ವಿಮಾ ಹಣವನ್ನು ಮೃತ ವ್ಯಕ್ತಿಯ ಪತ್ನಿಗೆ ನೀಡಿರುವ ವಿಮಾ ಕಂಪನಿಯ ಕ್ರಮಕ್ಕೆ ಧಾರವಾಡ ಜಿಲ್ಲಾ ಗ್ರಾಹಕರ ಆಯೋಗವು ಆಕ್ಷೇಪಿಸಿದ್ದು, ವಿಮಾ ಪಾಲಿಸಿಯ ನಾಮಿನಿದಾರ ಆಗಿರುವ ಮೃತ ವ್ಯಕ್ತಿಯ ತಂದೆಗೂ ವಿಮಾ ಹಣ ಪಾವತಿಸುವಂತೆ ಸೂಚಿಸಿದೆ.
2017ರಲ್ಲಿ ಸರ್ವ ಸುರಕ್ಷಾ ಲಾಭದ ವಿಮಾ ಪಾಲಿಸಿಯನ್ನು ಎಚ್ಡಿಎಫ್ಸಿ ಎರಗೋ ವಿಮಾ ಕಂಪನಿಯಿಂದ ಹುಬ್ಬಳ್ಳಿಯ ಆನಂದ ನಗರ ನಿವಾಸಿಯಾಗಿದ್ದ ಆಶೀಫ್ ಮುಲ್ಲಾ ಪಡೆದಿದ್ದರು. ಅದು 10 ಲಕ್ಷ ರೂ. ಮೌಲ್ಯದ ಪಾಲಿಸಿಯಾಗಿತ್ತು. ವಿಮಾದಾರ 7,646 ರೂ. ಹಣ ಪ್ರೀಮಿಯಂ ಕಟ್ಟಿದ್ದು, ಈ ಪಾಲಿಸಿಗೆ ವಿಮಾದಾರರಾಗಿದ್ದ ಆಸೀಫ್ ತಮ್ಮ ತಂದೆ ಅಲ್ಲಾಭಕ್ಷ ಮುಲ್ಲಾ ಅವರನ್ನು ನಾಮಿನಿಯನ್ನಾಗಿ ಮಾಡಿದ್ದರು.
2019ರ ಡಿಸೆಂಬರ್ 19ರಂದು ಗದಗ ಹುಲಕೋಟಿ ಹತ್ತಿರ ಹೋಗುವಾಗ ಲಾರಿ ಮತ್ತು ಬೈಕಿಗೆ ಢಿಕ್ಕಿಯಾಗಿ ವಿಮಾದಾರ ಆಸೀಫ್ ಅಪಘಾತದಲ್ಲಿ ಮೃತಪಟ್ಟಿದ್ದರು. ಈ ಬಗ್ಗೆ ಗದಗ ಪೊಲೀಸ್ ಠಾಣೆಯಲ್ಲಿ ಲಾರಿ ಚಾಲಕನ ಮೇಲೆ ಪ್ರಕರಣ ದಾಖಲಾಗಿತ್ತು.
ಈ ಎಲ್ಲ ದಾಖಲೆಗಳನ್ನು ಪಡೆದು ನಾಮಿನಿಯಾಗಿದ್ದ ತಂದೆ ಅಲ್ಲಾಭಕ್ಷ ಮುಲ್ಲಾ ಅವರು, ಮೃತನ ವಿಮೆ ಕ್ಲೈಮ್ ಮಾಡಿಕೊಡುವಂತೆ ಅರ್ಜಿ ಸಲ್ಲಿಸಿದ್ದರು. ಆದರೆ ವಿಮಾ ಕಂಪನಿಯು ಈ ಕ್ಲೈಮ್ ಅರ್ಜಿಯನ್ನು ಪರಿಗಣಿಸದೆ ಮೃತನ ಹೆಂಡತಿ ನೂರ್ ಜಹಾನಬಿ ಅವರಿಗೆ 10 ಲಕ್ಷ ರೂ. ವಿಮಾ ಹಣ ಸಂದಾಯ ಮಾಡಿತ್ತು.
ಈ ಹಿನ್ನೆಲೆಯಲ್ಲಿ ತಂದೆ ಅಲ್ಲಾಭಕ್ಷ ಮುಲ್ಲಾ ಅವರು, “ಮೃತನ ವಿಮಾ ಪಾಲಿಸಿಗೆ ನಾಮಿನಿ ಆಗಿರುವುದರಿಂದ ವಿಮಾ ಹಣವನ್ನು ತನಗೆ ಕೊಡಬೇಕಾಗಿತ್ತು. ಆದರೆ ವಿಮಾ ಕಂಪನಿ ಅವರು ತನ್ನ ಕ್ಲೈಮನ್ನು ಧಿಕ್ಕರಿಸಿ ಮೃತನ ಹೆಂಡತಿಗೆ ವಿಮಾ ಹಣ 10 ಲಕ್ಷ ರೂ. ಕೊಟ್ಟಿರುವುದು ತಪ್ಪು. ಅಂತಹ ವಿಮಾ ಕಂಪನಿಯವರ ನಡವಳಿಕೆ ಗ್ರಾಹಕರ ರಕ್ಷಣಾ ಕಾಯ್ದೆ ಅಡಿ ಸೇವಾ ನ್ಯೂನ್ಯತೆಯಾಗುತ್ತದೆ. ಹೀಗಾಗಿ ವಿಮಾ ಕಂಪನಿಯವರ ಮೇಲೆ ಸೂಕ್ತ ಕ್ರಮ ಕೈಗೊಂಡು ತನಗೆ ಪರಿಹಾರ ಕೊಡಿಸಬೇಕು” ಎಂದು ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸಿದ್ದರು.
ದೂರಿನನ್ವಯ ಅಧ್ಯಕ್ಷ ಈಶಪ್ಪ ಭೂತೆ ಮತ್ತು ಸದಸ್ಯರುಗಳಾದ ವಿಶಾಲಾಕ್ಷಿ ಬೋಳಶೆಟ್ಟಿ, ಪ್ರಭು ಹಿರೇಮಠ ಒಳಗೊಂಡ ಆಯೋಗವು ವಿಚಾರಣೆ ಕೈಗೊಂಡಿದ್ದು, “ದೂರುದಾರ ಅಲ್ಲಾಭಕ್ಷ ಮೃತ ಆಸೀಫ್ ಮುಲ್ಲಾರವರ ತಂದೆಯಾಗಿದ್ದು, ವಿಮಾ ಪಾಲಿಸಿಗೆ ನಾಮಿನಿಯೂ ಆಗಿದ್ದಾರೆ. 2015ರಲ್ಲಿ ಆಗಿರುವ ವಿಮಾ ಕಾಯ್ದೆಯ ತಿದ್ದುಪಡಿಯಂತೆ ವಿಮಾದಾರ ಮೃತನಾದಲ್ಲಿ ವಿಮಾ ಪಾಲಸಿಯ ಹಣ ಪಡೆಯಲು ನಾಮಿನಿ ಮಾತ್ರ ಅರ್ಹರಿದ್ದಾರೆ. ಆದರೆ ಈ ಪ್ರಕರಣದಲ್ಲಿ ನಾಮಿನಿಯನ್ನು ಬಿಟ್ಟು, ಮೃತನ ಹೆಂಡತಿ ನೂರಜಹಾನಬಿಗೆ ವಿಮಾ ಕಂಪನಿಯವರು ಹಣ ಸಂದಾಯ ಮಾಡಿರುವುದು ವಿಮಾ ನಿಯಮಕ್ಕೆ ವಿರುದ್ಧವಾಗಿದೆ” ಎಂದು ತಿಳಿಸಿದರು.
“ವಿಮಾ ಕಂಪನಿಯವರ ನಡವಳಿಕೆ ಗ್ರಾಹಕರ ರಕ್ಷಣಾ ಕಾಯ್ದೆ ಅಡಿ ಸೇವಾ ನ್ಯೂನ್ಯತೆ ಆಗುತ್ತದೆ. ತಮ್ಮದೇ ವಿಮಾ ನಿಯಮಕ್ಕೆ ವ್ಯತಿರಿಕ್ತವಾಗಿ ಮೃತನ ಹೆಂಡತಿಗೆ ವಿಮಾ ಹಣ ನೀಡಿರುವುದನ್ನು ಆಯೋಗ ಒಪ್ಪಿಕೊಂಡಿಲ್ಲ. ವಿಮಾ ನಿಯಮದಂತೆ ನಾಮಿನಿಯಾದ ದೂರುದಾರ ವಿಮಾ ಪಾಲಿಸಿ ಮೊತ್ತ ₹10 ಲಕ್ಷ ಪಡೆಯಲು ಅರ್ಹರಿದ್ದಾರೆ” ಎಂದು ಆಯೋಗ ತೀರ್ಪು ನೀಡಿದೆ.
ಈ ಸುದ್ದಿ ಓದಿದ್ದೀರಾ? ಕೆಎಸ್ಒಯು ಹಗರಣ | ಎಫ್ಐಆರ್ ದಾಖಲು; ಸಿಬಿಐ ತನಿಖೆ ಆರಂಭ
“ತೀರ್ಪು ನೀಡಿದ ಒಂದು ತಿಂಗಳ ಒಳಗಾಗಿ ನಾಮಿನಿಯಾದ ದೂರುದಾರನಿಗೆ ವಿಮಾ ಕಂಪನಿ ವಿಮಾ ಮೊತ್ತ ₹10 ಲಕ್ಷ ಕೊಡುಬೇಕು. ದೂರುದಾರರಿಗೆ ಆಗಿರುವ ಅನಾನುಕೂಲ ಮತ್ತು ಮಾನಸಿಕ ತೊಂದರೆಗಾಗಿ ₹50,000 ಪರಿಹಾರ ಮತ್ತು ₹5,000 ಪ್ರಕರಣದ ಖರ್ಚು ವೆಚ್ಚ ನೀಡಬೇಕು” ಎಂದು ಆಯೋಗ ತಿಳಿಸಿದೆ.
“ಒಂದು ತಿಂಗಳ ಒಳಗಾಗಿ ₹10ಲಕ್ಷ ವಿಮಾ ಮೊತ್ತ ಕೊಡಲು ವಿಫಲರಾದಲ್ಲಿ ತೀರ್ಪು ನೀಡಿದ ದಿನಾಂಕದಿಂದ ವಿಮಾ ಮೊತ್ತದ ಮೇಲೆ ಶೇ.8ರಂತೆ ಬಡ್ಡಿ ಲೆಕ್ಕ ಹಾಕಿ ಕೊಡಬೇಕು” ಎಂದು ಆಯೋಗ ಎದುರುದಾರರಿಗೆ ಆದೇಶಿಸಿದೆ.