಸ್ಯೆಯನ್ನು ಜೀವಂತವಿಟ್ಟರೆ ಸುಲಭವಾಗಿ ಮತ ಕೇಳಬಹುದು ಮತ್ತು ಮಹದಾಯಿ ಯೋಜನೆ ಸಮಸ್ಯೆ ಬಗೆಹರಿಸಿದರೆ ರಾಜಕೀಯ ಮಾಡಲು ಬೇರೆ ಸಮಸ್ಯೆಯಿಲ್ಲ ಎಂದು ಈ ಸಮಸ್ಯೆಯನ್ನು ಜೀವಂತವಾಗಿರಿಸುವುದೇ ಧಾರವಾಡದ ಎಂಪಿಯವರ ಮೂಲ ಉದ್ದೇಶ ಎಂದು ಕಿಡಿಕಾರಿದ ಅವರು, ಬಿಜೆಪಿಯ ತಂತ್ರ ಮತ್ತು ಕುತಂತ್ರದಿಂದ ಕ್ಷೇತ್ರದ ಎಂಪಿ ಪ್ರಲ್ಹಾದ್ ಜೋಶಿಯವರು ನೇರವಾಗಿ ಯೋಜನೆ ತಡೆಯಿಡಿಯುತ್ತಿದ್ದಾರೆ ಎಂದು ಆರೋಪಿಸಿದರು.
ಇನ್ನು ಪ್ರಧಾನಿ ಮೋದಿಯವರು ಹತ್ತು ವರ್ಷಗಳಲ್ಲಿ ನೋಟ್ ಬ್ಯಾನ್, ಕಪ್ಪು ಹಣ ವಾಪಸ್ ತರುತ್ತೇವೆ, ವರ್ಷಕ್ಕೆ ಎರಡು ಕೋಟಿ ಉದ್ಯೋಗ ತರುತ್ತೇವೆ, ಉಜ್ವಲಾ ಯೋಜನೆಯಡಿ ಹತ್ತು ಕೋಟಿ ಗ್ಯಾಸ್ ಕೊಡುತ್ತೇವೆ ಎಂದರು. ಆ ಗ್ಯಾಸ್ ಸಿಲೆಂಡರ್ ಗಳು ಇವತ್ತು ಬಡವರು ತುಂಬಿಸಲು ಸಾದ್ಯವಾಗದೆ ಮೂಲೆ ಸೇರಿವೆ. ಕಾರಣ, 400 ಇದ್ದ ಸಿಲೆಂಡರ್ ಬೆಲೆ 1200 ಮಾಡಿಟ್ಟಿದ್ದೇ ಮೋದಿಯವರ ದೊಡ್ಡ ಸಾಧನೆ ಎಂದರು.
ಕಪ್ಪು ಹಣ ತರುತ್ತೇವೆಂದು ತರಲಿಲ್ಲ. ಬಡವರ ಅಕೌಂಟ್ಗೆ 15 ಲಕ್ಷ ರೂಪಾಯಿ ಜಮಾ ಮಾಡುತ್ತೇವೆಂದು ಹೇಳಿ ಹತ್ತು ವರ್ಷಗಳು ಕಳೆಯಿತು. ಹೀಗೆ ಹೇಳುತ್ತ ಹೋದಂತೆ ಸುಳ್ಳಿನ ಪಟ್ಟಿಯೆ ಬೆಳೆಯುತ್ತದೆ. ಸುಳ್ಳು ಹೇಳಲೂ ಒಂದು ಇತಿಮಿತಿ ಇರಬೇಕು, ನಿಮಗೆ ಕಿಂಚಿತ್ತಾದರೂ ನೈತಿಕತೆ ಇದೆಯೆ ಮೋದಿಯವರೇ? ಎಂದು ಆಕ್ರೋಶ ವ್ಯಕ್ತಪಡಿಸಿದರು.