ಹಿಜಾಬ್ ಹಾಗೂ ಇತರ ವಿಚಾರಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳು ʼಧರ್ಮ ದಂಗಲ್ʼ ಎಂಬ ಪದ ಬಳಸುತ್ತಿವೆ. ಅದು ದಂಗಲ್ ಹೇಗೆ ಆಗುತ್ತದೆ. ಸಿಎಂ ಹೇಳಿರುವುದು ಕಾನೂನಾತ್ಮಕವಾಗಿದೆ. ಅದಕ್ಕೆ ದಂಗಲ್ ಎಂಬ ಪದ ಬಳಸಿ ಏಕೆ ಹೇಳುತ್ತಿರಿ? ಎಂದು ಮಾಧ್ಯಮಗಳ ವಿರುದ್ಧ ಸಚಿವ ಸಂತೋಷ್ ಲಾಡ್ ಗರಂ ಆದರು.
ಹಿಜಾಬ್ ನಿಷೇಧ ಆದೇಶ ವಾಪಸ್ ಪಡೆಯುವ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿರುವ ಹೇಳಿಕೆಗೆ ಸಂಬಂಧಿಸಿದಂತೆ ಧಾರವಾಡದಲ್ಲಿ ಸಚಿವ ಸಂತೋಷ್ ಲಾಡ್ ಪ್ರತಿಕ್ರಿಯೆ ನೀಡಿ ಮಾತನಾಡಿದರು.
“ಧರ್ಮ ದಂಗಲ್ ಎಂದರೇನು? ಅದರಲ್ಲಿ ಧರ್ಮ ದಂಗಲ್ ಏನಾಗಿದೆ? ಪದೇ ಪದೆ ಮಾಧ್ಯಮಗಳು ಧರ್ಮ ದಂಗಲ್ ಎಂಬ ಪದ ಬಳಸುತ್ತಿವೆ. ಇದು ಎಷ್ಟು ಸರಿ? ಕಾನೂನಾತ್ಮಕ, ಸಂವಿಧಾನಾತ್ಮಕವಾಗಿ ಆದೇಶ ವಾಪಸ್ ಪಡೆಯಲು ಅವಕಾಶವಿದೆ. ಅದರಲ್ಲಿ ಸಿಎಂ ತಪ್ಪೇನಿದೆ? ವಿರೋಧ ಪಕ್ಷಗಳು ವಿರೋಧ ಮಾಡುತ್ತವೆ ಮಾಡಲಿ” ಎಂದರು.
“ನಾನೂ ಒಬ್ಬ ಹಿಂದೂ ಅಲ್ಲವಾ? ನಾನೇನು ಅದಕ್ಕೆ ವಿರೋಧ ಮಾಡುತ್ತಿಲ್ಲ. ಮಾಧ್ಯಮದಲ್ಲೂ ಹಿಂದೂಗಳಿದ್ದಾರೆ ಅವರೂ ವಿರೋಧ ಮಾಡುತ್ತಾರಾ? ನಿಮ್ಮ ನಿಲುವು ಏನು” ಎಂದು ಮಾಧ್ಯಮದವರನ್ನೇ ಪ್ರಶ್ನಿಸಿದರು.
“ಮುಸ್ಲಿಂ ತುಷ್ಟೀಕರಣ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದವರು ಮುಸ್ಲಿಂ ತುಷ್ಟೀಕರಣ ಎಂಬುದು ವಿರೋದ ಪಕ್ಷಗಳ ದೃಷ್ಟಿಕೋನವಾಗಿದೆ. ʼಸಬ್ ಕಾ ಸಾಥ್ ಸಬ್ ಕಾ ವಿಕಾಸ್ʼ ಎಂದರೇನು? ಹಿಂದೂ, ಮುಸ್ಲಿಂ, ಸಿಖ್, ಬುದ್ಧ ಎಲ್ಲರನ್ನೂ ಒಂದೇ ರೀತಿ ನೋಡಿಕೊಳ್ಳುತೇವೆ ಎಂಬುದಲ್ಲವೇ?” ಎಂದರು.
ಈ ಸುದ್ದಿ ಓದಿದ್ದೀರಾ? ಉಡುಪಿ | ಅಕ್ರಮವಾಗಿ ಹೂಳಲಾದ ಎಂಡೋಸಲ್ಫಾನ್ ಪ್ರಕರಣ; ನೋಟಿಸ್ ಜಾರಿ
“ಹಿಜಾಬ್ ನಿಷೇಧ ಹಿಂಪಡೆಯುವುದು ಸೇರಿದಂತೆ ಇತರೆ ನಿಯಮಗಳನ್ನು ಕಾನೂನಾತ್ಮಕವಾಗಿ ಪರಿಶೀಲನೆ ಮಾಡುತ್ತೇವೆ. ಸಂವಿಧಾನ ಬದ್ಧವಾಗಿ ಯಾವ ರೀತಿ ಇರಬೇಕು ಅಂತಿದೆಯೋ ಅದೇ ರೀತಿ ಮಾಡುತ್ತಾರೆ. ಅದೇ ರೀತಿಯಲ್ಲಿ ಮಾಡಲು ಸಿಎಂ ಪರಿಶೀಲಿಸುತ್ತಿದ್ದಾರೆ” ಎಂದರು.